ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹೊರತಾಗಿಯೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡದ ನಜೀರ್‌ ಅಹ್ಮದ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

 ಬೆಂಗಳೂರು : ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಹೊರತಾಗಿಯೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡದ ನಜೀರ್‌ ಅಹ್ಮದ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

2023ರ ಜೂ.1ರಂದು ನಜೀರ್‌ ಅಹ್ಮದ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿದ್ದ ಆದೇಶ ಹಿಂಪಡೆಯಲಾಗಿದೆ. ಆ ಮೂಲಕ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೋಮವಾರ ತಡರಾತ್ರಿ ಆದೇಶ ಹೊರಡಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುಸ್ಲಿಮರ ಬಂಡಾಯಕ್ಕೆ ಪರೋಕ್ಷ ಚಿತಾವಣೆ ಮಾಡಿದ ಆರೋಪ ಪರಿಷತ್‌ ಸದಸ್ಯರೂ ಆದ ನಜೀರ್ ಅಹ್ಮದ್ ವಿರುದ್ಧ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ತಲೆದಂಡಕ್ಕೆ ಹೈಕಮಾಂಡ್‌ ಸೂಚಿಸಿತ್ತು. ಇದರ ಬೆನ್ನಲ್ಲೇ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು.

ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು, ನಜೀರ್‌ ಕೂಡ ರಾಜೀನಾಮೆ ನೀಡಬಹುದು ಎಂದುಕೊಂಡಿದ್ದೇನೆ ಎಂದಿದ್ದರು. ಆದರೆ, ಭಾನುವಾರ ಹಾಗೂ ಸೋಮವಾರ ಎರಡೂ ದಿನ ನಜೀರ್‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಲಿಲ್ಲ. ಹೀಗಾಗಿ ಸೋಮವಾರ ತಡರಾತ್ರಿ ಸರ್ಕಾರವೇ ಅವರನ್ನು ಹುದ್ದೆಯಿಂದ ಕೈಬಿಟ್ಟಿದೆ.

ಎರಡನೇ ತಲೆದಂಡ:

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಪರ ಕೆಲಸ ಮಾಡದ ಕಾರಣಕ್ಕಾಗಿಯೇ ಹೈಕಮಾಂಡ್ ಸೂಚನೆ ಹಿನ್ನೆಲೆ ವಿಧಾನಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಅವರು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪಕ್ಷ ಶಿಸ್ತು ಉಲ್ಲಂಘನೆ ಅಡಿ ನಜೀರ್‌ ಅವರದ್ದು ಎರಡನೇ ತಲೆದಂಡ ಆಗಿದೆ.

- ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪ ಹಿನ್ನೆಲೆ

- ರಾಜೀನಾಮೆಗೆ ಸೂಚಿಸಿದ್ದ ಹೈಕಮಾಂಡ್‌, ಸಿಎಂ

- ಸೂಚನೆಯಿದ್ದರೂ ರಾಜೀನಾಮೆ ನೀಡದ ನಜೀರ್‌

- ಹೀಗಾಗಿ ಹುದ್ದೆಯಿಂದಲೇ ವಜಾ ಮಾಡಿ ಆದೇಶ

- ಹೀಗಾಗಲೇ ಪಕ್ಷದ ಹುದ್ದೆಗೆ ಜಬ್ಬಾರ್‌ ರಾಜೀನಾಮೆ