ಸಾರಾಂಶ
ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಆಯವ್ಯಯ ಕುರ್ಚಿ ಉಳಿಸುವ ಬಜೆಟ್ ಅಲ್ಲ. ಬದಲಾಗಿ ಇದು ರೈತರನ್ನು, ನಾರಿ ಶಕ್ತಿಯನ್ನು, ಯುವಶಕ್ತಿಯನ್ನು, ಬಡವರನ್ನು ಉಳಿಸುವ ಬಜೆಟ್ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಸಂಸತ್ ಅಧಿವೇಶನದ ಆಯವ್ಯಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಆಯವ್ಯಯವನ್ನು ಕುರ್ಚಿ ಬಚಾವೋ, ಮಿತ್ರ ಪಕ್ಷಗಳ ಬಜೆಟ್, ಎಂದು ನಕಾರಾತ್ಮಕವಾಗಿ ವಿರೋಧ ಪಕ್ಷಗಳು ಹೇಳಿರುವುದು ವಿಷಾದನೀಯ. ಇದು ಭಾರತದ ಆರ್ಥಿಕತೆ ಉಳಿಸುವ ಬಜೆಟ್ ಹಾಗೂ ದೇಶ ಉಳಿಸುವ ಬಜೆಟ್ ಎಂದು ಪ್ರತಿಪಾದಿಸಿದರು.
ದೂರದೃಷ್ಟಿಯ ಬಜೆಟ್ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಿರುವ ಆಯವ್ಯಯ ಆರ್ಥಿಕತೆ ಹಾಗೂ ಸಮಾಜ ಕಲ್ಯಾಣದ ನಡುವೆ ಸಮತೋಲನ ಸಾಧಿಸಿದೆ. ಇದು ಪ್ರಧಾನಿ ಮೋದಿಯವರ ವಿಕಸಿತ ಭಾರತದ ದೂರದೃಷ್ಟಿಯನ್ನು ತೋರುತ್ತಿದ್ದು, ಸಮಾಜದ ಎಲ್ಲ ವರ್ಗಗಳಿಗೆ ಲಾಭ ದೊರೆಯುವಂತೆ ಈ ಬಜೆಟ್ ರೂಪಿಸಲಾಗಿದೆ ಎಂದರು.11 ಕೋಟಿ ರೈತರಿಗೆ ನೆರವುಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಕೂಡಲೇ ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ನೆರವು ನೀಡಿದ್ದಾರೆ.
ಈವರೆಗೆ 11 ಕೋಟಿ ರೈತರಿಗೆ ರೂ 3.24 ಲಕ್ಷ ಕೋಟಿ ನೀಡಿದ್ದಾರೆ. ಯುಪಿಎ ಇದ್ದಾಗ 2014 ರಲ್ಲಿ ಕೃಷಿಗೆ ಕೇವಲ ರೂ 22,000 ಕೋಟಿ ನೀಡಲಾಗಿತ್ತು. ಈ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ 2024 ರಲ್ಲಿ ರೂ 1.52 ಲಕ್ಷ ಕೋಟಿಗೆ ಏರಿಸಿದ್ದಾರೆ. ಆದರೂ ಬಿಜೆಪಿ ರೈತ ವಿರೋಧಿ ಎಂದು ವಿರೋಧ ಪಕ್ಷಗಳು ಹೇಳುತ್ತವೆ. 2013-14 ರಲ್ಲಿ ಯುಪಿಎ ರೈತರಿಗೆ ರೂ 7 ಲಕ್ಷ ಕೋಟಿ ಸಾಲ ನೀಡಿದ್ದರೆ, ನರೇಂದ್ರ ಮೋದಿ ಸರ್ಕಾರವೀಗ ರೂ 19 ಲಕ್ಷ ಕೋಟಿ ಸಾಲ ನೀಡಲಿದೆ ಎಂದರು.ಮೋದಿ ಸರ್ಕಾರ 14 ಮತ್ತು 15 ನೇ ಆರ್ಥಿಕ ಆಯೋಗದ ವರದಿಯನ್ನು ಸ್ವೀಕಾರ ಮಾಡಿದೆ. ಕಳೆದೊಂದು ದಶಕದಲ್ಲಿ ಶೇ 41ರಿಂದ ಶೇ 42 ತೆರಿಗೆ ರಾಜ್ಯಗಳೊಂದಿಗೆ ಹಂಚಿಕೆಯಾಗಿದೆ. ಹಿಂದೆ ಅದು ಶೇ 30ರಿಂದ 32 ಇತ್ತು. ಮೋದಿ ಸರ್ಕಾರ ಯುವಜನರ ಸಬಲೀಕರಣಕ್ಕೆ ಸದಾ ಶ್ರಮಿಸಲಿದೆ. ಇದಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡಲಿ, ಬಿಡಲಿ, ಬಿಜೆಪಿ ಸದಾ ರೈತರು, ಮಹಿಳೆಯರು, ಯುವಜನರಿಗಾಗಿ ಬದ್ಧತೆಯಿಂದ ದುಡಿಯಲಿದೆ ಎಂದರು.