ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂರು ವರ್ಷಗಳ ಬಳಿಕ ರಾಜಧಾನಿಯಲ್ಲಿ ವಾಹನಗಳ ಟೋಯಿಂಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕೃತವಾಗಿ ಮಂಗಳವಾರ ಘೋಷಿಸಿದ್ದಾರೆ.ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಪರಿಶೀಲನಾ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಂಚಾರ ಸುಗಮಕ್ಕೆ ಟೋಯಿಂಗ್ ಆರಂಭ ಅನಿರ್ವಾಯವಾಗಿದೆ ಎಂದರು.
ನಗರ ವ್ಯಾಪ್ತಿ ಎಲ್ಲೆಂದರಲ್ಲಿ ವಾಹನಗಳನ್ನು ಸಾರ್ವಜನಿಕರು ನಿಲ್ಲಿಸುತ್ತಿರುವುದು ಸಂಚಾರ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲೊಂದ್ದಾಗಿದೆ. ಹೀಗಾಗಿ ಈ ಮೊದಲು ಸ್ಥಗಿತಗೊಳಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ ಎಂದು ಹೇಳಿದರು.ಮೊದಲು ವಾರ್ಷಿಕ 28 ಕೋಟಿ ರು.ಗೆ ಖಾಸಗಿ ಸಂಸ್ಥೆಗಳಿಗೆ ಟೋಯಿಂಗ್ ಹೊರಗುತ್ತಿಗೆ ನೀಡುತ್ತಿದ್ದೆವು. ಆ ಖಾಸಗಿ ಸಂಸ್ಥೆಯವರು ಸಂಚಾರ ಉಲ್ಲಂಘನೆ ಸಂಬಂಧ ವಾಹನಗಳನ್ನು ಟೋಯಿಂಗ್ ಮಾಡುವ ವೇಳೆ ಸಾರ್ವಜನಿಕರ ಜತೆ ಅನುಚಿತ ವರ್ತನೆ ಆರೋಪಗಳಿದ್ದವು. ಈ ಸಮಸ್ಯೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಲ ಪೊಲೀಸ್ ವಾಹನಗಳುಖಾಸಗಿಯವರ ಬದಲಿಗೆ ಪೊಲೀಸ್ ಇಲಾಖೆಯ ವಾಹನಗಳನ್ನೇ ಟೋಯಿಂಗ್ಗೆ ಬಳಸಿಕೊಳ್ಳಲಾಗುತ್ತದೆ. ಇದಕ್ಕಾಗಿ ಪ್ರತಿ ಠಾಣಾ ಮಟ್ಟದಲ್ಲಿ ಟೋಯಿಂಗ್ ವಾಹನ ನೀಡಲಾಗುತ್ತದೆ. ಅಲ್ಲದೆ ಈ ಟೋಯಿಂಗ್ಗೆ ಕೆಲಸಕ್ಕೆ ಸಂಚಾರ ಪೊಲೀಸರ ನೆರವಿಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನೋ ಪಾರ್ಕಿಂಗ್ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಮನಬಂದಂತೆ ಎಳೆದಾಡಿ ಜಖಂಗೊಳಿಸುವುದಲ್ಲದೆ ವಾಹನ ಮಾಲಿಕರ ಜತೆ ದರ್ಪ ತೋರಿಸುತ್ತಾರೆ ಎಂದು ಟೋಯಿಂಗ್ ಸಿಬ್ಬಂದಿ ವಿರುದ್ಧ ಮೂರು ವರ್ಷಗಳ ಹಿಂದೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಜನಾಕ್ರೋಶಕ್ಕೆ ಮಣಿದು 2022ರ ಫೆಬ್ರವರಿಯಲ್ಲಿ ಟೋಯಿಂಗ್ಗೆ ಸರ್ಕಾರ ಬ್ರೇಕ್ ಹಾಕಿತ್ತು. ಈಗ ಸುಗಮ ಸಂಚಾರಕ್ಕೆ ಮತ್ತೆ ಟೋಯಿಂಗ್ಗೆ ಮರು ಚಾಲನೆ ನೀಡಲು ಸರ್ಕಾರವೇ ಭಾರಿ ಉತ್ಸುಕತೆ ತೋರಿದೆ.ಸಭೆಯಲ್ಲಿ ಡಿಜಿ-ಐಜಿಪಿ ಡಾ.ಎಂ.ಸಲೀಂ, ನಗರ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತರಾದ ಡಾ.ಚಂದ್ರಗುಪ್ತ, ವಿಕಾಸ್ ಕುಮಾರ್ ವಿಕಾಸ್, ಜಂಟಿ ಆಯುಕ್ತರಾದ ಎಂ.ಎನ್.ಅನುಚೇತ್ ಹಾಗೂ ಬಿ.ರಮೇಶ್ ಹಾಜರಿದ್ದರು.
ಟೋಯಿಂಗ್ ಪ್ರತಿಭಟಿಸಿದ್ದು ನೀವೇ ಅಲ್ಲವೇ?ಬಿಜೆಪಿ ಸರ್ಕಾರದ ಅವಧಿಯಲ್ಲಿ ಟೋಯಿಂಗ್ ವ್ಯವಸ್ಥೆ ನಿರ್ವಹಣೆ ಸರಿಯಿಲ್ಲದ ಕಾರಣ ಸಮಸ್ಯೆಯಾಗಿತ್ತು. ಈಗ ನಾವು ನ್ಯೂನತೆಗಳನ್ನು ಸರಿಪಡಿಸಿ ಸೂಕ್ತವಾಗಿ ಜಾರಿಗೊಳಿಸುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಮೂರು ವರ್ಷಗಳ ಹಿಂದೆ ಟೋಯಿಂಗ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಪ್ರಶ್ನಿಸಿದರು. ಆಗ ಲೋಪದೋಷ ಸರಿಪಡಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದರು.ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವರ್ಷಾನುಗಟ್ಟಲೇ ಸಮಯ ತೆಗೆದುಕೊಂಡರೇ ಹೇಗೆ? ಚರಂಡಿ, ರಸ್ತೆ ಸರಿಪಡಿಸಿಲ್ಲವೆಂದರೆ ಬಿಬಿಎಂಪಿಯವರನ್ನೇ ಜನರು ಕೇಳೋದಿಲ್ಲ. ಆದರೆ ಟ್ರಾಫಿಕ್ ಸಮಸ್ಯೆಯಾದರೆ ಪೊಲೀಸರನ್ನೇ ಜನರು ಪ್ರಶ್ನಿಸೋದು ನೆನಪಿರಲಿ ಎಂದು ಅಧಿಕಾರಿಗಳಿಗೆ ಸಚಿವರು ಮಾತಿನ ಚಾಟಿ ಬೀಸಿದ್ದಾರೆ.
ಸದ್ಯ ನಗರದಲ್ಲಿ 1.30 ಕೋಟಿ ವಾಹನಗಳಿದ್ದು, ಇನ್ನು ಈ ಸಂಖ್ಯೆ ಹೆಚ್ಚಾಗಲಿದೆ. ಪ್ರತಿ ದಿನ 3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಕಳೆದ ಅಕ್ಟೋಬರ್ನಿಂದ 70 ಸಾವಿರ ಹೊಸ ವಾಹನಗಳ ನೋಂದಣಿ ಆಗಿವೆ. ಹೀಗಾಗಿ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕದೆ ಹೋದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಎಸಿ ರೂಂ ಬಿಟ್ಟು ರಸ್ತೆಗೆ ಬನ್ನಿ
ಪಿಕ್ ಆವರ್ನಲ್ಲಿ ಡಿಸಿಪಿ, ಎಸಿಪಿಗಳು ಎಸಿ ಕಚೇರಿ ಬಿಟ್ಟು ರಸ್ತೆಗಿಳಿದು ಕೆಲಸ ಮಾಡುವಂತೆ ನೂರು ಸಲ ಹೇಳಿದರೂ ಕೇಳೋದಿಲ್ಲ. ಬೆಳಗ್ಗೆ 8 ರಿಂದ 11 ಹಾಗೂ ಸಂಜೆ 5 ರಿಂದ ರಾತ್ರಿ 9 ವರೆಗೆ ಸಮಯದಲ್ಲಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಆದರೆ ಸಂಚಾರ ನಿರ್ವಹಣೆಗೆ ಕಾನ್ಸ್ಟೇಬಲ್ಗಳನ್ನು ನಿಯೋಜಿಸಿ ಅಧಿಕಾರಿಗಳು ಆರಾಮ ಆಗಿರುತ್ತಾರೆ. ನೀವೇ (ಅಧಿಕಾರಿಗಳು) ಕೆಲಸ ಮಾಡಲ್ಲ ಅಂದರೇ ಸಮಸ್ಯೆ ಬಗೆ ಹರಿಯೋದು ಹೇಗೆ ಎಂದಿದ್ದಾರೆ.ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಟೋಯಿಂಗ್ ಜಾರಿ ಅನಿವಾರ್ಯವಾಗಿದೆ. ರಸ್ತೆಗಳಲ್ಲಿ ಜನರು ಬೇಕಾಬಿಟ್ಟಿ ವಾಹನ ನಿಲ್ಲಿಸುವುದು ತಪ್ಪುತ್ತದೆ. ಟೋಯಿಂಗ್ ವೇಳೆ ಸೌಜನ್ಯ ನಡವಳಿಕೆ ಇರಲಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ.
-ಡಾ.ಜಿ.ಪರಮೇಶ್ವರ್, ಗೃಹ ಸಚಿವಮಳೆಗಾಲದ ಸಂಚಾರ ಸಮಸ್ಯೆ-ವರದಿಗೆ ಸೂಚನೆ
ಮಳೆಯಿಂದ ಸಂಚಾರ ಸಮಸ್ಯೆ ಉಂಟಾಗುವ ಪ್ರದೇಶಗಳ ಕುರಿತು ವಾರದಲ್ಲಿ ವರದಿ ನೀಡುವಂತೆ ಸಂಚಾರ ವಿಭಾಗದ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು, ಸಾರಿಗೆ ಸಚಿವರು ಹಾಗೂ ಗೃಹ ಸಚಿವರ ಸಮನ್ವಯ ಸಭೆ ನಡೆಸಲಾಗಿದೆ. ಅದೇ ರೀತಿ ಬಿಬಿಎಂಪಿ ಹಾಗೂ ಪೊಲೀಸರು ಒಮ್ಮತದಿಂದ ಸಹಭಾಗಿತ್ವದಲ್ಲಿ ಕೆಲಸ ಮಾಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸಂಚಾರ ಸಮಸ್ಯೆ ಬಗ್ಗೆ ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ವಿವರಿಸಿದರು.-ಎಚ್ಚರ! ವಾಹನ ಮಾಲೀಕರೇ, ಎಲ್ಲೆಂದರಲ್ಲೇ ವಾಹನ ನಿಲ್ಲಿಸದಿರಿ-3 ವರ್ಷಗಳ ಬಳಿಕ ಮತ್ತೆ ಟೋಯಿಂಗ್ ವಾಹನ ವ್ಯವಸ್ಥೆ ಜಾರಿಗೆ ಸಿದ್ಧತೆ2022 ರಲ್ಲಿ ಜನಾಕ್ರೋಶದ ಕಾರಣ ಟೋಯಿಂಗ್ಗೆ ಬ್ರೇಕ್ ಬಿದ್ದಿತುಸುಗಮ ಸಂಚಾರ ವ್ಯವಸ್ಥೆಗೆ ಟೋಯಿಂಗ್ ಅನಿವಾರ್ಯ ಈ ಬಾರಿ ಖಾಸಗಿ ಬದಲು ಪೊಲೀಸ್ ವಾಹನಗಳ ಬಳಕೆ