ಸಾರಾಂಶ
ಹಿಂದೆ ವಯಸ್ಸಾದವರು ಮಾತ್ರ ಯೋಗ ಮಾಡಬೇಕು ಎನ್ನುವ ಮಾತಿತ್ತು. ಆದರೆ ಇಂದು ಎಲ್ಲರೂ ಯೋಗದ ಮೊರೆ ಹೋಗಿದ್ದಾರೆ. ಒಂದು ಸಲ ಯೋಗ ಕಲಿತುಕೊಂಡರೆ ಜೀವನ ಪೂರ್ಣ ಆರೋಗ್ಯವಾಗಿ ಇರಬಹುದು. ಆಧ್ಯಾತ್ಮ ಹೊರಗಡೆಯಿಲ್ಲ, ಅದು ನಮ್ಮ ಒಳಗಡೆಯೇ ಇದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.
ರಾಣಿಬೆನ್ನೂರು: ಹಿಂದೆ ವಯಸ್ಸಾದವರು ಮಾತ್ರ ಯೋಗ ಮಾಡಬೇಕು ಎನ್ನುವ ಮಾತಿತ್ತು. ಆದರೆ ಇಂದು ಎಲ್ಲರೂ ಯೋಗದ ಮೊರೆ ಹೋಗಿದ್ದಾರೆ. ಒಂದು ಸಲ ಯೋಗ ಕಲಿತುಕೊಂಡರೆ ಜೀವನ ಪೂರ್ಣ ಆರೋಗ್ಯವಾಗಿ ಇರಬಹುದು. ಆಧ್ಯಾತ್ಮ ಹೊರಗಡೆಯಿಲ್ಲ, ಅದು ನಮ್ಮ ಒಳಗಡೆಯೇ ಇದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು. ಶನಿವಾರ ಇಲ್ಲಿ ಕರ್ನಾಟಕ ವೈಭವ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಯುವಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯೋಗದಿಂದ ನಿರೋಗ, ಆರೋಗ್ಯವಂತ ದೇಹದಿಂದ ಮಾತ್ರ ಈಶ ಸೇವೆ- ದೇಶ ಸೇವೆ ಎರಡನ್ನೂ ಮಾಡಬಹುದು. ಭಗವಂತ ನೀಡಿದ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಯೋಗ ಪರಿಣಾಮಕಾರಿ ಮಾರ್ಗ ಎಂದರು.ಚಲನಚಿತ್ರ ನಟಿ ಅಂಕಿತ ಅಮರ ಮಾತನಾಡಿ, ದೇಹದ ಬಗ್ಗೆ ಆಲೋಚನೆ ಮಾಡಬೇಕು. ನಿಮಗೆ ನಿಮ್ಮ ಬಗ್ಗೆ ಮಾಹಿತಿ ಇರಬೇಕು. ಮನಸ್ಸು ಚಂಚಲವಾಗಿದ್ದು ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅನಗತ್ಯ. ಜೀವನದಲ್ಲಿ ನಮ್ಮ ಪಾತ್ರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಆಧುನಿಕತೆ ಅಳವಡಿಸಿಕೊಳ್ಳಬಹುದು ಎಂದರು.ಕಾರ್ಗಿಲ್ ಯುದ್ಧದ ಸಮಯದಲ್ಲಿ ತಾವು ಎದುರಿಸಿದ ಪ್ರಸಂಗಗಳನ್ನು ಮಾಜಿ ಸೈನಿಕ ನವೀನ ನಾಗಪ್ಪ ಎಲ್ಲರಿಗೂ ಮನಮುಟ್ಟುವಂತೆ ವಿವರಿಸಿದರು. ದಾವಣಗೆರೆ ತಪೋವನ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ನಿರಂಜನ ಪೂಜಾರ ಮತ್ತಿತರರು ವೇದಿಕೆಯಲ್ಲಿದ್ದರು.