ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ ಮೊದಲ ವಾರ ತಲಾ 50 ಕೋಟಿ ರು. ವಿಶೇಷ ಅನುದಾನ ನೀಡಲಿದ್ದಾರೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ ಮೊದಲ ವಾರ ತಲಾ 50 ಕೋಟಿ ರು. ವಿಶೇಷ ಅನುದಾನ ನೀಡಲಿದ್ದಾರೆ. ಬೆನ್ನಲ್ಲೇ ಪ್ರತಿ ಜಿಲ್ಲಾವಾರು ಹಣಕಾಸು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನಕ್ಕಾಗಿ ನಮ್ಮ ಸರ್ಕಾರದಲ್ಲಿ ಸಮಸ್ಯೆಯಿಲ್ಲ. ಏ.1ರಿಂದ ಬಜೆಟ್ ಶುರುವಾಗಿದೆ. ಹಣ ಸಂಗ್ರಹಕ್ಕೆ 2-3 ತಿಂಗಳು ಬೇಡವೇ? ಈಗ ಮುಖ್ಯಮಂತ್ರಿಗಳೇ ಪ್ರತಿ ಕ್ಷೇತ್ರಕ್ಕೂ ತಲಾ 50 ಕೋಟಿ ರು. ಅನುದಾನ ನೀಡುತ್ತಿದ್ದಾರೆ. ಶಾಸಕರ ಬೇಡಿಕೆಗಳ ಪ್ರಕಾರ ಅನುದಾನ ನೀಡುತ್ತಾರೆ. ಕ್ಷೇತ್ರವಾರು 5-10 ಕೋಟಿ ರು. ವ್ಯತ್ಯಾಸವಾಗಬಹುದು. ಆದರೆ ಎಲ್ಲಾ ಕ್ಷೇತ್ರಗಳಿಗೂ ನೀಡಲಿದ್ದಾರೆ. ಜತೆಗೆ ಸಿದ್ದರಾಮಯ್ಯ ಜುಲೈ ಮೊದಲ ವಾರದಿಂದ ಜಿಲ್ಲಾವಾರು ತ್ರೈಮಾಸಿಕ ಹಣಕಾಸು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿಲ್ಲ. ತೆರಿಗೆ ಸರಿಯಾಗಿ ಬರುತ್ತಿದೆ. ಹಣಕಾಸು ನಿರ್ವಹಣೆ ಸೂಕ್ತವಾಗಿ ಆಗುತ್ತಿದೆ. ಆದರೆ ಹಿಂದಿನ ಸರ್ಕಾರವು ಕಾಮಗಾರಿಗಳ ಬಿಲ್ಗಳ ಬಾಕಿ ಉಳಿಸಿ ಹೋಗಿದೆ. ನಾವು ಗ್ಯಾರಂಟಿಗಳಿಗೆ 52,000 ಕೋಟಿ ರು. ನೀಡುತ್ತಿದ್ದೇವೆ. 7ನೇ ವೇತನ ಆಯೋಗದ ಭಾರ 20,000 ಕೋಟಿ ರು. ಜಾಸ್ತಿ ಆಗಿದೆ. ಇದರ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ರಾಯರಡ್ಡಿ ಹೇಳಿದರು.
ಬೆಂಗಳೂರಿಗೆ 50,000 ಕೋಟಿ ರು. ಪ್ಯಾಕೇಜ್: ಕೇಂದ್ರಕ್ಕೆ ಸಿಎಂ ಬೇಡಿಕೆ
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಮೂಲಸೌಕರ್ಯಕ್ಕಾಗಿ 50,000 ಕೋಟಿ ರು. ವಿಶೇಷ ಪ್ಯಾಕೇಜ್ ಕೇಳಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಶೇ.40 ರಷ್ಟು ಜನಸಂಖ್ಯೆ ಹೊರ ರಾಜ್ಯದವರದ್ದು. 1.40 ಕೋಟಿಯಷ್ಟು ಜನಸಂಖ್ಯೆ ಇದ್ದರೆ ಇದರಲ್ಲಿ ಶೇ.40ರಷ್ಟು ಮಂದಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿ ಬೇರೆ ರಾಜ್ಯದವರೇ ಇದ್ದಾರೆ. ಪ್ರತಿ ವರ್ಷ ಶೇ.2 ರಷ್ಟು ಜನಸಂಖ್ಯೆ ವಲಸೆ ಬರುತ್ತಿದೆ. ಹೀಗಾಗಿ ಆ ರಾಜ್ಯಗಳಿಗೆ ನೀಡುವ ಹಣಕಾಸು ಪಾಲನ್ನೂ ಬೆಂಗಳೂರಿಗೆ ನೀಡಬೇಕು ಎಂದು ವಿಸ್ತೃತ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು 15ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಮರುಕಳಿಸದಂತೆ 16ನೇ ಹಣಕಾಸು ಆಯೋಗದಲ್ಲಿ ನ್ಯಾಯ ಒದಗಿಸಿಕೊಡಲು ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲು ಶೇ. 4.71 ಇತ್ತು. 16ನೇ ಹಣಕಾಸು ಆಯೋಗದ ವರದಿಯಲ್ಲಿ ಇಷ್ಟಾದರೂ ನೀಡಬೇಕು ಎಂದು ಕೋರಿದ್ದಾರೆ ಎಂದರು.