ಜಿಲ್ಲೆಯಲ್ಲಿ ಕಳೆದ ಸುಮಾರು 400 ದಿನಗಳಿಂದ ಯೋಗ ಭಾರತ-365 ಕಾರ್ಯಕ್ರಮ ಪ್ರತಿನಿತ್ಯ ಬೆಳಗ್ಗೆ 5.30 ರಿಂದ 7 ಗಂಟೆಯವರೆಗೆ ಆಚರಿಸುತ್ತಿರುವುದು ಇಡೀ ರಾಜ್ಯಾದ್ಯಂತ ಹೆಸರು ಮಾಡಿದೆ

ಕೊಪ್ಪಳ: ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಅವಶ್ಯ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಬಿ.ಹಿರೇಗೌಡರ ಹೇಳಿದರು.

ನಗರದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಜರುಗಿದ ಯೋಗ ಜಾಥಾಕ್ಕೆ ಚಾಲನೆ ನೀಡಿದ ಅವರು, ಜೂ.21ರಂದು ಭಾರತ ದೇಶಾದ್ಯಂತ ಮತ್ತು ಜಗತ್ತಿನ 177 ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಈ ವರ್ಷದ ಘೋಷವಾಕ್ಯವು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬುವುದಾಗಿದ್ದು, ಇದರ ಭಾಗವಾಗಿ ಇಂದು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲೆಯ ವಿವಿಧ ಆಯುರ್ವೇದ ಮಹಾವಿದ್ಯಾಲಯಗಳು ಮತ್ತು ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ ಯೋಗ ಜಾಥಾ ಮೂಲಕ ಸಾರ್ವಜನಿಕರಲ್ಲಿ ಯೋಗದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಸುಮಾರು 400 ದಿನಗಳಿಂದ ಯೋಗ ಭಾರತ-365 ಕಾರ್ಯಕ್ರಮ ಪ್ರತಿನಿತ್ಯ ಬೆಳಗ್ಗೆ 5.30 ರಿಂದ 7 ಗಂಟೆಯವರೆಗೆ ಆಚರಿಸುತ್ತಿರುವುದು ಇಡೀ ರಾಜ್ಯಾದ್ಯಂತ ಹೆಸರು ಮಾಡಿದೆ ಎಂದು ಹೇಳಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣ ಮೂರ್ತಿ ದೇಸಾಯಿ, ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಶುಂಪಾಲ ಡಾ.ಸಾಲಿಮಠ, ಜಿಲ್ಲೆಯ ಆಯುಷ್ ವೈದ್ಯಾಧಿಕಾರಿ ಡಾ.ಯಮನಪ್ಪ ಶಿರವಾರ, ಡಾ.ಗುರುರಾಜ್ ಉಮಚಗಿ, ಡಾ.ವಿ.ಆರ್.ತಾಳಿಕೋಟಿ, ಡಾ.ಶರಣಪ್ಪ ಹೈದ್ರಿ, ಡಾ.ರಾಜಶೇಖರ ನಾರಿನಾಳ, ಡಾ. ಕವಿತಾ ಎಚ್.ಎಫ್.ಹಾಗೂ ಇತರೆ ವೈದ್ಯಾಧಿಕಾರಿಗಳು, ಶ್ರೀ ಗವಿಸಿದ್ದೇಶ್ವರ,ನಿಂಗೋಜಿ ಮತ್ತು ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯ ವೈದ್ಯಾಧಿಕಾರಿ ಹಾಗೂ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಯುಷ್ ಇಲಾಖೆ ಸಿಬ್ಬಂದಿ, ಸರ್ವಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರಿದ್ದರು.

ಗಮನ ಸೆಳೆದ ಯೋಗ ಜಾಥಾ:

ಯೋಗ ಜಾಥಾವು ನಗರದ ಶ್ರೀಗವಿಮಠದ ಆವರಣದಿಂದ ಪ್ರಾರಂಭಗೊಂಡು ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ಮೂಲಕ ತಾಲೂಕು ಕ್ರೀಡಾಂಗಣದವರೆಗೆ ನಡೆಯಿತು.ಜಾಥಾದಲ್ಲಿ ಶ್ರೀಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ,ನಿಂಗೋಜಿ ಆಯುರ್ವೇದ ಮಹಾವಿದ್ಯಾಲಯ, ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಜಾಥಾದಲ್ಲಿ ಯೋಗ ಮಾಡಿ ಸದಾ ನಗುನಗುತ್ತಾ ಇರಿ, ಯೋಗ ಅಳವಡಿಸೋಣ ಸುಂದರ ಜೀವನ ಕಟ್ಟೋಣ, ಯೋಗ ನಮ್ಮ ಸಂಸ್ಕೃತಿ- ಆರೋಗ್ಯ ನಮ್ಮ ಹಕ್ಕು, ಯೋಗಕ್ಕೆ ಕೈ ಜೋಡಿಸಿ ಆರೋಗ್ಯದತ್ತ ಹೆಜ್ಜೆ ಇಡಿ ಹೀಗೆ ಯೋಗದ ಮಹತ್ವ ಸಾರುವ ಇತರೆ ಸಂದೇಶ ಫಲಕಗಳು ಎಲ್ಲರ ಗಮನ ಸೆಳೆದವು.