ಕನ್ನಡಪ್ರಭ ವಾರ್ತೆ ಗುಬ್ಬಿ

ದೈನಂದಿನ ದಾವಂತದ ಜೀವನದಲ್ಲಿ ಮನಸ್ಸು ಮತ್ತು ದೇಹದ ಆರೋಗ್ಯ ಮುಖ್ಯವಾದ ಕಾರಣ ಪ್ರತಿ ದಿನ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾ.ಅನುಪಮ.ಡಿ ತಿಳಿಸಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಟ್ರಸ್ಟ್, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಒತ್ತಡದ ಬದುಕಿನಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನದಲ್ಲಿ ತೊಡಗಿಕೊಂಡಾಗ ಮಾತ್ರ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುಬಹುದು ಮತ್ತು ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಳ್ಳಬಹುದು ಎಂದರು.

ಯೋಗ ಸಮಿತಿ ಸಂಚಾಲಕಿ ಲತಾ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ 12ನೇ ಯೋಗ ದಿನಾಚರಣೆಯನ್ನು ನಾವು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದಡಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಆರತಿ.ಬಿ ಮಾತನಾಡಿ, ಯೋಗ ದಿನದ ನಿಜವಾದ ಮಹತ್ವ ಇರುವುದು ಕೇವಲ 21ರಂದು ಮಾತ್ರ ಯೋಗ ಮಾಡುವ ಬದಲಿಗೆ, ಯೋಗವನ್ನು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿಸಿಕೊಂಡು, ಆರೋಗ್ಯಕರ ಸಮಾಜವನ್ನು ನಿರ್ಮಿಸುವುದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಬಿ. ಬಸವರಾಜು ಮಾತನಾಡಿ,ಯೋಗ ಎನ್ನುವುದು ಇತಿಹಾಸ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯೋಗ ಮಾಡುವುದರಿಂದ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾ.ಪೂರ್ಣಿಮಾ.ಕೆ.ಯಾದವ್, ನ್ಯಾ. ಎಸ್.ಪಿ.ಕಿರಣ್, ನ್ಯಾ. ಸವಿತರಾಣಿ, ಜಿ.ಎನ್. ಮಲ್ಲಪ್ಪ, ಡಾ.ಸುದರ್ಶನ್, ಸಂಚಾಲಕರಾದ ಮಹಾದೇವಪ್ಪ, ಲತಾ, ವಕೀಲರ ಸಂಘದ ಎಂ.ಪಿ.ಮೋಹನ್, ಯೋಗ ಶಿಕ್ಷಕ ಅಂಜನ್, ರೇಖಾ, ಸವಿತ, ಪತಂಜಲಿ ಯೋಗ ಶಿಕ್ಷಣದ ವಿವಿಧ ಘಟಕಗಳ ಪದಾಧಿಕಾರಿಗಳು, ಸಂಚಾಲಕರು, ವಕೀಲರು ಮತ್ತಿತರರು ಇದ್ದರು.