ಸಾರಾಂಶ
ಬೆಂಗಳೂರು : ಹೆಸರಘಟ್ಟದಲ್ಲಿರುವ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಅನ್ನು ಕಂಠೀರವ ಸ್ಟುಡಿಯೋ ಬಳಿಗೆ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಹಿರಿಯ ಕಲಾವಿದ ಶ್ರೀನಾಥ್ ಹಾಗೂ ಎಸ್.ಜೆ ಪಾಲಿಟೆಕ್ನಿಕ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ತಂಡ ಗುರುವಾರ ಸಚಿವರನ್ನು ಭೇಟಿಯಾಗಿ ಸಂಸ್ಥೆಯ ಸ್ಥಳಾಂತರ ಮತ್ತು ಉನ್ನತೀಕರಣಕ್ಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶೀಘ್ರದಲ್ಲೇ ಹೆಸರುಘಟ್ಟದಲ್ಲಿರುವ ಸಂಸ್ಥೆಗೆ ಭೇಟಿ ನೀಡುತ್ತೇನೆ. ಕಂಠೀರವ ಸ್ಟುಡಿಯೋ ಬಳಿಯೇ ಸಂಸ್ಥೆಯನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು. ಇದರಿಂದ ಕಲಿಕೆಯ ಜೊತೆಗೆ ಪ್ರಾಯೋಗಿಕ ಅನುಭವಕ್ಕೂ ಹೆಚ್ಚು ಅವಕಾಶ ದೊರಕಲಿದೆ. ಸಿನಿಮಾಟೋಗ್ರಾಫಿ, ಸೌಂಡ್ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಸಾಕಷ್ಟು ಬೇಡಿಕೆ ಇದೆ. ಸಿನಿಮಾಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನಗಳ ಹೊಸ ಕೋರ್ಸ್ಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಮನವಿ: ದೇಶದಲ್ಲೇ ಮೊದಲು ಆರಂಭಿಸಿದ ಫಿಲ್ಮ್ ಆ್ಯಂಡ್ ಟೆಲಿವಿಷನ್ ಸಂಸ್ಥೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಕಲಿಕೆಯ ಆಸಕ್ತಿ ಇದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿಲ್ಲ. ಹಾಗಾಗಿ, ಆದಷ್ಟು ಶೀಘ್ರವಾಗಿ ಹೆಸರಘಟ್ಟದಲ್ಲಿರುವ ಕೇಂದ್ರವನ್ನು ನಗರ ಭಾಗಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳ ತಂಡ ಮನವಿ ಸಲ್ಲಿಸಿತು.ಈ ವೇಳೆ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹೆಚ್. ಪ್ರಸನ್ನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.