ಯೋಗವು ರೋಗಿಯ ಜೀವನ ಶೈಲಿಯನ್ನು ಸದೃಢವಾಗಿಸುತ್ತದೆ: ಡಾ.ಸುರೇಂದ್ರ

| Published : Jun 22 2025, 11:48 PM IST

ಯೋಗವು ರೋಗಿಯ ಜೀವನ ಶೈಲಿಯನ್ನು ಸದೃಢವಾಗಿಸುತ್ತದೆ: ಡಾ.ಸುರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗವು ರಕ್ತದೊತ್ತಡ ಹಾಗೂ ಮಧುಮೇಹದಂತಹ ರೋಗಿಗಳ ಜೀವನ ಶೈಲಿಯನ್ನು ಸದೃಡವಾಗಿಸುತ್ತದೆ ಎಂದು ಆಯುಷ್ ವೈಧ್ಯಾಧಿಕಾರಿ ಡಾ.ಸುರೇಂದ್ರ ಹೇಳಿದರು.

ಹೊಳೆಹೊನ್ನೂರು: ಯೋಗವು ರಕ್ತದೊತ್ತಡ ಹಾಗೂ ಮಧುಮೇಹದಂತಹ ರೋಗಿಗಳ ಜೀವನ ಶೈಲಿಯನ್ನು ಸದೃಡವಾಗಿಸುತ್ತದೆ ಎಂದು ಆಯುಷ್ ವೈಧ್ಯಾಧಿಕಾರಿ ಡಾ.ಸುರೇಂದ್ರ ಹೇಳಿದರು.

ಸಮೀಪದ ಮೈದೊಳಲಿನ ಉನ್ನತೀಕರಿಸಿದ ಸರ್ಕಾರಿ ಶಾಲೆ ಆವರಣದಲ್ಲಿ ಆಯುಷ್ ಆಸ್ಪತ್ರೆ ಹಾಗೂ ಗ್ರಾಪಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ದೀರ್ಘಾವಧಿ ಕಾಯಿಲೆಗಳಿಂದ ದೂರಾಗಬಹುದು. ವಯಸ್ಕರಲ್ಲಿ ಸಾಮಾನ್ಯವಾಗಿ ಕಾಡುವ ಬೆನ್ನುನೋವು, ಕೀಲು ನೋವು, ಸ್ನಾಯುಗಳ ಸೆಳೆತದಂತಹ ಸಮಸ್ಯೆಗಳನ್ನು ಮನೆಯಲ್ಲೆ ಪರಿಹರಿಸಿಕೊಳ್ಳಬಹುದು. ಯೋಗಾಸನಗಳು ಸ್ನಾಯುಗಳನ್ನು ಬಲಪಡಿಸಲು ಮತ್ತು ನೋವು ನಿವಾರಿಸಲು ಸಹಾಯ ಮಾಡುತ್ತವೆ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯೋಗವು ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ, ಇದು ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಹಾಯ ಮಾಡುತ್ತದೆ. ಯೋಗವು ದೇಹ ಮತ್ತು ಮನಸ್ಸನ್ನು ವಿಶ್ರಾಂತಿಗೊಳಿಸುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಒಟ್ಟಾರೆಯಾಗಿ ಯೋಗದಿಂದ ದೈಹಿಕ, ಮಾನಸಿಕ, ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು ಎಂದರು.

ಮೈದೊಳಲು ಕ್ಲಸ್ಟರ್ ವ್ಯಾಪ್ತಿ ಸರ್ಕಾರಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು, ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸಿಬ್ಬಂದಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಗ್ರಾಪಂ ಅಧ್ಯಕ್ಷೆ ಗೀತಮ್ಮ, ಶಾಲಾ ಸಮಿತಿ ಅಧ್ಯಕ್ಷೆ ಪದ್ಮಾ ರುದ್ರೇಶ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನೀತಾ ಬಾಯಿ, ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಬಿ.ತಿಪ್ಪೇರುದ್ರಪ್ಪ, ಸೋಮಶೇಖರ್, ವೆಂಕಟೇಶಮೂರ್ತಿ, ಕೃಷ್ಣೋಜಿರಾವ್, ಪರಮೇಶ್ವರರಾವ್, ರುದ್ರೆಶ್, ಎಸ್.ಜಿ ಬಸವರಾಜಪ್ಪ, ಶೇಖರಪ್ಪ, ಮಲ್ಲೇಶಪ್ಪ, ರವಿನಾಯಕ್, ಮಮತ ಇತರರಿದ್ದರು.