ಸಾರಾಂಶ
ಹಾನಗಲ್ಲ: ಸ್ವಯಂ ಉದ್ಯೋಗದತ್ತ ಯುವ ಸಮುದಾಯ ಲಕ್ಷ್ಯವಹಿಸಿದರೆ ಉತ್ತಮ ಜೀವನಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ಪಡೆಯಲು ಸಾಧ್ಯವಾಗುತ್ತಿದ್ದು, ಕೇವಲ ಸರಕಾರಿ ಉದ್ಯೋಗದ ಧಾವಂತದಲ್ಲಿ ಕಾಲ ಹರಣ ಬೇಡ ಎಂದು ನ್ಯಾಶನಲ್ ಅಕಾಡೆಮಿ ಆಫ್ ರೂಡ್ಸೆಟ್ ಸಂಪನ್ಮೂಲ ವ್ಯಕ್ತಿ ಸುಮಿತ್ರಾ ಹುಡೇದಮನಿ ತಿಳಿಸಿದರು.ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ಹಾಗೂ ಹೊಲಿಗೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಿ ಮಾತನಾಡಿದ ಅವರು, ಕರಕುಶಲ ಕೆಲಸಗಳಿಗೆ ಇಂದಿಗೂ ಬೆಲೆ ಇದೆ. ಕಷ್ಟಪಡುವವರಿಗೆ ಈಗ ಒಳ್ಳೆಯ ಅವಕಾಶಗಳಿವೆ. ಮನೆಯಲ್ಲಿಯೇ ಇದ್ದು ಹಲವು ವಾಣಿಜ್ಯ ಉದ್ಯೋಗಗಳನ್ನು ಮಾಡಬಹುದಾಗಿದೆ. ಮನೆಯಲ್ಲಿ ಬಿಡುವಿನ ವೇಳೆಯಲ್ಲಿಯೇ ಬಟ್ಟೆ ಹೊಲಿಯುವುದು ಸೇರಿದಂತೆ ವಿವಿಧ ಸ್ವಯಂ ಉದ್ಯೋಗಗಳ ಮೂಲಕ ಉತ್ತಮ ಆದಾಯ ಪಡೆಯಲು ಸಾಧ್ಯ. ಸಾಧನೆಯ ಹಾದಿಯಲ್ಲಿ ಬರುವ ಅಡತಡೆಗಳನ್ನು ಸರಿಸಿ ಬದುಕಿನ ಯಶಸ್ಸು ಕಂಡುಕೊಳ್ಳಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಜೆರಾಲ್ಡ ಡಿಸೋಜಾ, ಸ್ವ ಉದ್ಯೋಗಗಳಿಗೆ ಬೇಕಾಗುವ ತರಬೇತಿ ನೀಡುವಲ್ಲಿ ನಮ್ಮ ಸಂಸ್ಥೆ ಹೆಚ್ಚಿನ ಆಸ್ಥೆ ವಹಿಸಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರಿಗೆ ಕಾಲ ಕಾಲಕ್ಕೆ ಸಹಾಯ ಮಾಡುವ ಮೂಲಕ ಅವರ ಪ್ರತಿಭೆ ಬೆಳಗಿಸುವಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಸಾಮಾಜಿಕ ನ್ಯಾಯಕ್ಕಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಪ್ರಗತಿ ಲೊಯೋಲ ತಾಲೂಕು ಒಕ್ಕೂಟದ ಅಧ್ಯಕ್ಷೆ ಸಂಗೀತಾ ಮಂತಗಿ, ಹೊಲಿಗೆ ತರಬೇತಿಯ ಶಿಕ್ಷಕರಾದ ಶೀಲಾವತಿ ಹಾಗೂ ವೀಣಾ ಮತ್ತು ಕಂಪ್ಯೂಟರ್ ತರಬೇತಿಯ ಶಿಕ್ಷಕರಾದ ನಾಗರತ್ನಾ ಕೊಪ್ಪದ ಹಾಗೂ ಸಲೋನಿ ಫರ್ನಾಂಡಿಸ್, ಗೀತಾ ಇದ್ದರು.