ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆಯೆಂದು ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ತಿಳಿಸಿದರು.ನಗರದ ಸೇವಾ ಸೌಧದಲ್ಲಿ ಶುಕ್ರವಾರ ಬೆಳಗ್ಗೆ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸ್ಥಳೀಯ ಪಂತಜಲಿ ಯೋಗ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸುವುದರ ಜೊತೆಗೆ ಭಾರತದ ಸಂಸ್ಕೃತಿಯನ್ನು ಕೂಡ ಯೋಗದ ಮೂಲಕ ಪರಿಚಯ ಮಾಡಲಾಗಿದೆ. ಯೋಗದಿಂದ ರೋಗ ದೂರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಸದೃಢವಾಗಿ ಹೊಂದಬೇಕು, ಯೋಗ ಸರ್ವರೋಗಕ್ಕೂ ಮದ್ದು ಎಂಬುದನ್ನು ಯಾರು ಮರೆಯಬಾರದು. ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತಿ ದಿನ ಜೀವನದ ಅವಿಭಾಜ್ಯ ಅಂಗವಾಗಿ ರೂಢಿಸಿಕೊಳ್ಳಬೇಕು ಎಂದರು.ಯೋಗವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿರುವುದರ ಹಿಂದೆ ಮೋದಿ ಅವರ ಕೊಡುಗೆ ಅಪಾರವಾದದು. 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗ ಗುರುಗಳಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದ ಅವರು, ಯೋಗ ಮಾಡಿ ಎಲ್ಲರೂ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿಡ್ಲಘಟ್ಟ ಬಿಜೆಪಿ ಕಚೇರಿಯಲ್ಲಿ ಯೋಗ ಗುರುಗಳಾದ ಶ್ರೀ ಶ್ರೀಕಾಂತ್, ಕೇಶವ್ ಮೂರ್ತಿ ಮತ್ತು ರಮಣ ರವರ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಸಲಾಯಿತು.ಮಾಜಿ ಶಾಸಕ ಎಂ ರಾಜಣ್ಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಗೌಡ, ನಗರ ಅಧ್ಯಕ್ಷ ನರೇಶ್ , ಪ್ರಧಾನ ಕಾರ್ಯದರ್ಶಿಗಳಾದ ರವಿಚಾರಿ, ನಾಗೇಶ್ , ರೈತ ಮೋರ್ಚಾ ಅಧ್ಯಕ್ಷ ವೆಂಕಟ್ ರೆಡ್ಡಿ , ಮಹಿಳಾ ಮೋರ್ಚಾ ಅಧ್ಯಕ್ಷರಾದ ತ್ರಿವೇಣಿ, ಚಾತುರ್ಯ ಮುಖಂಡರಾದ ಕನಕಪ್ರಸಾದ್, ಗ್ಯಾಸ್ ನಾರಾಯಣಸ್ವಾಮಿ, ಮಳ್ಳೂರಯ್ಯ, ನಗರಸಭಾ ಸದಸ್ಯ ನಾರಾಯಣಸ್ವಾಮಿ , ಯುವ ಮೋರ್ಚ ಅಧ್ಯಕ್ಷ ಜಗದೀಶ್ , ರಾಮಚಂದ್ರ, ರಘು , ಭರತ್ , ಮೇಲೂರು ಮಹೇಶ್ ಸೇರಿ ಅನೇಕ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.