ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಯಾಶೀಲ ಯುವಕರ, ಮಹಿಳಾ, ಯುವತಿ ಮಂಡಳಿಗಳು ಹಾಗೂ ಯುವ ಸಮುದಾಯವನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ದಿಕ್ಕು ತಪ್ಪಿಸಿ ನಾಶಗೊಳಿಸುವ ಕೆಲಸ ಮಾಡಿದರು ಎಂದು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಕೋ.ಪು.ಗುಣಶೇಖರ್ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯುವ ಪರಿಷತ್ನಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಪರಿಷತ್ ಆಯ್ಕೆ ಕುರಿತ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಹಳ್ಳಿಗಳಲ್ಲಿ ಯುವಕ, ಮಹಿಳಾ/ಯುವತಿ ಮಂಡಳಿಗಳು ಗ್ರಾಮೀಣಾಭಿವೃದ್ಧಿ ಮಾಡುವ ಮೂಲಕ ಸಕ್ರಿಯವಾಗಿ ಕಾರ್ಯ ಚಟುವಟಿಕೆ ನಡೆಸಿ ಹಳ್ಳಿಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದವು.
ಆದರೆ, ರಾಜಕಾರಣಿಗಳ ಪ್ರವೇಶದಿಂದಾಗಿ ಯುವಕ ಸಂಘಗಳು ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸಿ ವಿನಾಶದತ್ತ ಹೋಗುವಂತಾಯಿತು. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಕೂಡ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿಂದೆ ನೆಹರು ಯುವ ಕೇಂದ್ರಗಳಲ್ಲಿ 18 ರಿಂದ 35 ವರ್ಷದ ಯುವಕ, ಯುವತಿಯರನ್ನು ರಾಷ್ಟ್ರೀಯ ಸ್ವಯಂ ಸೇವಕರಾಗಿ ನೇಮಕಗೊಳಿಸಿ ಯುವಕ, ಯುವತಿ ಮಂಡಳಿ ಸಬಲೀಕರಣಗೊಳಿಸುವ ಜೊತೆಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಬರುವ ಸವಲತ್ತು ಸದ್ಬಳಕೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಇದೀಗ 15 ರಿಂದ 29 ವರ್ಷಕ್ಕೆ ಕಡಿತಗೊಳಿಸಲಾಗಿದೆ. ಸರ್ಕಾರದ ಅನುದಾನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈಗ 50 ವರ್ಷದೊಳಗಿನವರನ್ನು ಯುವ ಪರಿಷತ್ ಗೆ ಪರಿಗಣಿಸಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಘಟಕ ರಚಿಸಿ ನಾಡು ಹಾಗೂ ಹಳ್ಳಿಗಳನ್ನು ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಪಾಂಡವಪುರ ತಾಲೂಕು ಯುವ ಪರಿಷತ್ ಘಟಕಕ್ಕೆ ಗಜೇಂದ್ರ ಗೋವಿಂದರಾಜುರನ್ನು ಜಿಲ್ಲಾಧ್ಯಕ್ಷ ಎನ್.ಪರಮೇಶ್ ಅವರು ಆಯ್ಕೆ ಮಾಡಿ ನೇಮಕಾತಿ ಪತ್ರ ವಿತರಿಸಿದರು. ಸಭೆಯಲ್ಲಿ ಯುವ ಪರಿಷತ್ ನ ಜಿಲ್ಲಾಧ್ಯಕ್ಷ ಎನ್.ಪರಮೇಶ್, ಉಪಾಧ್ಯಕ್ಷ ಸಬ್ಬನಹಳ್ಳಿ ಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಎಂ.ನಾಗರಾಜು, ಖಜಾಂಚಿ ನಾಗಮಂಗಲ ಸೌಂದರ್ಯ, ಸಹ ಕಾರ್ಯದರ್ಶಿ ಮುನಿಸ್ವಾಮಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ಪಿ.ಜಿ.ಮಮತಾ, ಕೋಡಾಲ ರವಿ, ಜಿಲ್ಲಾ ಸಮಿತಿ ನಿರ್ದೇಶಕರಾದ ವರದಾ, ಶಾರದಾ, ಹಿರಿಯರಾದ ಪಾರ್ವತಮ್ಮ ಇತರರಿದ್ದರು.