ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ: ಸಿ.ಟಿ. ರವಿ ಆರೋಪ

| Published : Mar 02 2024, 01:45 AM IST

ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ: ಸಿ.ಟಿ. ರವಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಭಾವನೆಯಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವಾಗಿ ಈ ವರದಿ ನೀಡಿದ್ದು, ಕಾಂಗ್ರೆಸ್ ಟೂಲ್ ಕಿಟ್‌ ನ ಭಾಗವಾಗಿ ಈ ವರದಿ ಇದೆ. ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಮಗುವನ್ನು ತೂಗೋ ಕೆಲಸ ಮತ್ತು ಚಿವುಟೋ ಕೆಲಸ ಎರಡನ್ನೂ ಮಾಡುತ್ತಿದೆ. ವರದಿ ವಿಚಾರವಾಗಿ ಕಾಂಗ್ರೆಸ್‌ ನಲ್ಲಿ ಒಬ್ಬೊಬ್ಬರು ಒಂದೊಂದು ನಿಲುವು ಹೊಂದಿದ್ದು, ವರದಿ ವಿಚಾರದಲ್ಲಿ ಮುಖ್ಯಮಂತ್ರಿ ನಡೆಯನ್ನು ಒಪ್ಪದವರು ರಾಜೀನಾಮೆ ಕೊಟ್ಟು ಹೊರ ಬರಲಿ, ಅದನ್ನು ಬಿಟ್ಟು ನಾಟಕ ಆಡುವುದು ಬೇಡ.

ಕನ್ನಡಪ್ರಭ ವಾರ್ತೆ ಮೈಸೂರು

ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಜಾತಿಗಣತಿ ವರದಿ ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್ ಕೃಪಾಪೋಷಿತ ಮಂಡಳಿ ನೀಡಿರುವ ಜಾತಿಗಣತಿ ವರದಿ ಇದಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮುಖಂಡರು ಮತ್ತು ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಈ ಜಾತಿ ಗಣತಿ ವರದಿ ಸಿದ್ಧಪಡಿಸಲಾಗಿದ್ದು, ಹಿಂದೂ ಸಮಾಜವನ್ನು ಜಾತಿಗಳ ಹೆಸರಿನಲ್ಲಿ ಒಡೆಯುವ ತಂತ್ರ ಇದಾಗಿದೆ ಎಂದು ದೂರಿದರು.

ಹಿಂದೂ ಭಾವನೆಯಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವಾಗಿ ಈ ವರದಿ ನೀಡಿದ್ದು, ಕಾಂಗ್ರೆಸ್ ಟೂಲ್ ಕಿಟ್‌ ನ ಭಾಗವಾಗಿ ಈ ವರದಿ ಇದೆ. ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಮಗುವನ್ನು ತೂಗೋ ಕೆಲಸ ಮತ್ತು ಚಿವುಟೋ ಕೆಲಸ ಎರಡನ್ನೂ ಮಾಡುತ್ತಿದೆ. ವರದಿ ವಿಚಾರವಾಗಿ ಕಾಂಗ್ರೆಸ್‌ ನಲ್ಲಿ ಒಬ್ಬೊಬ್ಬರು ಒಂದೊಂದು ನಿಲುವು ಹೊಂದಿದ್ದು, ವರದಿ ವಿಚಾರದಲ್ಲಿ ಮುಖ್ಯಮಂತ್ರಿ ನಡೆಯನ್ನು ಒಪ್ಪದವರು ರಾಜೀನಾಮೆ ಕೊಟ್ಟು ಹೊರ ಬರಲಿ, ಅದನ್ನು ಬಿಟ್ಟು ನಾಟಕ ಆಡುವುದು ಬೇಡ. ವರದಿ ವಿಚಾರದಲ್ಲಿ ಕಾಂಗ್ರೆಸ್ ಹಗಲುವೇಷ ಹಾಕಿಕೊಂಡು ಡ್ರಾಮಾ ಮಾಡುತ್ತಿದೆ ಎಂದು ಟೀಕಿಸಿದರು.

ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗಿರುವ ಮಾಹಿತಿಯ ಪ್ರಕಾರ, ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ಸತ್ಯ ಎಂದು ಬಂದಿದ್ದು, ಸರ್ಕಾರ ಕೂಡಲೇ ಈ ವರದಿಯನ್ನು ಬಹಿರಂಗ ಪಡಿಸಬೇಕಿದೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರ ವಿಚಾರಣೆ ನಡೆಸಿದ್ದಾರೋ ಅಥವಾ ಬಿರಿಯಾನಿ ತಿನ್ನಿಸುತ್ತಿದ್ದಾರೋ? ಎಂಬುದನ್ನು ಮುಸ್ಲಿಮರನ್ನು ಬ್ರದರ್ಸ್ ಎನ್ನುವ ಡಿ.ಕೆ. ಶಿವಕುಮಾರ್ ಹೇಳಬೇಕಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಕೊಟ್ಟಿದ್ದರೂ ಅಚ್ಚರಿ ಬೇಡ ಎಂದು ಅವರು ಲೇವಡಿ ಮಾಡಿದರು.

ಸಿಎಂ ಪ್ರಮಾಣ ಮಾಡಲಿ:

ಅನ್ನಭಾಗ್ಯಕ್ಕೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಸಿಎಂ ಆರೋಪಿಸಿದ್ದು, ಅವರು ಚಾಮುಂಡಿದೇವಿ ಮುಂದೆ ಆಣೆ ಮಾಡಲಿ. ಪ್ರಸ್ತುತ ನೀಡುತ್ತಿರುವ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರ ಕೊಟ್ಟಿದ್ದು ಎಂದು ಚಾಮುಂಡಿದೇವಿ ಮುಂದೆ ನಾವು ಪ್ರಮಾಣ ಮಾಡುತ್ತೇವೆ. ಕಾಂಗ್ರೆಸ್ ನಾಯಕರು ಅದು ಅವರದ್ದೇ ಅಕ್ಕಿ ಎಂದು ಪ್ರಮಾಣ ಮಾಡಲಿ, ಇದಕ್ಕೆ ಅವರೇ ದಿನ ನಿಗದಿ ಮಾಡಿದರೆ, ನಾನು ಚಾಮುಂಡಿಬೆಟ್ಟಕ್ಕೆ ಬಂದು ಪ್ರಮಾಣ ಮಾಡುತ್ತೇನೆ ಎಂದರು.

ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 4.91 ಲಕ್ಷ ಕೋಟಿ ಕೊಟ್ಟಿದೆ. ಆದರೆ, 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರ್ಕಾರ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 1.92 ಲಕ್ಷ ಕೋಟಿ ಕೊಟ್ಟಿದೆ. ಇದು ಸತ್ಯ ಎಂದು ನಮ್ಮ ಎಲ್ಲಾ ಸಂಸದರನ್ನು ಕರೆದುಕೊಂಡು ಚಾಮುಂಡಿಬೆಟ್ಟಕ್ಕೆ ಬಂದು ಪ್ರಮಾಣ ಮಾಡುತ್ತೇವೆ. ಸಿಎಂ ಕೂಡ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಬಂದು ತಾವು ಹೇಳುತ್ತಿರೋದು ಸತ್ಯ ಎಂದು ಪ್ರಮಾಣ ಮಾಡಲಿ ಎಂದು ಅವರು ಆಹ್ವಾನ ನೀಡಿದರು.

ಬೆಂಗಳೂರಿನಲ್ಲಿ ಕನಕಪುರ ಟ್ಯಾಕ್ಸ್ ಕೊಡದೆ ಯಾವ ಫೈಲ್ ಕೂಡ ಪಾಸ್ ಆಗುತ್ತಿಲ್ಲ. ಅದೇ ರೀತಿ ವರ್ಗಾವಣೆಗೆ ವೈಎಸ್‌ ಟಿ ಫಿಕ್ಸ್ ಆಗಿದ್ದು, ಇದರ ಕಲೆಕ್ಷನ್ ಟಾಸ್ಕ್ ಅನ್ನು ಬೆಂಬಲಿಗರಿಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ನಾನು ಯಾವತ್ತೂ ಟಿಕೆಟ್ ಆಕಾಂಕ್ಷಿ ಎಂದಿಲ್ಲ

ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಟಿಕೆಟ್ ವಿಚಾರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ಬಾಸ್ ಈಸ್ ಆಲ್ವೇಸ್ ರೈಟ್, ಬಾಸ್ ವಿರುದ್ಧ ಮಾತಾಡಲು ಯಾವಾತ್ತಾದರೂ, ಯಾರಿಗಾದರೂ ಸಾಧ್ಯನಾ? ನಾನು ಯಾವತ್ತೂ ಟಿಕೆಟ್ ಆಕಾಂಕ್ಷಿ ಎಂದಿಲ್ಲ. ಹೀಗಾಗಿ ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನನಗೆ ಸಂಬಂಧಿಸಿದ್ದು ಎಂದು ಹೇಗೆ ಹೇಳುತ್ತೀರಾ ಎಂದು ಪ್ರಶ್ನಿಸಿದರು.