ಸದನದಲ್ಲಿ ಶಾಸಕರ ಗದ್ದಲಕ್ಕೆ ವಿರೋಧ ಪಕ್ಷದ ನಾಯಕ ಅಶೋಕ್‌ ಪ್ರಚೋದನೆ : ರಮೇಶ್‌ಬಾಬು

| N/A | Published : Mar 23 2025, 01:34 AM IST / Updated: Mar 23 2025, 04:21 AM IST

R Ashok

ಸಾರಾಂಶ

  ಶಾಸಕರ ವರ್ತನೆಗೆ ಪ್ರೇರೇಪಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಮೇಲೂ ಅದೇ ರೀತಿಯ ಕ್ರಮ ಕೈಗೊಳ್ಳಬೇಕಿತ್ತು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ತಿಳಿಸಿದ್ದಾರೆ.

  ಬೆಂಗಳೂರು :  ಸದನದಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಶಾಸಕರ ಅಮಾನತು ಮಾಡಿ ಸ್ಪೀಕರ್‌ ಯು.ಟಿ.ಖಾದರ್‌ ಉತ್ತಮ ನಿರ್ಧಾರ ತೆಗೆದುಕೊಂಡಿದ್ದು, ಶಾಸಕರ ವರ್ತನೆಗೆ ಪ್ರೇರೇಪಿಸಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಮೇಲೂ ಅದೇ ರೀತಿಯ ಕ್ರಮ ಕೈಗೊಳ್ಳಬೇಕಿತ್ತು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ತಿಳಿಸಿದ್ದಾರೆ.

ಸಂವಿಧಾನದ ಆಶಯ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಯಾವುದೇ ಶಾಸಕರು ಸದನದಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರ ತೋರಲು ಅವಕಾಶವಿರುವುದಿಲ್ಲ. ಹೀಗಾಗಿಯೇ ಶುಕ್ರವಾರ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕಾಗಿ ಶಾಸಕರನ್ನು ಅಮಾನತು ಮಾಡಲಾಗಿದೆ. ಆದರೆ, ಆ ಶಾಸಕರಿಗೆ ವಿಪಕ್ಷ ನಾಯಕ ಆರ್‌. ಅಶೋಕ್‌ ಪ್ರಚೋದನೆ ನೀಡಿದ್ದು, ಸಭಾಧ್ಯಕ್ಷರ ಪೀಠಕ್ಕೆ ನುಗ್ಗುವಂತೆ ಪ್ರಚೋದಿಸಿದ್ದು ಸ್ಪಷ್ಟವಾಗಿ ದಾಖಲಾಗಿದೆ. ವಿರೋಧ ಪಕ್ಷದ ನಾಯಕರಾಗಿ ಸಭಾಧ್ಯಕ್ಷರ ಪೀಠದ ಗೌರವ ಎತ್ತಿ ಹಿಡಿಯಬೇಕಾದವರೇ, ಸದನದಲ್ಲಿ ಗದ್ದಲಕ್ಕೆ ಕಾರಣರಾಗಿದ್ದಾರೆ.

ಸದನವು ಶಿಸ್ತುಕ್ರಮದ ಪ್ರಸ್ತಾವನೆಯನ್ನು ಮಂಡಿಸುವ ಸಂದರ್ಭದಲ್ಲಿ ಇವರ ಹೆಸರನ್ನು ಪರಿಗಣಿಸದೆ ಇರುವುದು ಸರಿ ಅಲ್ಲವೆಂದು ಮತ್ತು ಲೋಪದಿಂದ ಕೂಡಿದೆ ಎಂದು ಜನಸಾಮಾನ್ಯರು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ತಮ್ಮ ಅನಿಸಿಕೆಯನ್ನು ಹೇಳುತ್ತಿದ್ದಾರೆ. ಹೀಗಾಗಿ ಸಚಿವ ಎಚ್‌.ಕೆ. ಪಾಟೀಲ್‌, ಶಿಸ್ತುಕ್ರಮದ ಪ್ರಸ್ತಾವನೆ ಮಂಡಿಸಿದಾಗ ಆರ್‌.ಅಶೋಕ್‌ ಹೆಸರನ್ನೂ ಪ್ರಸ್ತಾಪಿಸಬೇಕಿತ್ತು. ಹೀಗಾಗಿ 348ರ ಅಡಿಯಲ್ಲಿ ಆರ್‌.ಅಶೋಕ್‌ ಅವರ ಮೇಲೂ ಶಿಸ್ತು ಕ್ರಮ ಕೈಗೊಂಡು ಸಭಾಧ್ಯಕ್ಷರು ಆದೇಶ ಹೊರಡಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.