ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸಚಿವ ಎಚ್‌.ಕೆ. ಪಾಟೀಲ

| Published : Oct 26 2025, 02:00 AM IST

ಸಾರಾಂಶ

ಯುವಕರು ಕ್ರೀಡಾ ಮನೋಭಾವ ಅಳವಡಿಸಿಕೊಂಡರೆ ಆರೋಗ್ಯ ಮಾತ್ರವಲ್ಲ, ಮಾನಸಿಕ ಸದೃಢತೆ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ: ಕ್ರೀಡೆಗಳಲ್ಲಿ ಹೆಚ್ಚು ಪ್ರತಿಭೆಗಳಿರುವ ಜಿಲ್ಲೆ ನಮ್ಮದಾಗಿದೆ. ಇದು ನಮ್ಮ ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪಪೂ), ಜ. ತೋಂಟದಾರ್ಯ ವಿದ್ಯಾಪೀಠದ ತೋಂಟದ ಸಿದ್ದೇಶ್ವರ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಪಪೂ ಕಾಲೇಜು ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಸಕ್ತ ಸಾಲಿನ ಪಪೂ ಮಹಾವಿದ್ಯಾಲಯಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು ಕ್ರೀಡಾ ಮನೋಭಾವ ಅಳವಡಿಸಿಕೊಂಡರೆ ಆರೋಗ್ಯ ಮಾತ್ರವಲ್ಲ, ಮಾನಸಿಕ ಸದೃಢತೆ ಹಾಗೂ ನಾಯಕತ್ವ ಗುಣಗಳು ಬೆಳೆಯುತ್ತವೆ. ಇಂತಹ ಯುವ ಶಕ್ತಿಯೇ ದೇಶದ ಭವಿಷ್ಯವನ್ನು ರೂಪಿಸುತ್ತದೆ ಎಂದರು.

ಕ್ರೀಡೆ ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ. ಸೋಲಿನಲ್ಲಿ ಕಲಿಯುವ ನೈತಿಕತೆ, ಗೆಲುವಿನಲ್ಲಿ ಸಹ ವಿನಮ್ರತೆ ಇರಬೇಕೆಂಬ ಗುಣ ಕ್ರೀಡೆಯಿಂದಲೇ ಬರುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಲ್ಲಿ ಮಾತ್ರವಲ್ಲ ಕ್ರೀಡಾಂಗಣದಲ್ಲೂ ಸಮರ್ಥರಾಗಬೇಕು. ನಿಜವಾದ ಶಿಕ್ಷಣ ಶರೀರ, ಮನಸ್ಸು ಹಾಗೂ ಆತ್ಮದ ಸಮತೋಲನದಲ್ಲಿದೆ ಎಂದು ತಿಳಿಸಿದರು.

ಗದಗ ಜಿಲ್ಲೆಯ ವಿದ್ಯಾರ್ಥಿಗಳು ಕ್ರೀಡೆ ಮತ್ತು ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿಯೂ ಜಿಲ್ಲೆ ಮುಂಚೂಣಿಯಲ್ಲಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯು ಕಬ್ಬಡ್ಡಿ, ಹಾಕಿ, ಅಥ್ಲೆಟಿಕ್ ಪುಟ್ಬಾಲ್ ಕ್ರೀಡೆಗಳಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಯನ್ನು ತಂದುಕೊಟ್ಟಿದೆ. ಇದು ನಮ್ಮ ಹೆಮ್ಮೆ. ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಜೊತೆಗೆ ತರಬೇತಿಗೆ ಹಾಗೂ ಕ್ರೀಡಾ ಸೌಲಭ್ಯವನ್ನು ಸರ್ಕಾರದಿಂದ ಹೆಚ್ಚು ಹೆಚ್ಚು ಒದಗಿಸಲಾಗಿದೆ ಎಂದರು.

ಈ‌ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಕಡೇಮನಿ, ಯೋಗೇಶ್ ಕುಮಾರ, ಎಸ್.ಪಿ. ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ್ ಕೆ.ಆರ್., ಗಂಗಪ್ಪ ಎಂ, ಸಿದ್ದಲಿಂಗ ಮಸನಾಯಕ, ಶರಣು ಗೊಗೇರಿ, ಕೊಟ್ರೇಶ್ ವಿಭೂತಿ, ಕೊಟ್ರೇಶ್ ಮೆಣಸಿನಕಾಯಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಕರು, ನಿರ್ಣಾಯಕರು, ವಿದ್ಯಾರ್ಥಿಗಳು ಇದ್ದರು.