ಯುವಜನೋತ್ಸವ ಜೀವನ ಮೌಲ್ಯಗಳಿಗೆ ದಾರಿ ದೀಪ: ಸಚಿವ ಎಚ್‌.ಕೆ. ಪಾಟೀಲ

| Published : Oct 26 2025, 02:00 AM IST

ಸಾರಾಂಶ

ಗದಗ ಸನ್ಮಾರ್ಗ ಕಾಲೇಜಿನಲ್ಲಿ ಶನಿವಾರ ಜರುಗಿದ 2025ನೇ ಸಾಲಿನ ಯುವಜನೋತ್ಸವವನ್ನು ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿದರು.

ಗದಗ: ಯುವ ಜನಾಂಗಕ್ಕೆ ಯುವಜನೋತ್ಸವ ಕೇವಲ ಮೋಜು ಮಸ್ತಿಗಾಗಿ ಮಾತ್ರವಲ್ಲ. ಅದು ಅವರ ಉಜ್ವಲ ಭವಿಷ್ಯದ ಸೂಚಕ ಹಾಗೂ ಜೀವನ ಮೌಲ್ಯಗಳಿಗೆ ದಾರಿ ದೀಪವಾಗಬಲ್ಲದು ಎಂಬುದನ್ನು ಸಮಕಾಲೀನ ಯುವಪೀಳಿಗೆ ಅರ್ಥೈಸಿಕೊಂಡಾಗ ಈ ಯುವಜನೋತ್ಸವಕ್ಕೆ ಒಂದು ಸಾರ್ಥಕತೆ ಬರಲು ಸಾಧ್ಯ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.

ನಗರದ ಸನ್ಮಾರ್ಗ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಿಮ್ಹಾನ್ಸ್ ಬೆಂಗಳೂರು, ನೆಹರು ಯುವ ಕೇಂದ್ರ, ರಾಜ್ಯ ಯುವ ಸಂಘಗಳ ಒಕ್ಕೂಟ, ಲಯನ್ಸ್ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಜರುಗಿದ 2025ನೇ ಸಾಲಿನ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಯುವಕ ಮಂಡಳಗಳ ಸಂಖ್ಯೆಯನ್ನು ಹೆಚ್ಚಿಸುವ, ಹಾಗೆಯೇ ಅವುಗಳ ಮೂಲಕ ರಚನಾತ್ಮಕ ಚಟುವಟಿಕೆ ಮಾಡುವ ಉದ್ದೇಶ ಇದ್ದು, ಅದನ್ನು ಸಾರ್ಥಕ ಪಡಿಸುವಲ್ಲಿ ಯುವಜನ ಸಬಲೀಕರಣ ಇಲಾಖೆ ಪ್ರಯತ್ನ ಮಾಡಲಿ ಎಂದರು.

ಭವ್ಯ ಭಾರತವನ್ನು ರೂಪಿಸುವ ಯುವಜನಾಂಗ ಮಾದಕ ವಸ್ತುಗಳತ್ತ ಆಕರ್ಷಿತರಾಗದೇ ಸನ್ಮಾರ್ಗದಲ್ಲಿ ನಡೆದಾಗ ಅವರ ಉಜ್ವಲ ಭವಿಷ್ಯ ಹಾಗೂ ರಾಷ್ಟ್ರದ ಉತ್ಥಾನ ಸುಲಭ ಸಾಧ್ಯ ಎನ್ನುವ ತಮ್ಮ ಅಭಿಪ್ರಾಯಕ್ಕೆ ಸಾಕಷ್ಟು ಅಂಕಿ ಅಂಶಗಳನ್ನು ನೀಡುವ ಮೂಲಕ ಯುವಜನರ ಮನವನ್ನು ಪರಿವರ್ತಿಸುವ ಸಫಲ ಪ್ರಯತ್ನಗೈದರು. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸ್ಪರ್ಧಾಳುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿದರು.

ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಕಲಾವಿದರಿಗೆ ಸೂಕ್ತ ಗೌರವ, ಪ್ರಶಸ್ತಿಗಳನ್ನು ದೊರಕಿಸಿ ಕೊಡುವಲ್ಲಿ ಸಚಿವರ ಸಹಾಯವನ್ನು ಅಪೇಕ್ಷಿಸುವುದರ ಜೊತೆಗೆ ಸಚಿವರ ಮಾರ್ಗದರ್ಶನ, ನಮ್ಮ ಸಮಾರಂಭಕ್ಕೆ ಅತ್ಯಂತ ಅಗತ್ಯ. ಆ ರೀತಿಯ ಸಹಾಯ, ಸಹಕಾರ ಯಾವತ್ತೂ ಇರಲಿ ಎಂದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್.ಕೆ.ಆರ್., ಡಾ. ಜೆ.ಸಿ. ಶಿರೋಳ, ಸಿದ್ದು ಪಾಟೀಲ, ಸಾವಿತ್ರಿ ಲಮಾಣಿ, ಶಂಕ್ರಣ್ಣ ಸಂಕಣ್ಣನವರ, ರಾಜೇಶ ಕುಲಕರ್ಣಿ, ಎಂ.ಸಿ. ಹಿರೇಮಠ, ಪ್ರೇಮಾನಂದ ರೋಣದ, ಸಯ್ಯದ್‌ ಮತೀನ್ ಮುಲ್ಲಾ, ರೋಹಿತ ಒಡೆಯರ, ರಾಹುಲ್ ಒಡೆಯರ, ಪುನೀತ ದೇಶಪಾಂಡೆ, ಜಿ.ಬಿ. ಬೇವಿನಕಟ್ಟಿ, ರಾಜು ವರ್ಣೆಕರ, ರೇಣಕಾಪ್ರಸಾದ ಹಿರೇಮಠ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಅಂದಾನಯ್ಯ ವಿಭೂತಿ, ಎಚ್.ಎಸ್. ಸೋಂಪುರ, ಸಿದ್ದಣ್ಣ ಬಂಡಿ, ಹಬೀಬ ಇದ್ದರು.