ಡಿಕೆಶಿ ಸಮ್ಮುಖದಲ್ಲಿ ಯುವ ಕಾಂಗ್ರೆಸ್ಸಿಗರ ಅಧಿಕಾರ ಸ್ವೀಕಾರ

| Published : May 11 2025, 11:49 PM IST

ಸಾರಾಂಶ

ರಾಮನಗರ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಸಾಗರ್ ಹಾಗೂ ಪದಾಧಿಕಾರಿಗಳು ಭಾನುವಾರ ನಡೆದ ಯುವ ಪರ್ವ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಅವರಿಂದ ಕಾಂಗ್ರೆಸ್ ಧ್ವಜವನ್ನು ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.

ರಾಮನಗರ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಸಾಗರ್ ಹಾಗೂ ಪದಾಧಿಕಾರಿಗಳು ಭಾನುವಾರ ನಡೆದ ಯುವ ಪರ್ವ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಅವರಿಂದ ಕಾಂಗ್ರೆಸ್ ಧ್ವಜವನ್ನು ಪಡೆಯುವ ಮೂಲಕ ಅಧಿಕಾರ ಸ್ವೀಕರಿಸಿದರು.

ನಗರದಲ್ಲಿ ಆಯೋಜಿಸಿದ್ದ ಯುವ ಪರ್ವ ಸಮಾವೇಶದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಯುವಕರಿಗೆ ಅವಕಾಶ ನೀಡಿ:

ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್, ಮುಂಬರುವ ಜಿಪಂ-ತಾಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯುವ ಕಾಂಗ್ರೆಸ್ ಸದಸ್ಯರಿಗೆ ಅವಕಾಶ ನೀಡಬೇಕು. ಸರ್ಕಾರದ ವಿವಿಧ ಇಲಾಖೆಗಳ ಸಮಿತಿಗಳ ನಾಮ ನಿರ್ದೇಶನಗಳಲ್ಲಿಯೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಪ್ರತಿ ಹೋಬಳಿ ಮಟ್ಟದಲ್ಲಿ ಯುವ ಕಾಂಗ್ರೆಸ್ ಜನ ಸೇವಾ ಕೇಂದ್ರ ಸ್ಥಾಪಿಸಲಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಅವರ ಬೆನ್ನಿಗೆ ನಿಂತು ಪಕ್ಷ ಸಂಘಟನೆ ಮಾಡುವುದು. ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡುತ್ತೇವೆ. ಜೊತೆಗೆ ನಾಡು ನುಡಿ ನೆಲ ಜಲಕ್ಕೆ ಧಕ್ಕೆ ಬಂದಾಗ ಹೋರಾಟಕ್ಕೆ ಇಳಿಯಲು ಯುವ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಹೇಳಿದರು.

ನಾನು ಗೆಲ್ಲಲು ಕಾರಣರಾದ ಯುವ ಕಾಂಗ್ರೆಸ್ ಸೈನಿಕರಿಗೆ ಅನಂತ ಧನ್ಯವಾದಗಳು. ಯುವ ಕಾಂಗ್ರೆಸ್ ಗೆ ನಾನು ಅಧ್ಯಕ್ಷ ಅಲ್ಲ. ಎಲ್ಲ ಯುವಕರು ಅಧ್ಯಕ್ಷರೇ ಆಗಿದ್ದೀರಿ. ದೇಶದಲ್ಲಿ ನೂರಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಆದರೆ, ಯುವಕರಿಗಾಗಿ ಆಂತರಿಕ ಚುನಾವಣೆ ನಡೆಸಿ ನಾಯಕರನ್ನು ರೂಪಿಸುವ ಪಕ್ಷ ಕಾಂಗ್ರೆಸ್ ಮಾತ್ರ. ಇದಕ್ಕಾಗಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಚಂದ್ರಸಾಗರ್ ತಿಳಿಸಿದರು.

ಎಲ್ಲ ವರ್ಗದ ಯುವಕರಲ್ಲಿ ನಾಯಕತ್ವದ ಗುಣ ತುಂಬಿ:

ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಾಯಕರನ್ನು ಹುಟ್ಟು ಹಾಕುವ ಅವಕಾಶ ಯುವ ಕಾಂಗ್ರೆಸ್ ಕಲ್ಪಿಸಿಕೊಟ್ಟಿದೆ. ಯಾರು ನಾಯಕರನ್ನು ಹುಟ್ಟು ಹಾಕುತ್ತಾರೊ ಅವರೇ ನಿಜವಾದ ನಾಯಕ. ಯುವ ಕಾಂಗ್ರೆಸ್ಸಿಗರು ಪಕ್ಷವನ್ನು ಬಲಪಡಿಸುವ ಜೊತಗೆ ಪಂಚಾಯಿತಿ, ಬೂತ್ ಮಟ್ಟದಲ್ಲಿ ಎಲ್ಲ ವರ್ಗದ ಯುವಕರನ್ನು ಕರೆತಂದು ಅವರಲ್ಲಿ ನಾಯಕತ್ವ ಗುಣ ತುಂಬಬೇಕು ಎಂದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸ್ರಕಾರ ಬಡವರಿಗೆ 5 ಗ್ಯಾರಂಟಿಗಳನ್ನು ನೀಡಿದೆ. ಇದನ್ನು ಸಹಿಸದ ಬಿಜೆಪಿಯವರು ಗ್ಯಾರಂಟಿಗಳನ್ನು ನಿಲ್ಲಿಸಲು ಹುನ್ನಾರ ನಡೆಸುತ್ತಿದ್ದಾರೆ. ಮುಂದಿನ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗುವುದು ನಿಶ್ಚಿತ ಎಂದು ಹೇಳಿದರು.

ಕೆಲ ನಾಯಕರು ತಮ್ಮನ್ನು ತಾವು ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುತ್ತಾರೆ. ಆದರೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ನಾಯಕರು ನಿಜವಾದ ಮಣ್ಣಿನ ಮಕ್ಕಳಾಗಿದ್ದಾರೆ. ನಾಲ್ಕು ಕಟ್ಟಡಗಳನ್ನು ಕಟ್ಟಿ ತಮ್ಮನ್ನು ತಾವು ಮಣ್ಣಿನ ಮಕ್ಕಳು ಅಂತ ಹೇಳಿಕೊಂಡು ಕಣ್ಣೀರು ಹಾಕಿದರೆ ಜನ ನಂಬುವುದಿಲ್ಲ. ಮೊಸಳೆ ಕಣ್ಣೀರಿಗೆ ಜನರು ಮರಳಾಗುವ ಕಾಲ ಹೊರಟು ಹೋಗಿದೆ ಎಂದು ವಾಗ್ದಾಳಿ ನಡೆಸಿದರು.

ಯುವ ನಾಯಕರನ್ನು ಪ್ರೋತ್ಸಾಹಿಸಿ :

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ನಾಯಕರನ್ನು ಯುವ ಕಾಂಗ್ರೆಸ್ ಸೃಷ್ಟಿ ಮಾಡಿದೆ. ಯುವ ಕಾಂಗ್ರೆಸ್ ನಿಂದ ನಾಯಕರಾಗಿ ಬೆಳೆದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ, ಎಸ್ .ಎಂ. ಕೃಷ್ಣರ ನಂತರ ಡಿ.ಕೆ.ಶಿವಕುಮಾರ್ ಅವರೆಲ್ಲರು ಬೆಂಗಳೂರಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಯಾವುದೊ ಹಳ್ಳಿಯಿಂದ ಬಂದ ಯುವಕರನ್ನು ನಾಯಕರನ್ನಾಗಿ ಮಾಡಿ ಪ್ರೋತ್ಸಾಹ ನೀಡಬೇಕು ಅಂತ ಯುವ ಕಾಂಗ್ರೆಸ್ ಅನ್ನು ಮುಂಚೂಣಿಯಲ್ಲಿ ಕರೆದೊಯ್ಯಲಾಗುತ್ತಿದೆ. ಯುವಕರ ಮೇಲೆ ಡಿ.ಕೆ.ಶಿವಕುಮಾರ್ , ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ಎಲ್ಲ ನಾಯಕರ ಆಶೀರ್ವಾದ ಇರುತ್ತದೆ ಎಂದು ಹೇಳಿದರು.

11ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ನಡೆದ ಯುವ ಪರ್ವ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್ ಅವರಿಗೆ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರ ಮಾಡಿದರು.