ರೋಣ: ಬಸವ ಯೋಗ ಸಮಿತಿ ವತಿಯಿಂದ ಪಟ್ಟಣದ ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಭಾರತೀಯ ವೈದ್ಯಕೀಯ ಸಂಘ ಮಾಜಿ ರಾಜ್ಯಾಧ್ಯಕ್ಷ ಡಾ. ಎಸ್.ಬಿ. ಲಕೋಳ ಮಾತನಾಡಿ, ದಿನನಿತ್ಯ ಮಕ್ಕಳು ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯ ಸುಧಾರಿಸುವುದರೊಂದಿಗೆ, ಮಾನಸಿಕ ಆರೋಗ್ಯ, ನೆನಪಿನ ಶಕ್ತಿ ಹೆಚ್ಚುತ್ತದೆ. ಶಾಲೆಯಲ್ಲಿ ಪಠ್ಯ ಮತ್ತು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದವರು ಭಾರತೀಯರು. ಆದ್ದರಿಂದ ಭಾರತೀಯ‌ರೆಲ್ಲರಿಗೂ ಇದು ಹೆಮ್ಮೆಪಡುವ ದಿನ ಇದಾಗಿದೆ ಎಂದರು.ಯೋಗಗುರು ಶ್ರವಣಕುಮಾರ ಮಾತನಾಡಿ, ನಮ್ಮಲ್ಲಿನ ಅಲ್ಪಶಕ್ತಿಯನ್ನು ವಿಶ್ವ ಶಕ್ತಿಯೊಂದಿಗೆ ಒಂದಾಗಿಸುವ ಅತ್ಯುನ್ನತ ಸಾಧನವೇ ಯೋಗ, ಯೋಗ ಈ ನೆಲದ ಅಸ್ಮಿತೆ, ಜಗತ್ತಿಗೆ ಈ ನೆಲವು ಕೊಟ್ಟ ಅಪೂರ್ವವಾದ ಕೊಡುಗೆ. ಇದು ಕೇವಲ ಕಸರತ್ತಲ್ಲ, ಪ್ರಕೃತಿಯೊಡನೆ ಸಮೀಕರಿಸಿಕೊಂಡು ನಮ್ಮನ್ನು ಕಂಡುಕೊಳ್ಳುವ ಪರಿ. ನಿತ್ಯ ಯೋಗಾಭ್ಯಾಸದಲ್ಲಿ ತೊಡಗಿ ಸದೃಢ ಆರೋಗ್ಯ, ಕಾಯಿಲೆ ಮುಕ್ತ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದರು.ದೇಹದಿಂದ ದೇಹ ಮತ್ತು ಮನಸ್ಸನ್ನು ಕೂಡಿಸಲು ಸಾಧ್ಯ. ನಾವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಯೋಗ ಬೇಕು. ಇದು ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯವೂ ಯೋಗ ಮಾಡಬೇಕು. ಉಸಿರಾಟ ನಮ್ಮ ಜೀವನಕ್ಕೆ ಎಷ್ಟು ಮುಖ್ಯವೋ ಯೋಗವು ಅಷ್ಟೇ ಮುಖ್ಯ ಎಂದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಯೋಗದ ವಿವಿಧ ಭಂಗಿಗಳನ್ನು ತಿಳಿಸಿಕೊಟ್ಟರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಯೋಗಾಸನ ಪ್ರದರ್ಶಿಸಿದರು. ಬಸವ ಯೋಗ ಸಮಿತಿಯ ಅಧ್ಯಕ್ಷ ಶೇಖಣ್ಣ ನವಲಗುಂದ, ತಜ್ಞವೈದ್ಯ ಡಾ. ಎಸ್.ಬಿ. ಲಕ್ಕೋಳ, ಯೋಗ ಗುರು ಶ್ರವಣಕುಮಾರ, ಮುತ್ತಣ್ಣ ಸಂಗಳ, ರಾಜಣ್ಣ ಸುಂಕದ ತೋಟಪ್ಪ ನವಲಗುಂದ, ಮಾದೇವಗೌಡ ಲಿಂಗನಗೌಡ್ರ ಸೋಮು ಲದ್ದಿಮಠ ಹುಚ್ಚೇಶ ಜವಳಿ, ಶೇಖಣ್ಣ ಐವಳ್ಳಿ, ಉಮೇಶ ಬೆಳದಡಿ, ಯಲ್ಲಪ್ಪ ಸುಂಕದ, ಬಿ.ಎನ್. ಬಳಗಾನೂರ, ಶ್ರೀನಿವಾಸ ಬೆಳಮಕೊಂಡಿ, ನಾರಾಯಣ ಮಾನಪಡೆ ಸೇರಿದಂತೆ ಅನೇಕರಿದ್ದರು.