ಸಾರಾಂಶ
ಕನ್ನಡಪ್ರಭವಾರ್ತೆ ಪಾವಗಡ
ಯೋಗವು ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ ಮತ್ತು ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಭಾರತ ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪ್ರತಾಪ್ ಹೇಳಿದರು.ತಾಲೂಕಿನ ಕೋಟಗುಡ್ಡ ಗ್ರಾಮ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಭಾರತ ಮಾತಾ ಸೇವಾ ಟ್ರಸ್ಟ್ ಸಲಕುಂಟೆ ಸಹಯೋಗದೊಂದಿಗೆ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗವು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಏಕಾಗ್ರತೆ ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುದ್ರೆಗಳು ದೇಹದೊಂದಿಗೆ ಮಾಡಲಾಗುವ ಸೂಕ್ಷ್ಮವಾದ ದೈಹಿಕ ಚಲನೆಗಳಾಗಿವೆ. ಅದು ದೇಹದಲ್ಲಿ ಪ್ರಾಣ ಹರಿಯುವ ವಿಧಾನವನ್ನು ಬದಲಾಯಿಸುತ್ತದೆ. ಧ್ಯಾನವು ಒತ್ತಡ,ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಶಾಂತಿ,ಗ್ರಹಿಕೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಶಾಲೆಯ ಶಿಕ್ಷಕರಾದ ವಿ.ಆರ್.ರಮೇಶ್ ಮಾತನಾಡಿ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಉತ್ತಮ ಆರೋಗ್ಯ ಜೀವನಕ್ಕೆ ಯೋಗ ತುಂಬಾ ಅವಶ್ಯಕತೆ ಇದ್ದು ದೈಹಿಕ ಮಾನಸಿಕ ನೆಮ್ಮದಿ ಹಾಗೂ ಆಧ್ಯಾತ್ಮಿಕ ಚಿಂತನೆಯಡೆ ಮನಸ್ಸು ಕೊಂಡ್ಯೊಯಲು ಯೋಗ ಅತ್ಯಂತ ಸಹಕಾರಿಯಾಗಿದೆ ಎಂದರು.ಶಾಲೆಯ ಮುಖ್ಯೋಪಾಧ್ಯಾಯ ಟಿ.ಶ್ರೀನಿವಾಸಚಾರಿ ಮಾತನಾಡಿ ನಮ್ಮ ಶಾಲೆಗೆ ಆಗಮಿಸಿ ಯೋಗದ ಮಹತ್ವವನ್ನು ತಿಳಿಸಿ ಕಲಿಸಿ ಮತ್ತು ಅದರಿಂದ ನಮಗೆ ಆಗುವ ಲಾಭಗಳನ್ನು ತಿಳಿಸಿದಂತಹ ಸಮಾಜ ಸೇವಕ, ಯೋಗ ತರಬೇತುದಾರರಾದ ನಾಗೇಂದ್ರ ಪ್ರತಾಪ್ ರವರಿಗೆ ಶಾಲೆಯ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಯೋಗದಿನದ ಅಂಗವಾಗಿ ಪಟ್ಟಣದ ಕಸ್ತೂರಿ ಬಾ ಗಾಂಧಿ ಬಾಲಿಕ ವಸತಿ ಶಾಲೆಯಲ್ಲಿ ಯೋಗದಿನವನ್ನು ಆಚರಿಸಲಾಯಿತು.
ಈ ವೇಳೆ ಶಾಲೆಯ ಶಿಕ್ಷಕಿ ಸಾವಿತ್ರಮ್ಮ ಯೋಗದ ಮಹತ್ವ ಹಾಗೂ ಆರೋಗ್ಯದ ಕುರಿತಾದ ಅನೇಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಯೋಗಬ್ಯಾಸವನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು. ಇದೇ ರೀತಿ ತಾಲೂಕಿನ ಅನೇಕ ಶಾಲೆಗಳಲ್ಲಿ ಯೋಗದಿನ ಆಚರಿಸುವ ಮೂಲಕ ಯೋಗಭ್ಯಾಸ ರೂಪಿಸಿಕೊಳ್ಳುವಂತೆ ಅಲ್ಲಿನ ಶಿಕ್ಷಕರು ಹಾಗೂ ತರಬೇತಿದಾರರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಈ ವೇಳೆ ಕೋಟಗುಡ್ಡ ಪಬ್ಲಿಕ್ ಶಾಲೆಯ ಶಿಕ್ಷಕರಾದ ಪುಷ್ಪಲತಾ, ಚಿರಂಜೀವಿ, ಹನುಮಂತರಾಯಪ್ಪ, ಅಶ್ವಥ್, ನಸಿನಾ, ಗೀತಾ, ಸರೋಜಾದೇವಿ ಇತರರು ಉಪಸ್ಥಿತರಿದ್ದರು.