ಯುಐ ವೀಕ್ಷಿಸಿದ ಮೇಲೆ ಅರ್ಥ ಆಗುತ್ತೆ: ಉಪೇಂದ್ರ

| Published : Dec 04 2024, 12:31 AM IST

ಯುಐ ವೀಕ್ಷಿಸಿದ ಮೇಲೆ ಅರ್ಥ ಆಗುತ್ತೆ: ಉಪೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದ ಟೈಟಲ್‌ ಅರ್ಥವೇನು ಎಂಬ ಬಗ್ಗೆ ಏನನ್ನೂ ಬಿಚ್ಚಿಡದ ಉಪೇಂದ್ರ, ಯುಐ ಎಂದರೆ ಎಷ್ಟೊಂದು ಅರ್ಥಗಳಿವೆ, ಯಾವ ರೀತಿಯಲ್ಲೂ ಸ್ವೀಕಾರ ಮಾಡಬಹುದು. ಅದಕ್ಕೇ ಚಿತ್ರ ವೀಕ್ಷಣೆ ಮಾಡಿದ ಬಳಿಕ ಅರ್ಥ ಹೇಳಿ ಎಂದರು. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರಾರ್ಥ ದೇಶದ ಇತರ ಕಡೆಗಳಲ್ಲೂ ಸಂಚರಿಸುತ್ತಿರುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ರಿಯಲ್‌ ಸ್ಟಾರ್‌’ ಉಪೇಂದ್ರ ನಿರ್ದೇಶನ ಹಾಗೂ ಅಭಿನಯದ ಬಹುನಿರೀಕ್ಷಿತ ‘ಪ್ಯಾನ್‌ ಇಂಡಿಯಾ’ ಚಲನಚಿತ್ರ ‘ಯುಐ’ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಡಿ.20ರಂದು ಬಿಡುಗಡೆಯಾಗಲಿದೆ.

‘ಇದುವರೆಗಿನ ಸಿನೆಮಾಗಳಲ್ಲಿ ಮಾಡಿದ್ದನ್ನು ಬಿಟ್ಟು- ಕೆಲವೊಂದನ್ನು ಸೇರಿಸಿ ‘ಯುಐ’ ಚಿತ್ರದಲ್ಲಿ ಇನ್ನೇನೋ ಇರುತ್ತೆ. ಇದೇನು ‘ಯುಐ’ ಅನ್ನೋದು ಚಿತ್ರ ವೀಕ್ಷಣೆ ಮಾಡಿದ ಮೇಲೆ ಅರ್ಥ ಆಗಲಿದೆ. ಪ್ರೇಕ್ಷಕರಿಗೆ ಈ ಚಿತ್ರ ಎಷ್ಟು ಅರ್ಥ ಆಗುತ್ತೆ ಅನ್ನೋ ಬಗ್ಗೆ ನನಗೂ ಕುತೂಹಲ ಇದೆ’ ಎಂದು ಸ್ವತಃ ಉಪೇಂದ್ರ ಚಿತ್ರದ ಸಸ್ಪೆನ್ಸ್‌ನ್ನು ಕಾಯ್ದಿರಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಐ ಚಿತ್ರದಲ್ಲಿ ತುಂಬ ಆಳವಾದ ಹಲವು ‘ಲೇಯರ್‌ಗಳು’ ಇವೆ. ಅದೆಲ್ಲವೂ ಸಿನೆಮಾ ನೋಡ್ತಾ ನೋಡ್ತಾ ಅರ್ಥ ಆಗುತ್ತದೆ. ಆ ರೀತಿಯಲ್ಲಿ ವಿಶೇಷ ಪ್ರಯತ್ನದಿಂದ ಚಿತ್ರ ತಯಾರು ಮಾಡಿದ್ದೇವೆ ಎಂದು ಹೇಳಿದರು.ಯುಐ ಎಂದರೇನು- ನೋಡಿ ಹೇಳಿ: ಚಿತ್ರದ ಟೈಟಲ್‌ ಅರ್ಥವೇನು ಎಂಬ ಬಗ್ಗೆ ಏನನ್ನೂ ಬಿಚ್ಚಿಡದ ಉಪೇಂದ್ರ, ಯುಐ ಎಂದರೆ ಎಷ್ಟೊಂದು ಅರ್ಥಗಳಿವೆ, ಯಾವ ರೀತಿಯಲ್ಲೂ ಸ್ವೀಕಾರ ಮಾಡಬಹುದು. ಅದಕ್ಕೇ ಚಿತ್ರ ವೀಕ್ಷಣೆ ಮಾಡಿದ ಬಳಿಕ ಅರ್ಥ ಹೇಳಿ ಎಂದರು. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರಾರ್ಥ ದೇಶದ ಇತರ ಕಡೆಗಳಲ್ಲೂ ಸಂಚರಿಸುತ್ತಿರುವುದಾಗಿ ತಿಳಿಸಿದರು.

ಯುಐಗೆ ಎಐ ಸಹಾಯ: ಯುಐ ಚಿತ್ರ ತಯಾರು ಮಾಡಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇವೆ. ತಾಂತ್ರಿಕತೆ, ಗ್ರಾಫಿಕ್ಸ್‌ ಇತ್ಯಾದಿ ಸಾಕಷ್ಟು ಕೆಲಸಗಳಿದ್ದವು. ಎಐ (ಕೃತಕ ಬುದ್ಧಿಮತ್ತೆ) ಕೂಡ ಯುಐಗೆ ಸಹಾಯ ಮಾಡಿದೆ. ಎಲ್ಲ ಸೀನ್‌ಗಳೂ ಪ್ರೇಕ್ಷಕರನ್ನು ಯೋಚನೆಗೆ ಹಚ್ಚುವಂತಿದೆ ಎಂದು ಉಪೇಂದ್ರ ತಿಳಿಸಿದರು.‘ಎರಾ’ಗಳು ಬರುತ್ತವೆ: ಕಂಟೆಂಟ್‌ ಇರೋ ಚಿತ್ರಗಳನ್ನು ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಆದರೂ ಅನೇಕ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಉಂಟಾಗಲು ಅನೇಕ ಕಾರಣಗ‍ಳಿವೆ. ಕೆಲವರಿಗೆ ಪ್ರಚಾರ ಮಾಡಲು ಆಗದೆ ಇರಬಹುದು. ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುತ್ತಾ ಸಾಗಬೇಕು ಎಂದು ಕಿವಿಮಾತು ಹೇಳಿದ ಅವರು, ಸ್ಮಾರ್ಟ್‌ ಫೋನ್‌ ಯುಗದಲ್ಲೀಗ ಮನರಂಜನೆ ಸುಲಭದಲ್ಲಿ ಸಿಗುತ್ತಿದೆ. ಇದಕ್ಕಿಂತ ಮೇಲ್ಮಟ್ಟದಲ್ಲಿ ಸಿನೆಮಾ ಇರಬೇಕು ಎನ್ನುವ ಪರಿಸ್ಥಿತಿ ಇದೆ. ಹಿಂದೆ ಚಿತ್ರರಂಗದಲ್ಲಿ ಗೋಲ್ಡನ್‌ ಎರಾ, ಸಿಲ್ವರ್‌ ಎರಾ ಅಂತ ಕರೆಯಲಾಗುತ್ತಿತ್ತು. ಅದೇ ಥರ ಒಂದೊಂದು ಎರಾ ಬಂದೇ ಬರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಚಿತ್ರದ ನಿರ್ಮಾಪಕರಾದ ಶ್ರೀಕಾಂತ್‌ ಕೆಪಿ, ಲಹರಿ ವೇಲು, ನವೀನ್‌ ಮನೋಹರ್‌ ಹಾಗೂ ರಾಜೇಶ್‌ ಭಟ್‌, ಪ್ರೀತಮ್‌ ಶೆಟ್ಟಿ ಇದ್ದರು.

ಕರಿಮಣಿ ಹಾಡು 15 ವರ್ಷ ಬಳಿಕ ಅರ್ಥ ಆಯ್ತು!

ಉಪೇಂದ್ರ ಅಭಿನಯದ ‘ಕರಿಮಣಿ ಮಾಲೀಕ’ ಹಾಡು ಇತ್ತೀಚಿನ ದಿನಗಳಲ್ಲಿ ಮರಳಿ ಜನಪ್ರಿಯತೆ ಪಡೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, 15 ವರ್ಷ ಕಳೆದ ಮೇಲೆ ಈ ಹಾಡು ಜನರಿಗೆ ಅರ್ಥ ಆಯ್ತು ಎಂದು ಚಟಾಕಿ ಹಾರಿಸಿದರು.