ಅಳ್ವೆಕೋಡಿಯಲ್ಲಿ ಯೋಗ ದಿನಾಚರಣೆ

ಕನ್ನಡಪ್ರಭ ವಾರ್ತೆ ಭಟ್ಕಳ

ಯೋಗ ಭಾರತೀಯ ಸನಾತನ ಪರಂಪರೆಯಾಗಿದೆ. ಇಂದು ಯೋಗ ವಿಶ್ವಕ್ಕೆ ವಿಸ್ತರಿಸುವ ಮೂಲಕ ನಮ್ಮ ದೇಶ ವಿಶ್ವಕ್ಕೆ ಯೋಗ ಗುರು ಆಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಭಾರತ್ ಸ್ವಾಭಿಮಾನ ಟ್ರಸ್ಟಿನ ಭಟ್ಕಳ ತಾಲೂಕು ಪ್ರಭಾರಿ ಸತೀಶ್ ಕುಮಾರ ಹೇಳಿದರು.

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನಿಹದಲ್ಲಿ ೧೨ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಕೇಂದ್ರ, ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ, ಆರೋಗ್ಯ ಭಾರತಿ ಟ್ರಸ್ಟ್, ಸರಕಾರಿ ಆಯುಷ್ ಇಲಾಖೆ ಇವುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಅಂದು ಋಷಿಮುನಿಗಳು ಆಧ್ಯಾತ್ಮಿಕ ಸಾಧನೆಗಾಗಿ ಯೋಗವನ್ನು ಬಳಸಿಕೊಂಡರು. ಯೋಗದಿಂದ ದೀರ್ಘಾಯುಷ್ಯ ಪಡೆದುಕೊಂಡರು. ಆಯಸ್ಸು ವೃದ್ಧಿಗೆ ಆರೋಗ್ಯ ಭಾಗ್ಯಕ್ಕೆ ಯೋಗವೇ ಪ್ರಧಾನ ಮೆಟ್ಟಿಲು. ಇದೇ ಪರಂಪರೆಯಲ್ಲಿ ನಮ್ಮ ಸಂಸ್ಕೃತಿ ನಡೆದುಬಂದಿದೆ ಎಂದರು.

ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಕಮಿಟಿ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ಮಾತನಾಡಿ, ಇಂದು ನಮ್ಮ ಜೀವನಶೈಲಿ ಬದಲಾಗಿದ್ದು ಬದಲಾದ ಜೀವನಶೈಲಿಗೆ ಯೋಗ ಅತ್ಯಗತ್ಯ ಎಂದರು.


ದೇವಾಲಯದ ಆಡಳಿತ ಮಂಡಳಿಯ ನಾರಾಯಣ ದೈಮನೆ, ಶಿರಾಲಿ ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ ದೈಮನೆ, ತಾಲೂಕು ಪತಂಜಲಿ ಸಮಿತಿಯ ಪ್ರಭಾರಿಗಳಾದ ದುರ್ಗಾದಾಸ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿಗಳಾದ ಹನುಮಂತ ನಾಯ್ಕ, ಅರವಿಂದ ಪೈ, ಗಜಾನನ ಪುರಾಣಿಕ, ಮಂಜುನಾಥ್ ಕೋಡಿಹಿತ್ತಲ, ಭಟ್ಕಳ ತಾಲೂಕು ಪತಂಜಲಿ ಮಹಿಳಾ ಪ್ರಭಾರಿ ಲತಾ ನಾಗರಾಜ್ ನಾಯ್ಕ, ಪತಂಜಲಿ ಸಮಿತಿಯ ಮಂಜುನಾಥ್ ದೈಮನೆ, ಉದ್ಯಮಿ ಬಾಬು ಮೊಗೇರ ಉಪಸ್ಥಿತರಿದ್ದರು. ಆಯುಷ್ ಆರೋಗ್ಯಾಧಿಕಾರಿ ಮಾನಸ ಹಾಗೂ ಪ್ರದೀಪ ನಾಯಕ ಯೋಗ ತರಬೇತಿ ನೀಡಿದರು. ಪತಂಜಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿಕ್ಷಕ ನಾರಾಯಣ ನಾಯ್ಕ ಸ್ವಾಗತಿಸಿದರು. ಲತಾ ವಾಸು ನಾಯ್ಕ ಪ್ರಾರ್ಥಿಸಿದರು. ಶಿಕ್ಷಕಿ ರಾಜೀವಿ ಮೊಗೇರ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಂಜುನಾಥ ಕೋಡಿಹಿತ್ತಲ್ ಯೋಗದ ವಿಶೇಷ ಭಂಗಿ ಪ್ರದರ್ಶಿಸಿದರು.