ಸಾರಾಂಶ
ದೇಶದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದ್ದಾಗಿದೆ. ಇಂತಹ ಯುವಶಕ್ತಿಯಲ್ಲಿ ಶೇ. 10ರಷ್ಟು ಜನ ದುಶ್ಚಟಗಳಿಗೆ ಅಂಟಿಕೊಂಡು ಅದರಿಂದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದುಶ್ಚಟಗಳಿಗೆ ಅಂಟಿಕೊಂಡಾಗ ಅವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ.
ಧಾರವಾಡ:
ಮಾದಕ ದ್ರವ್ಯಗಳ ಸೇವನೆಯಿಂದ ಯುವ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ದುಶ್ಚಟಗಳಿಗಾಗಿ ಅಪಾರ ಪ್ರಮಾಣದ ಹಣದ ಅವಶ್ಯಕತೆಯಿಂದಾಗಿ ಕೊಲೆ, ದರೋಡೆಯಂತಹ ಕೃತ್ಯಗಳಲ್ಲಿ ಯುವಕರು ಭಾಗಿಯಾಗಿ ಶಿಕ್ಷೆಗೊಳಗಾಗುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ಹೇಳಿದರು.ಇಲ್ಲಿಯ ಶ್ರೀನಗರದ ಉಷಾ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ, ಎಸ್.ಆರ್. ತಲ್ಲೂರ ಫೌಂಡೇಶನ್, ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಇತರೆ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಮಾದಕ ವ್ಯಸನದ ಕುರಿತು ಅರಿವು ಮತ್ತು ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿದ ಅವರು, ಎಲ್ಲ ತರಹದ ಕೃತ್ಯಗಳಿಗಿರುವ ಶಿಕ್ಷೆಗಳಿಗಿಂತ ಹೆಚ್ಚು ಅವಧಿಯ ಕಠಿಣ ಶಿಕ್ಷೆಯನ್ನು ಮಾದಕ ದ್ರವ್ಯಗಳ ಪೂರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ವಿಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚರಿಕೆಯಿಂದ ಇರಬೇಕು ಎಂದರು.ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದ್ದಾಗಿದೆ. ಇಂತಹ ಯುವಶಕ್ತಿಯಲ್ಲಿ ಶೇ. 10ರಷ್ಟು ಜನ ದುಶ್ಚಟಗಳಿಗೆ ಅಂಟಿಕೊಂಡು ಅದರಿಂದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದುಶ್ಚಟಗಳಿಗೆ ಅಂಟಿಕೊಂಡಾಗ ಅವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ. 1985ರ ಎನ್ಡಿಪಿಎಸ್ ಕಾಯ್ದೆಯನ್ವಯ ಮಾದಕ ದ್ರವ್ಯಗಳನ್ನು ಹಂಚಿಕೆ ಮಾಡುವವರಿಗೆ ಅತೀ ಹೆಚ್ಚು ಶಿಕ್ಷೆಗೆ ಗುರಿಯಾಗುತ್ತಾರೆ, ಇಂತಹ ದುಶ್ಚಟಗಳಿಂದ ದೂರವಿರಲು ಯುವ ಸಮಾಜಕ್ಕೆ ಅರಿವು ಮೂಡಿಸುವುದರಲ್ಲಿ ಇಂತಹ ಕಾರ್ಯಕ್ರಮಗಳಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ, ಯಾವುದು ಸರಿ, ಯಾವುದು ತಪ್ಪು, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಮನುಷ್ಯ ತನ್ನ ಮನಸ್ಸನ್ನು ಕೇಳಿ ಮಾಡಿದರೆ ಅದಾಗಿಯೇ ಹೇಳುತ್ತದೆ. ತಪ್ಪು ಕೆಲಸ ಮಾಡುತ್ತಿದ್ದರೆ ಅದು ತಪ್ಪು, ಅದನ್ನು ಮಾಡಬೇಡ ಎಂದು ಹೇಳುತ್ತದೆ. ಹಣದ ದಾಹ ಇಂದು ಮನುಷ್ಯನ ಮನಸ್ಸನ್ನು ಹಾಳು ಮಾಡುತ್ತಿದೆ ಎಂದರು.ಸಂಜಯ ಇಂಚಲ, ಸುಜಾತಾ ಗದಗ, ಎಸ್.ಆರ್. ತಲ್ಲೂರ ಫೌಂಡೇಶನ್ ಕಾರ್ಯದರ್ಶಿ ಡಾ. ಸುಮಾ ತಲ್ಲೂರ, ಪ್ರಕಾಶ ಬಾಳಿಕಾಯಿ ಇದ್ದರು. ಡಾ. ಬಸವರಾಜ ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಅಶ್ವಿನಿ ಮೊಕಾಶಿ ನಿರೂಪಿಸಿದರು. ಜ್ಯೋತಿ ಹುಲಮನಿ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ಶಿವಾಜಿ ಕಡ್ಡೆಪ್ಪನವರ ವಂದಿಸಿದರು.