ಸಾರಾಂಶ
ಗದಗ: ಮನಸ್ಸು ನಮ್ಮ ಹತೋಟಿಯಲ್ಲಿದ್ದರೆ ಮಾತ್ರ ನಮ್ಮ ಗುರಿ ಮತ್ತು ಸಾಧನೆಯ ಶಿಖರವನ್ನು ತಲುಪಲು ಸಾಧ್ಯ ಎಂದು ಕೆಎಲ್ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾ. ಎ.ಕೆ. ಮಠ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಯುವ ದಿನೋತ್ಸವದಲ್ಲಿ ಅವರು ಮಾತನಾಡಿದರು.
ಪ್ರಸುತ್ತ ದಿನಮಾನಗಳಲ್ಲಿ ಯುವಕರಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಯುವಕರಲ್ಲಿ ಉತ್ಸಾಹ ಮತ್ತು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಯುವಕರು ಸ್ವಾಮಿ ವಿವೇಕಾನಂದರ ತತ್ವಗಳನ್ನು ಮೈಗೂಡಿಸಿಕೊಂಡು ಮುಂಬರುವ ದಿನಮಾನಗಳಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನವನ್ನು ರೂಪಿಸಿಕೊಳ್ಳಬೇಕು. ಯುವಕರಲ್ಲಿ ಏಕ್ರಾಗತೆ ಮತ್ತು ಜ್ಞಾನದ ಜತೆಗೆ ಆಧ್ಯಾತ್ಮಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಯುವಕರು ಉತ್ಸಾಹ ಮತ್ತು ಕ್ರಿಯಾಶಕ್ತಿಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವ ಮೂಲಕ ಗುರಿಯನ್ನು ತಲುಪಬೇಕು. ಇಚ್ಛಾಶಕ್ತಿ ಹೊಂದಿದ್ದರೆ ಮಾತ್ರ ಪ್ರತಿಯೊಂದು ಕಾರ್ಯಗಳಲ್ಲಿ ಯಶಸ್ಸು ಸಾಧಿಸಲು ಮುನ್ನಡೆಯನ್ನು ಬರೆಯುತ್ತದೆ. ಯುವಕರು ಸರಿಯಾದ ಸಮಯಕ್ಕೆ ಸೂಕ್ತ ಜ್ಞಾನವನ್ನು ಹೊಂದಿರುವ ಗುರುಗಳ ಮಾರ್ಗದರ್ಶನ ಪಡೆದಿಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ಸ್ವಾಮಿ ವಿವೇಕಾನಂದರು ಹೇಳುವಂತೆ ಯುವಕರಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎನ್ನುವ ರೀತಿಯಲ್ಲಿ ನಾವು ಕೂಡ ಜ್ಞಾನ ಸಂಪಾದನೆ ಗೈಯುವುದರ ಮೂಲಕ ಉತ್ತಮ ಕ್ರಿಯಾಶೀಲರಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಒಂದು ಕೊಡೆಗೆ ನೀಡಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾ.ಜೈ ಹನುಮಾನ.ಎಚ್.ಕೆ. ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರು ತಾಳ್ಮೆಯನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢವಾಗಲು ಜ್ಞಾನ ಮತ್ತು ಆಧ್ಯಾತ್ಮಿಕ ಮತ್ತು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಪುಸ್ತಕದ ಜ್ಞಾನವನ್ನು ಮಸ್ತಕದಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಮನುಷ್ಯ ಸಾಧನೆ ಮಾಡಲು ಅನುಕೂಲವಾಗುತ್ತದೆ. ಪ್ರತಿಯೊಂದು ಬರುವ ಕಷ್ಟಗಳಿಗೆ ಪುಸ್ತಕದಲ್ಲಿ ಉತ್ತರ ದೊರೆಯದಿದ್ದರೂ ಮಾರ್ಗದರ್ಶನ ಮಾತ್ರ ಖಂಡಿತ ಇರುತ್ತದೆ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಜ್ಞಾನವನ್ನು ಬೆಳೆಸಿಕೊಳ್ಳಲು ಗ್ರಂಥಾಲಯದಲ್ಲಿರುವ ಪುಸ್ತಕಗಳ ಜೊತೆಗೆ ಸ್ನೇಹವನ್ನು ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಪಥವನ್ನು ಹಿಡಿಯಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಐಕ್ಯೂಎಸ್ ಸಂಚಾಲಕ ಡಾ. ವಿಜಯ ಮುರದಂಡೆ, ಉಪನ್ಯಾಸಕರಾದ ಎಸ್.ಟಿ. ಮೂರಶಿಳ್ಳಿನ, ಡಾ. ಸಂತೋಷ ಪಾಟೀಲ, ಡಾ.ಜ್ಯೋತಿ ಸಿ.ವಿ., ಶರತ್. ಡಿ., ಡಾ.ಸಿ.ಬಿ. ರಣಗಟ್ಟಿಮಠ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಶರಣಪ್ಪ ಭದ್ರಾಪೂರ ಸ್ವಾಗತಿಸಿದರು. ಸಂತೋಷ ಭದ್ರಾಪೂರ ನಿರೂಪಿಸಿದರು. ಬಸಯ್ಯ ವೀರಾಪುರಮಠ ವಂದಿಸಿದರು.