- ನಗರದ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಯೊಂದಿಗೆ ಯುವಜನರು ತಾಂತ್ರಿಕ ಕೌಶಲ್ಯ ಮೈಗೂಡಿಸಿ ಕೊಳ್ಳುವ ಮೂಲಕ ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸೋಮವಾರ ನಗರದ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿ ಬದಲಾಗುತ್ತಿರುವ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಅಬ್ಬರ ಹೆಚ್ಚಾಗಿ ಮಾನವ ಶಕ್ತಿಯ ಬಳಕೆ ಕಡಿಮೆಯಾಗುತ್ತಿದೆ. ಈ ಸವಾಲಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಪದವಿಗೆ ಸೀಮಿತ ವಾಗದೆ ಅಗತ್ಯಕ್ಕೆ ತಕ್ಕಂತೆ ಹೊಸ ಕೌಶಲ್ಯ ಬೆಳೆಸಿಕೊಳ್ಳಬೇಕು. ಉದ್ಯೋಗ ಮೇಳಗಳ ಅವಕಾಶ ಸದುಪಯೋಗ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕಿವಿಮಾತು ಹೇಳಿದರು. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದ್ದಾರೆ. ಹಿಂದಿನ ’ಉದ್ಯೋಗಂ ಪುರುಷ ಲಕ್ಷಣಂ’ ಎನ್ನುವ ಕಾಲ ಬದಲಾಗಿದೆ. ಇಂದು ಮಹಿಳೆಯರೂ ಸಮಾಜದ ಎಲ್ಲ ಕ್ಷೇತ್ರ ಗಳಲ್ಲಿ ಸಮಾನವಾಗಿ ಪಾಲ್ಗೊಳ್ಳುವುದು ಆಶಾದಾಯಕ. ಯುವಜನರು ವಿವೇಕಾನಂದರ ಸಂದೇಶದಂತೆ ಆತ್ಮವಿಶ್ವಾಸದಿಂದ ಸಾಗಿದರೆ ಜಗತ್ತನ್ನೇ ಗೆಲ್ಲಬಹುದು. ಅಲ್ಲದೆ, ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಿಸ್ತು - ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಶಿಕ್ಷಣದ ನಂತರ ಬದುಕು ರೂಪಿಸಿ ಕೊಳ್ಳುವ ಕನಸು ಹೊತ್ತ ಯುವಜನತೆಗೆ ಈ ಉದ್ಯೋಗ ಮೇಳ ಒಂದು ಭರವಸೆ ವೇದಿಕೆ. ಮಲೆನಾಡು ಮತ್ತು ಬಯಲು ಸೀಮೆ ಹೊಂದಿದ ಈ ಜಿಲ್ಲೆಯಲ್ಲಿ ವಿದ್ಯಾರ್ಜನೆಗೆ ವಿಫುಲ ಅವಕಾಶಗಳಿವೆ. ಆದರೆ, ಇಲ್ಲಿ ದೊಡ್ಡ ಕೈಗಾರಿಕೆಗಳು ಅಥವಾ ಸಾಫ್ಟ್ವೇರ್ ಕಂಪನಿಗಳಿಲ್ಲದೆ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉದ್ಯೋಗಾವ ಕಾಶ ಬಹಳಷ್ಟು ಕಡಿಮೆ. ಹಾಗಾಗಿ ಸರ್ಕಾರ ವಿವಿಧ ಕಡೆಗಳ ಕೈಗಾರಿಕೆ ಮತ್ತು ಕಂಪನಿಗಳನ್ನು ಆಹ್ವಾನಿಸಿ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ.
ಕಳೆದ ವರ್ಷದ ಮೇಳದಲ್ಲಿ 1,500 ಅಭ್ಯರ್ಥಿಗಳ ಪೈಕಿ 500 ಜನರಿಗೆ ಉದ್ಯೋಗ ದೊರೆತಿದೆ. ಈ ಬಾರಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. 5,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿದ್ದಾರೆ ಎಂದರು. ಸಾಮಾನ್ಯವಾಗಿ ಪೋಷಕರು ಕೇವಲ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರವಷ್ಟೇ ಬದುಕು ಎಂದು ಯೋಚಿಸುತ್ತಾರೆ, ಆದರೆ ಇವುಗಳನ್ನು ಹೊರತುಪಡಿಸಿ ನೂರಾರು ಕ್ಷೇತ್ರಗಳಿವೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಂತಹ ಸಂಸ್ಥೆಗಳಲ್ಲಿ ಉತ್ತಮ ಅವಕಾಶವಿದೆ. ಕಲೆ, ಚಿತ್ರಕಲೆ ಮತ್ತು ಪುರಾತತ್ವ ಶಾಸ್ತ್ರಗಳಲ್ಲಿ ಆಸಕ್ತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಉದ್ಯೋಗ ಮೇಳದ ಮೂಲಕ ಅಭ್ಯರ್ಥಿಗಳಿಗೆ ನೇರ ಉದ್ಯೋಗಾವಕಾಶ ದೊರೆಯು ವುದಲ್ಲದೆ, ಮಾರುಕಟ್ಟೆಯಲ್ಲಿ ಯಾವ ರೀತಿ ಕೌಶಲ್ಯಗಳಿಗೆ ಬೇಡಿಕೆಯಿದೆ ಎಂಬುದು ಮನವರಿಕೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಕಂಪನಿಗಳ ಸಂದರ್ಶನ ಎದುರಿಸುವುದರಿಂದ ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಎಚ್.ಎಸ್. ಶ್ರಮದಿಂದ ಮೇಳ ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಶ್ಲಾಘಿಸಿದರು. ಜಿಪಂ ಸಿಇಒ ಕೀರ್ತನಾ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಪ್ರತಿಕ್ರಿಯೆ ದುಪ್ಪಟ್ಟಾಗಿದೆ. ಸುಮಾರು 150ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿವೆ. ಶಿಕ್ಷಣ ಇಲಾಖೆ ಮಾರ್ಗದರ್ಶನದಂತೆ ಆಯೋಜಿಸಲಾದ ಮೇಳದಲ್ಲಿ ಕೇವಲ ಸಾಂಪ್ರದಾಯಿಕ ಉದ್ಯೋಗಗಳಾದ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ವೃತ್ತಿಗೆ ಸೀಮಿತವಾಗದೆ, ಲಿಂಗ್ವಿಸ್ಟ್ (ಭಾಷಾ ತಜ್ಞರು), ಆಂಥ್ರೋಪಾ ಲಜಿಸ್ಟ್ ಹಾಗೂ ಪುರಾತತ್ವ ಶಾಸ್ತ್ರಜ್ಞರಂತಹ ವಿನೂತನ ವೃತ್ತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸ ಲಾಗುತ್ತಿದೆ. ಭಾಷಾಂತರಕಾರರಾಗಿ ಕೆಲಸ ಮಾಡುವವರಿಗೆ ದೊಡ್ಡ ಅವಕಾಶಗಳಿವೆ. ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ದಿಂದ ಬಾಧಿತವಾಗದ ಇಂತಹ ಸೃಜನಶೀಲ ವೃತ್ತಿಗಳತ್ತ ಯುವಕರು ಗಮನ ಹರಿಸಬೇಕು ಎಂದರು. ಈ ಮೇಳದಲ್ಲಿ ಕನಿಷ್ಠ ಏಳನೇ ತರಗತಿ ಅನುತ್ತೀರ್ಣ ಅಭ್ಯರ್ಥಿಗಳಿಂದ ಹಿಡಿದು ಸ್ನಾತಕೋತ್ತರ ಪದವೀವರೆಗೂ ಎಲ್ಲರಿಗೂ ಮುಕ್ತ ಅವಕಾಶವಿದೆ. ಜಿಲ್ಲಾಧಿಕಾರಿಗಳು 100 ಕಂಪನಿಗಳನ್ನು ಆಹ್ವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶಾಸಕರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರು ಈ ಮೇಳದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ .ಶಿವಾನಂದಸ್ವಾಮಿ, ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯರಾಮಗೌಡ, ಜಿಪಂ ಉಪ ಕಾರ್ಯದರ್ಶಿ ಎಚ್.ಎಸ್.ಸುಜಾತ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. -- ಬಾಕ್ಸ್: --ವಿವಿಧ ವಲಯಗಳಲ್ಲಿರುವ ಅವಕಾಶ ಬಳಸಲು ಡಿಸಿ ಸಲಹೆ
ಯುವಜನತೆ ಕೇವಲ ಸಾಂಪ್ರದಾಯಿಕ ಸರ್ಕಾರಿ ನೌಕರಿ, ವೈದ್ಯಕೀಯ ಅಥವಾ ಎಂಜಿನಿಯರಿಂಗ್ ವೃತ್ತಿಗಳಿಗೆ ಸೀಮಿತ ವಾಗಬಾರದು. ವಿವಿಧ ವಲಯಗಳಲ್ಲಿರುವ ಅವಕಾಶ ಬಳಸಿಕೊಳ್ಳಬೇಕು. ಉದ್ಯೋಗದ ಮಾಹಿತಿಗೆ ಪತ್ರಿಕೆ, ದೂರದರ್ಶನದ ಸಂದರ್ಶನ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಜಿಲ್ಲಾಧಿಕಾರಿ ನಾಗರಾಜ್ ಸಲಹೆ ನೀಡಿದರು. 23 ಸಿಕೆಎಂ 8 ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಡಿಸಿ ನಾಗರಾಜ್, ಕೀರ್ತನಾ ಸೇರಿದಂತೆ ಮತ್ತಿತರರು ಇದ್ದರು.