ನವಯುಗದ ಯುವಕರು ರಾಜ್ಯ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ದಿಯ ಕನಸನ್ನು ಹೊತ್ತಿರುವ ಜೆಡಿಎಸ್ ನ್ನು ಬೆಂಬಲಿಸಬೇಕೆಂದು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿಯೂ, ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಸಂಸ್ಥಾಪಕರೂ ಆಗಿರುವ ದೊಡ್ಡಾಘಟ್ಟ ಚಂದ್ರೇಶ್ ಯುವಕರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ನವಯುಗದ ಯುವಕರು ರಾಜ್ಯ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ದಿಯ ಕನಸನ್ನು ಹೊತ್ತಿರುವ ಜೆಡಿಎಸ್ ನ್ನು ಬೆಂಬಲಿಸಬೇಕೆಂದು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿಯೂ, ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್ ನ ಸಂಸ್ಥಾಪಕರೂ ಆಗಿರುವ ದೊಡ್ಡಾಘಟ್ಟ ಚಂದ್ರೇಶ್ ಯುವಕರಿಗೆ ಕರೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ರಾಜ್ಯ ಕಂಡ ಅತ್ಯಂತ ಹಿರಿಯ ರಾಜಕೀಯ ಮುತ್ಸದ್ದಿಗಳಾಗಿರುವ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಜೆ ಡಿ ಎಸ್ ನ್ನು ಯುವಕರು ಬೆಂಬಲಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.

ತಾವು ಮುಂಬರುವ ದಿನಗಳಲ್ಲಿ ಯುವಕರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರಗಳನ್ನು ಆಯೋಜಿಸುವೆ. ನಮ್ಮ ತಾಲೂಕಿನಿಂದಲೂ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ಆಗಬೇಕೆಂಬ ಕನಸಿದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಭರವಸೆಯನ್ನು ದೊಡ್ಡಾಘಟ್ಟ ಚಂದ್ರೇಶ್ ನೀಡಿದರು. ಮಕ್ಕಳ ತಜ್ಞ ಡಾ.ನಂಜಪ್ಪ ಮಾತನಾಡಿ ತಾಲೂಕಿನಲ್ಲಿ ಯುವ ಜನಪ್ರತಿನಿಧಿಯ ಅಗತ್ಯವಿದೆ. ಯುವಕರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕನ ಅವಶ್ಯಕತೆ ಇದೆ. ಈಗ ದೊಡ್ಡಾಘಟ್ಟ ಚಂದ್ರೇಶ್ ಯುವಕರ ಆಶಾಕಿರಣವಾಗಿದ್ದಾರೆ. ಅವರನ್ನು ಬೆಂಬಲಿಸುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರು. ಜೆಡಿಎಸ್ ನ ವಿದ್ಯಾರ್ಥಿ ಘಟಕದ ಅಧ್ಯಕ್ಷ ಋತ್ವಿಕ್ ಮಾತನಾಡಿ ಯುವಕರ ಆಶಾಕಿರಣವಾಗಿರುವ ದೊಡ್ಡಾಘಟ್ಟ ಚಂದ್ರೇಶ್ ಸಾವಿರಾರು ಸೇವಾ ಕಾರ್ಯಗಳನ್ನು ನಿಸ್ವಾರ್ಥದಿಂದ ಮಾಡಿದ್ದಾರೆ. ಅವರು ಜನ ಸೇವೆಯೇ ಜನಾರ್ಧನನ ಸೇವೆ ಎಂದು ತಿಳಿದಿದ್ದಾರೆ. ಅವರ ಸೇವೆ ಮತ್ತು ಮಾರ್ಗದರ್ಶನದಲ್ಲಿ ಯುವಕರೆಲ್ಲಾ ಹೆಜ್ಜೆ ಹಾಕೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ನಾಗರಾಜಯ್ಯ ಕಣಕೂರು ಮನೋಜ್, ಡಿ.ಹೊಸಳ್ಳಿ ಚಂದನ್, ದೊಡ್ಡ ಮಾರ್ಗೋನ ಹಳ್ಳಿ ಪ್ರಕಾಶ್ ಸೇರಿದಂತೆ ಇತರರಿದ್ದರು.