ಸಾರಾಂಶ
ಸೂರತ್: ಲೋಕಸಭೆ ಚುನಾವಣೆಗೆ ಸೂರತ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ನಾಮಪತ್ರದಲ್ಲಿ ನಕಲಿ ಸೂಚಕರ ಸಹಿ ಇದೆ ಎಂಬ ಕಾರಣಕ್ಕೆ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಸೌರಭ್ ಪರ್ದಿ ತಮ್ಮ ಆದೇಶದಲ್ಲಿ, ‘ಕಾಂಗ್ರೆಸ್ ಪಕ್ಷದ ನೀಲೇಶ್ ಕುಂಬಾನಿ ಹಾಗೂ ಅವರ ಬದಲಿ ಅಭ್ಯರ್ಥಿ ಸುರೇಶ್ ಪಡ್ಸಾಲಾ ಅವರ ಅರ್ಜಿಗಳಲ್ಲಿ ಸೂಚಕರ ಸಹಿ ನಕಲಿ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಕಾರಣವಾಗಿ ನಾಮಪತ್ರ ತಿರಸ್ಕರಿಸಲಾಗಿದೆ’ ಎಂದಿದ್ದಾರೆ.
ನಾಮಪತ್ರದಲ್ಲಿನ ಸೂಚಕರ ಸಹಿ ತಮ್ಮದಲ್ಲ ಎಂದು ಮೂವರು ತಮ್ಮ ಜಿಲ್ಲಾ ಚುನಾವಣಾ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಈ ಆಧಾರದ ಮೇರೆಗೆ ಕ್ರಮ ತೆಗೆದುಕೊಂಡಿದ್ದಾರೆ.
ಹೈಕೋರ್ಟ್ ಮೊರೆ ಹೋಗಲಿದ್ದೇವೆ:
ಅರ್ಜಿ ತಿರಸ್ಕಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಬಿಜೆಪಿಯ ಸಂಚಾಗಿದ್ದು, ಅದರಂತೆ ಚುನಾವಣಾ ಆಯೋಗ ವರ್ತಿಸಿದೆ. ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲು ಖಾತ್ರಿಯಾಗಿದ್ದು, ಹೀಗಾಗಿ ನಾಮಪತ್ರ ತಿರಸ್ಕಾರ ಮಾಡಿಸಿದೆ. ಇದರ ಜಿಲ್ಲಾ ಚುನಾವಣಾ ಅಧಿಕಾರಿ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಕಿಡಿಕಾರಿದೆ.