ಸಂಪುಟ ಪುನಾರಚನೆ ಈಗಿಲ್ಲ, ವರ್ಷಾಂತ್ಯಕ್ಕೆ ಮುಂದೂಡಿಕೆ

| N/A | Published : Jun 11 2025, 04:03 AM IST

Siddaramaiah action About Stampede Case

ಸಾರಾಂಶ

ಸಚಿವ ಸಂಪುಟ ಪುನರ್‌ ರಚನೆಗೆ ನವೆಂಬರ್‌-ಡಿಸೆಂಬರ್‌ ವೇಳೆಗೆ ಈ ಪ್ರಕ್ರಿಯೆ ನಡೆಸಲು ಒಪ್ಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರು : ಸಚಿವ ಸಂಪುಟ ಪುನರ್‌ ರಚನೆಗೆ ಸೂಚನೆ ನೀಡುವ ಚಿಂತನೆ ಹೊಂದಿದ್ದ ಹೈಕಮಾಂಡ್‌ ವರಿಷ್ಠರ ಮನವೊಲಿಸಿರುವ ರಾಜ್ಯ ನಾಯಕರು, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಅರ್ಥಾತ್‌ ನವೆಂಬರ್‌-ಡಿಸೆಂಬರ್‌ ವೇಳೆಗೆ ಈ ಪ್ರಕ್ರಿಯೆ ನಡೆಸಲು ಒಪ್ಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಮಂಗಳವಾರ ದೆಹಲಿಯಲ್ಲಿ ನಡೆದ ಚರ್ಚೆ ವೇಳೆ ಸಂಪುಟ ಪುನರ್‌ ರಚನೆ ವಿಚಾರವನ್ನು ರಾಜ್ಯ ನಾಯಕರು ಗಂಭೀರವಾಗಿ ಚರ್ಚಿಸಿದ್ದಾರೆ.

ಕಾಲ್ತುಳಿತ ಘಟನೆಯಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸರ್ಜರಿ ಮಾಡಬೇಕಾದ ಅಗತ್ಯವಿದೆ ಎಂದು ಹೈಕಮಾಂಡ್‌ ನಾಯಕರು ವಾದಿಸಿದರು ಎನ್ನಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹಾಲಿ ಇರುವ ಗೊಂದಲಗಳ ನಡುವೆ ಸಂಪುಟ ಪುನಾರಚನೆ ಪ್ರಕ್ರಿಯೆ ನಡೆಸುವುದು ಬೇಡ. ಇದರಿಂದ ಹಲವು ಸಚಿವರ ಕೈಬಿಡುವ ಹಾಗೂ ಕೆಲ ಹಿರಿಯ ಸಚಿವರ ಖಾತೆ ಬದಲಾವಣೆಯಂತಹ ಪ್ರಕ್ರಿಯೆ ನಡೆಸಬೇಕಿದೆ. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಇಂಥ ಪ್ರಕ್ರಿಯೆ ನಡೆಸುವುದು ಸೂಕ್ತ ಎಂದು ವಾದಿಸಿ ಅಂತಿಮವಾಗಿ ಹೈಕಮಾಂಡ್ ಮನವೊಲಿಸಿದರು ಎನ್ನಲಾಗಿದೆ.

Read more Articles on