ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಸಂರಕ್ಷಣೆ ಮಾಡಬೇಕು. ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುಖಕರವಾಗಿರುತ್ತದೆ

ಕುಷ್ಟಗಿ: ಪರಿಸರ ಉಳಿವಿನಿಂದ ಮಾತ್ರ ಮಾನವ ಜೀವನ ಸುಖಕರವಾಗಿರಲು ಸಾಧ್ಯ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಉಳಿಸುವ ಕಾರ್ಯ ಎಲ್ಲರೂ ಕೈಗೆತ್ತಿಕೊಳ್ಳಬೇಕು ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಅಭಿಪ್ರಾಯಪಟ್ಟರು.

ಪಟ್ಟಣದ ಈದ್ಗಾ ಮೈದಾನದ ಹತ್ತಿರದ ಖಬರಸ್ತಾನದಲ್ಲಿ ನೂತನ ಗೇಟ್ ಅಳವಡಿಕೆ ಹಾಗೂ ನಾಮಫಲಕ ಉದ್ಘಾಟನೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಸಂರಕ್ಷಣೆ ಮಾಡಬೇಕು. ಪರಿಸರ ಉಳಿದರೆ ಮಾತ್ರ ಮಾನವ ಜೀವನ ಸುಖಕರವಾಗಿರುತ್ತದೆ ಎಂದು ಹೇಳಿದರು.

ದಿನೇ ದಿನೇ ಪರಿಸರ ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮರಗಳ ಕಡಿತ, ಪ್ಲಾಸ್ಟಿಕ್ ಬಳಕೆ ಹಾಗೂ ನೀರಿನ ದುರುಪಯೋಗದಿಂದ ಪ್ರಕೃತಿಗೆ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಸ್ಲೀಂ ಸಮುದಾಯದ ಯುವಕರು ಸರ್ಕಾರದ ಯೋಜನೆ ತಿಳಿದುಕೊಂಡು ಎಲ್ಲ ಜನರಿಗೂ ತಲುಪಿಸುವ ಕಾರ್ಯ ಮಾಡಬೇಕಿದೆ. ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದ ಅವರು, ಯುವಕರು ಪರಿಸರ ಸಮಾಜಮುಖಿ ಕಾರ್ಯಗಳ ಜತೆಗೆ ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಖಬರಸ್ತಾನದಲ್ಲಿ ಹೆಚ್ಚೆಚ್ಚು ಗಿಡ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಖಬರಸ್ತಾನಕ್ಕೆ ನೂತನ ಗೇಟ್ ಮತ್ತು ನಾಮಫಲಕ ದೇಣಿಗೆಯಾಗಿ ನೀಡಿದ ಸಮಾಜದ ಮುಖಂಡ ಕರೀಂಸಾಬ ಚೌದರಿ ಅವರನ್ನು ಕಮಿಟಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ನಜೀರಸಾಬ ಮೂಲಿಮನಿ, ಸಮಾಜದ ಗಣ್ಯರಾದ ಜಮೀರ್ ಟಕ್ಕಳಕಿ, ಸೈಯದ್, ತಾಹೇರ್ ಕಪಾಲಿ, ಆಲಂ ಕಲ್ಬುರ್ಗಿ, ಆಸಿಫ್ ಗಂದೆಣ್ಣಿ, ಮೆಹಬೂಬ ವಾಲಿಕಾರ್, ರಹೀಮ್ ಚೌದರಿ, ನೂರಅಹ್ಮದ್, ಇಜಾಜ್ ಕಪಾಲಿ ಸೇರಿದಂತೆ ಖಬರ್‌ಸ್ತಾನ ಯುವಕರು ತಂಡದ ಸದಸ್ಯರು ಸೇರಿದಂತೆ ಅನೇಕರು ಇದ್ದರು.