ಸಾರಾಂಶ
ದಾವಣಗೆರೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೀಘ್ರವೇ ಸಿಎಂ ಆಗ್ತಾರೆ ಎಂದು ಪುನರುಚ್ಚರಿಸಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ, ಇದೇ ವೇಳೆ, ‘ಶೀಘ್ರವೇ 11 ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರುವವರಿದ್ದಾರೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 11 ಜನ ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರುವವರಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರು ತಾವಾಗಿಯೇ ಕಾಂಗ್ರೆಸ್ಗೆ ಬರುತ್ತೇವೆ ಎಂದರೆ ಬೇಡ ಎನ್ನಲು ಆಗುತ್ತಾ? ಬರುವವರನ್ನು ಸೇರಿಸಿಕೊಳ್ಳದೇ ಇರಲು ಆಗುತ್ತಾ ಎಂದು ಪ್ರಶ್ನಿಸಿದರು.
‘ಡಿಕೆಶಿಯವರು ಪಕ್ಷದ ಸಂಘಟನೆಗೆ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದಾರೆ. ಉಳಿದವರಿಗೆ ಇದು ಸಾಧ್ಯವಾಗುತ್ತಾ? ಉಳಿದವರಿಗೆ ಈ ರೀತಿ ಬೇರೆ ಪಕ್ಷದವರನ್ನು ಕರೆತರಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಅಧಿಕಾರ ಬೇಕು ಅಷ್ಟೇ. ಅವರು ಈ ರೀತಿ ‘ಆಪರೇಷನ್’ ಮಾಡಿ ಕರೆತರಲಿ ನೋಡೋಣ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಸವಾಲು ಹಾಕಿದರು.
‘ಕೆಲವರು ಮಾತನಾಡುತ್ತಾರೆ ಅಷ್ಟೇ. ತಮಗೆ ಮಾಡಿಟ್ಟ ಊಟವನ್ನು ಮಾಡುವುದಕ್ಕೆ ಮಾತ್ರ ಬರುತ್ತಾರೆ. ಆದರೆ, ಡಿಕೆಶಿ ಕೆಲಸ ಮಾಡುತ್ತಾರೆ. ಕಷ್ಟಪಟ್ಟವರಿಗೆ ಒಳ್ಳೆಯ ದಿನಗಳು ಇದ್ದೇ ಇರುತ್ತವೆ. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರವನ್ನೂ ಗೆಲ್ಲಿಸಿಕೊಂಡು ಬಂದವರು ಕೆಪಿಸಿಸಿ ರಾಜ್ಯಾಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ. ಉಪ ಚುನಾವಣೆ ವೇಳೆಯೂ ಆಪರೇಷನ್ ಪ್ರಕ್ರಿಯೆ ನಡೆಸಿ ಯಶಸ್ವಿಯಾಗಿದ್ದಾರೆ. ಇದನ್ನೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಗಮನಿಸುತ್ತಿದೆ’ ಎಂದು ಹೇಳಿದರು.
ಡಿ.ಕೆ.ಶಿವಕುಮಾರ ಅವರ ಮಾತು ನೋಡುವವರ ದೃಷ್ಟಿಕೋನದ ಮೇಲೆ ಹೋಗುತ್ತದೆ. ಕೆಟ್ಟದಾಗಿ ನೋಡಿದರೆ ಕೆಟ್ಟದಾಗಿ ಕಾಣುತ್ತದೆ, ತಪ್ಪಾಗಿ ಅರ್ಥೈಸಿಕೊಂಡರೆ ತಪ್ಪಾಗಿ ಅದು ಕೇಳಿಸುತ್ತದೆ. ಹೋರಾಟದ ಮನೋಭಾವ ಅವರದು ಎಂದರು.