ಕೋಮುಗಲಭೆ ವಿರುದ್ಧ ಮುಲಾಜಿಲ್ಲದೆ ಕ್ರಮ: ಡಾ.ಜಿ.ಪರಮೇಶ್ವರ್

| N/A | Published : May 31 2025, 12:27 AM IST / Updated: May 31 2025, 04:09 AM IST

Karnataka Home Minister G Parameshwara (Photo/ANI)

ಸಾರಾಂಶ

ಕರಾವಳಿ ಕೋಮು ಗಲಭೆ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈ ಘಟನೆಗಳ ಹಿಂದೆ ಯಾರಿದ್ದಾರೆ ಎಂಬ ಮೂಲ ಹುಡುಕುತ್ತಿದ್ದು, ಯಾರಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

 ಬೆಂಗಳೂರು : ಕರಾವಳಿ ಕೋಮು ಗಲಭೆ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುತ್ತೇವೆ. ಈ ಘಟನೆಗಳ ಹಿಂದೆ ಯಾರಿದ್ದಾರೆ ಎಂಬ ಮೂಲ ಹುಡುಕುತ್ತಿದ್ದು, ಯಾರಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ‌. ಯಾರು ಏನೇ ಹೇಳಿದರೂ ನಾವು ಇದನ್ನು ಸಹಿಸುವುದಿಲ್ಲ. ಆ ಭಾಗದಲ್ಲಿ ಶಾಂತಿ ನೆಲೆಸಬೇಕು. ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಾದರಿಯಾಗಿರುವ ಜಿಲ್ಲೆ. ಯಾರು ಶಾಂತಿ ಕದಡಲು ಪ್ರಯತ್ನಿಸುತ್ತಾರೆ, ಅವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಎಸ್ಪಿ, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವರ್ಗಾವಣೆ ಸಮರ್ಥಿಸಿಕೊಂಡ ಸಚಿವರು, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೆ ಸಂಬಂಧಿಸಿ ಅಲ್ಲಿನ ಜನರ ಆಪೇಕ್ಷೆ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ. ಕಳೆದ ಬಾರಿ ಭೇಟಿ ನೀಡಿದಾಗ ಅಧಿಕಾರಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಕೂಡಲೇ ಬದಲಾಯಿಸುವುದು ಸರಿಯಲ್ಲ‌ ಎಂಬ ಕಾರಣಕ್ಕೆ ಮಾಡಿರಲಿಲ್ಲ. ಈ ಬಾರಿಯೂ ಧ್ವನಿ ಎತ್ತಿದ್ದರಿಂದ ಬದಲಾಯಿಸಿದ್ದೇವೆ‌ ಎಂದರು.

ಸಚಿವ ದಿನೇಶ್ ಗುಂಡೂರಾವ್ ಹಿಂದಿನಿಂದಲೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಬೇಡ ಎಂದಿದ್ದರು. ಅವರು ಈ ಬೆಳವಣಿಗೆ ನಂತರ ಹೊಸದಾಗಿ ಹೇಳಿಲ್ಲ.‌ ನನಗೆ ದೂರವಾಗುತ್ತದೆ. ಆ ಭಾಗದಲ್ಲಿರುವವರಿಗೆ ಉಸ್ತುವಾರಿ ನೀಡಿದರೆ ಒಳ್ಳೆಯದು ಎಂದಿದ್ದರು. ಈ ವಿಚಾರ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು‌ ಎಂದು ಹೇಳಿದರು.

Read more Articles on