ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳು, ಯುವಜನಾಂಗ ಮಾದಕ ವಸ್ತುಗಳಿಂದ ದೂರವಿರುವಂತೆ ಮಾಡಲು ಶಾಲಾ, ಕಾಲೇಜು ಹಂತಗಳಲ್ಲಿ ಅರಿವು ಅಗತ್ಯ ಎಂದು ಡಿವೈಎಸ್ಪಿ ಯಶವಂತ್ ಹೇಳಿದರು.ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ವಿರೋಧಿ ದಿನ ನೇರ ಪ್ರಸಾರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಲ್ಲಿ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರದಿಂದ ಈ ನೇರ ಪ್ರಸಾರದ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಆಯೋಜಿಸಲಾಗಿದೆ ಎಂದರು.
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಆರಂಭದಲ್ಲಿ ಮಕ್ಕಳಿಗೆ ಇದು ಖುಷಿ ಕೊಡುತ್ತದೆ ಎಂದು ನಂಬಿದ್ದಾರೆ. ಆದರೆ, ಭವಿಷ್ಯದಲ್ಲಿ ಅವರನ್ನು ದೊಡ್ಡ ಅನಾಹುತಗಳಿಗೆ ದೂಡುತ್ತದೆ ಎಂದು ಎಚ್ಚರಿಕೆ ನೀಡಿದರು.ಮಾದಕ ವಸ್ತುಗಳಿಗೆ ದಾಸರಾಗುತ್ತಿರುವ ಯುವಕರು, ಮಕ್ಕಳ ಭವಿಷ್ಯ ಹಾಳಾಗುವ ಜೊತೆಗೆ ಅವರ ಕುಟುಂಬದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಿದರೆ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು ಎಂದರು.
ಮಾದಕ ವ್ಯಸನಗಳಲ್ಲಿ ತೊಡಗಿರುವವರ ಬಗ್ಗೆ ತಿಳಿದರೆ ಆನ್ಲೈನ್ ಮೂಲಕವೂ ದೂರು ನೀಡಬಹುದು. ಮಾಹಿತಿ ನೀಡಿದವರ ಹೆಸರುಗಳನ್ನು ನಾವು ಗೌಪ್ಯವಾಗಿ ಇಡಲಾಗುವುದು. ಯಾವುದೇ ಭಯ ಬೇಡದೆ ಪೊಲೀಸರಿಗೆ ವಿಷಯ ತಿಳಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ಸರ್ಕಲ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮಾತನಾಡಿ, ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಕೈ ಜೋಡಿಸಬೇಕು. ನಿಮ್ಮ ಸ್ನೇಹಿತರು ಯಾರಾದರೂ ಈ ಮಾದಕ ವ್ಯಸನದಲ್ಲಿ ಭಾಗಿಯಾಗಿದ್ದರೆ ನಮ್ಮ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಯಾರೇ ಆದರೂ ಅಕ್ರಮ ಚಟುವಟಿಕೆ, ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರೆ ಅದು ದೊಡ್ಡ ಅಪರಾಧ. ಈ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರಿಯಬೇಕು. ಇಂತಹ ಕೃತ್ಯಗಳನ್ನು ಬುಡ ಸಹಿತ ಕಿತ್ತು ಹಾಕಲು ಪೊಲೀಸರ ಸಹಕಾರ ಸದಾ ಇರುತ್ತದೆ. ಇದಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.ರಾಜ್ಯಾದ್ಯಂತ ಜಿಲ್ಲಾ ಪೋಲಿಸ್ ಇಲಾಖೆಗಳು, ಶಾಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಜಾಥಾ, ವಿಚಾರಣ ಸಂಕೀರ್ಣ ಆಯೋಜನೆ, ಜಾಗೃತಿ ರ್ಯಾಲಿಗಳನ್ನು ಹಮ್ಮಿಕೊಂಡು ಮಾದಕ ವಸ್ತುಗಳ ವಿರುದ್ಧ ಅರಿವು ಮೂಡಿಸಲಾಗುತ್ತಿದೆ ಎಂದರು. ಈ ವೇಳೆ ಭಾರತೀ ಪಿಯು ಕಾಲೇಜು ಆಡಳಿತ ಅಧಿಕಾರಿ ಜವರೇಗೌಡ, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.