ನಿಮ್ಮ ವಿರುದ್ಧ ನಿರಂತರ ಹೋರಾಟ ಕೈಗೊಳ್ಳಬೇಕಾಗುತ್ತೆ

| Published : Jan 16 2025, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನೇರವಾಗಿ ನನ್ನನ್ನು ಎದುರಿಸಲು ಶಕ್ತಿಯಿಲ್ಲದವರು ತಮ್ಮ ಚೇಲಾಗಳಂತೆ ವರ್ತಿಸುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ಮುಂದೆ ಬಿಟ್ಟು ಅಮಾಯಕ ಹೋರಾಟಗಾರರ ಮೇಲೆ ಕೇಸುಗಳನ್ನ ಹಾಕಿಸಿ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ. ಇದು ಹೀಗೆ ಮುಂದುವರೆದರೆ ನಿಮ್ಮ ವಿರುದ್ಧ ಉಗ್ರ ಹೋರಾಟ ನಿರಂತರವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನೇರವಾಗಿ ನನ್ನನ್ನು ಎದುರಿಸಲು ಶಕ್ತಿಯಿಲ್ಲದವರು ತಮ್ಮ ಚೇಲಾಗಳಂತೆ ವರ್ತಿಸುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ಮುಂದೆ ಬಿಟ್ಟು ಅಮಾಯಕ ಹೋರಾಟಗಾರರ ಮೇಲೆ ಕೇಸುಗಳನ್ನ ಹಾಕಿಸಿ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದಾರೆ. ಇದು ಹೀಗೆ ಮುಂದುವರೆದರೆ ನಿಮ್ಮ ವಿರುದ್ಧ ಉಗ್ರ ಹೋರಾಟ ನಿರಂತರವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಎಚ್ಚರಿಕೆ ನೀಡಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪಾಜಿಯವರೇ ನಾನು ಸ್ವಂತ ಬಲದ ಮೇಲೆ ಜನರ ಆಶೀರ್ವಾದ ಮತ್ತು ಪ್ರೀತಿಯ ಮೇಲೆ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ. ಜಿಲ್ಲೆಯ ಯಾವ ನಾಯಕರ ಮನೆಗೂ ನಾನಲ್ಲ ನಮ್ಮ ಮನೆಯ ನಾಯಿಯೂ ಬಂದು ಸಹಾಯ ಕೇಳಿಲ್ಲ. ಸಧ್ಯ ನಿಮ್ಮ ಹೇಳಿಕೆ ಶುದ್ಧ ಸುಳ್ಳು, ಅಭಿವೃದ್ಧಿ ಮುಂದಿಟ್ಟುಕೊಂಡು ಮಾತನಾಡೋಣ ರಾಜಕೀಯ ಮಾಡೋಣ. ಶಾಸಕ ಸಿ.ಎಸ್‌.ನಾಡಗೌಡ ಇವರೊಬ್ಬ ಗೋಮುಖ ವ್ಯಾಘ್ರವಿದ್ದಂತೆ ಎಂದು ಜರಿದರು.

ನಮ್ಮ ದೇಶದಲ್ಲಿ ಹಸುವನ್ನು ಗೋಮಾತೆ ಎಂದು ಭಕ್ತಿ ಭಾವದಿಂದ ಪೂಜಿಸುವ ಸಂಪ್ರದಾಯವಿದೆ. ಆದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆಕಳ ಕೆಚ್ಚಲು ಕತ್ತರಿಸಿದ್ದು, ಈ ಘಟನೆ ಖಂಡಿಸಿ ರಾಜ್ಯಾದ್ಯಂತ ಆಯಾ ಮತಕ್ಷೇತ್ರಗಳ ಶಾಸಕರ ಮನೆ ಮುಂದೆ ಹಸುವಿನ ಸಗಣೆಯಿಂದ ನೆಲ ಸಾರಿಸಿ ರಂಗೋಲಿ ಬಿಡಿಸುವ ಮೂಲಕ ಲಕ್ಷ್ಮೀ ಮೂರ್ತಿ ಬಿಡಿಸುವ ವಿಭಿನ್ನ ಹೋರಾಟ ನಮ್ಮ ಸಂಸ್ಕೃತಿ ಬಿಂಬಿಸುವ ಉದ್ದೇಶ ಹೊಂದಿದ್ದರು. ಆದರೆ, ಶಾಸಕರು ತಮಗೆ ಬೇಕಾದ ಪಿಎಸೈ ಸಂಜಯ ತಿಪ್ಪಾರೆಡ್ಡಿಯನ್ನು ಮುಂದೆ ಬಿಟ್ಟು ನಮ್ಮ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಸಿ ಅವರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಪ್ರೇರೇಪಿಸಿದ್ದು, ಇದನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದರು.

ಕಾನೂನು ರಕ್ಷಣೆ ಮಾಡಬೇಕಾದ ಪಿಎಸೈ ಸಂಜಯ ತಿಪ್ಪಾರೆಡ್ಡಿ ಶಾಸಕರ ಕೈಗೊಂಬೆಯಂತೆ ವರ್ತಿಸಿ ಕಾನೂನಿಗೆ ಅಪಚಾರ ಮಾಡುತ್ತಿದ್ದಾರೆ. ರಾಜಕಾರಣ ಮಾಡುವ ಹಂಬಲವಿದ್ದರೇ ಖಾಕಿ ಕಳಚಿಟ್ಟು ಬಂದು ರಾಜಕಾರಣ ಮಾಡಲಿ. ಆದರೆ, ಅಮಾಯಕ ಹೋರಾಟಗಾರರ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕಗ್ಗೊಲೆ ಮಾಡುವುದು ಸರಿಯಲ್ಲ ಎಂದರು.ಅವರು ಮುದ್ದೇಬಿಹಾಳ ಠಾಣೆಗೆ ಬಂದು ಒಂದೂವರೇ ವರ್ಷದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಮಂಗಳವಾರದ ಘಟನೆಯ ಕುರಿತು ಜಿಲ್ಲಾ ಕೇಂದ್ರದಲ್ಲಿ ಸಾವಿರಾರು ಕಾರ್ಯಕರ್ತರು ಮುಖಂಡರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನಾಲತವಾಡದ ಎಂ.ಎಸ್.ಪಾಟೀಲ್, ಮುನ್ನಾ ಧಣಿ ನಾಡಗೌಡ, ಮುಖಂಡ ಹೇಮರಡ್ಡಿ ಮೇಟಿ, ಮಲಕೇಂದ್ರಾಯಗೌಡ ಪಾಟೀಲ್, ಗುರುನಾಥ ದೇಶಮುಖ, ಕೆಂಚಪ್ಪ ಬಿರಾದಾರ, ಮುತ್ತು ಸಾಹುಕಾರ ಅಂಗಡಿ, ಶ್ರೀಶೈಲ ದೊಡಮನಿ, ಸೋಮನಗೌಡ ಬಿರಾದಾರ, ಹರೀಶ್ ನಾಟಿಕಾರ, ಪ್ರೇಮಸಿಂಗ ಚವಾಣ, ಸುವರ್ಣಾ ಬಿರಾದಾರ, ಗೌರಮ್ಮ ಹುನಗುಂದ, ಸಂಗಮ್ಮ ದೇವರಹಳ್ಳಿ, ಪ್ರೀತಿ ಕಂಬಾರ, ರೇಖಾ ಕೊಂಡಗುಳಿ, ಕಾವೇರಿ ಕಂಬಾರ, ಸಂತೋಷ ಬಾದರಬಂಡಿ, ಮುತ್ತಣ್ಣ ಹುಗ್ಗಿ, ರಾಜುಗೌಡ ಬಳಬಟ್ಟಿ, ಮದನಸ್ವಾಮಿ ಹಿರೇಮಠ, ಅಪ್ಪಣ್ಣ ಧನ್ನೂರು, ಸೋಮನಗೌಡ ಬಿರಾದಾರ, ಸಂಗಮೇಶ ನಾಗೂರ, ಚನ್ನಿಗಾವಿ ಶೆಟ್ಟರ್, ಆಶೋಕ ರಾಠೋಡ ಸೇರಿದಂತೆ ಹಲವರು ಇದ್ದರು.--------------

ಕೋಟ್‌

ನಾನು ರಾಜಕೀಯದಲ್ಲಿರೋವರೆಗೂ ನಿನ್ನ ರಾಜಕೀಯದ ವಿರುದ್ಧ ಸದಾ ನಾನು ಎದ್ದು ನಿಲ್ಲುತ್ತೇನೆ. ನಿನ್ನ ವಿರುದ್ಧವೇ ನನ್ನ ಸಂಪೂರ್ಣ ರಾಜಕೀಯ ಹೋರಾಟವನ್ನು ನಿರಂತರಗೊಳಿಸುತ್ತೇನೆ. ನಾನೂ ಯಾವತ್ತು ನಿನ್ನ ಮನೆ ಹೊಸ್ತಲು ತುಳಿಯೋದಿಲ್ಲ ಎಂದು ಇಂದಿನಿಂದಲೇ ಪ್ರತಿಜ್ಞೆ ಮಾಡುತ್ತೇನೆ. ನಾನೂ ಕೂಡ ಮೂರು ಬಾರಿ ಶಾಸಕನಾಗಿ ಅಧಿಕಾರ ನೋಡಿದ್ದೇನೆ, ಸೇವೆ ಮಾಡಿದ್ದೇನೆ ಎಂಬುದು ತಿಳಿದು ಮಾತನಾಡುವುದು ಸೂಕ್ತ.

ಎ.ಎಸ್‌.ಪಾಟೀಲ ನಡಹಳ್ಳಿ, ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ