ನೂರಾರು ಎಕರೆ ಜಮೀನು ಮಾಜಿ ಶಾಸಕರಿಂದಾಗಿ ಡೀಮ್ಡ್ ಫಾರೆಸ್ಟ್‌ಗೆ ಸೇರಿದೆ ಎಂದು ಆರೋಪ : ಕೃಷ್ಣಾರೆಡ್ಡಿ ನಿರಾಕರಣೆ

| Published : Aug 05 2024, 12:34 AM IST / Updated: Aug 05 2024, 04:57 AM IST

ಸಾರಾಂಶ

ಹದಿನೈದು ವರ್ಷ ಆಡಳಿತ ಮಾಡಿದ ಸಚಿವ ಡಾ.ಸುಧಾಕರ್‌ ಅವರ ಕುಟುಂಬ ಡೀಮ್ಡ್ ಪಾರೆಸ್ಟ್ ಬಗ್ಗೆ ಆಗ ಏಕೆ ಚಕಾರವೆತ್ತಲಿಲ್ಲ. ಈ ಬಗ್ಗೆ ಸಭೆ ಸಮಾರಂಭಗಳಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಕಾರ್ಯಗಳಿಗೆ ಒತ್ತು ನೀಡಲಿ

 ಚಿಂತಾಮಣಿ :  ತಾಲೂಕಿನ ನೂರಾರು ಎಕರೆ ಜಮೀನು ಮಾಜಿ ಶಾಸಕರಿಂದಾಗಿ ಡೀಮ್ಡ್ ಫಾರೆಸ್ಟ್‌ಗೆ ಸೇರಿದೆ ಎಂದು ಪ್ರತಿಯೊಂದು ಸಭೆಯಲ್ಲೂ ತಮ್ಮ ಮೇಲೆ ಗೂಬೆ ಕೂರಿಸಲು ಯತ್ನಿಸಲಾಗುತ್ತಿದೆ. 96-97ನೇ ಇಸವಿಯಿಂದಲ್ಲೇ ಡೀಮ್ಡ್ ಫಾರೆಸ್ಟ್ ನೋಟಿಫಿಕೇಷನ್ ಆಗಿದೆ. 1999 ರಿಂದ 2013 ರವರೆಗೂ ಈಗಿನ ಸಚಿವ ಡಾ.ಎಂ.ಸಿ.ಸುಧಾಕರ್‌ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ನಿದ್ರೆ ಮಾಡುತ್ತಿದ್ದರಾ ಎಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಪ್ರಶ್ನಿಸಿದರು.

ಜೆ.ಕೆ.ಭವನದಲ್ಲಿ ನಡೆದ ಕೋಲಾರ ಚಿಕ್ಕಬಳ್ಳಾಪುರ ಸಂಸದರ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಸಚಿವರಿಗೆ ತಿಳಿವಳಿಕೆ ಇಲ್ಲದೆಯೋ ಅದರ ಬಗ್ಗೆ ಮಾಹಿತಿ ಕೊರತೆಯೊ ಗೊತ್ತಿಲ್ಲ. ಹದಿನೈದು ವರ್ಷ ಆಡಳಿತ ಮಾಡಿದ ಅವರ ಕುಟುಂಬ ಡೀಮ್ಡ್ ಪಾರೆಸ್ಟ್ ಬಗ್ಗೆ ಆಗ ಏಕೆ ಚಕಾರವೆತ್ತಲಿಲ್ಲ. ಈ ಬಗ್ಗೆ ಸಭೆ ಸಮಾರಂಭಗಳಲ್ಲಿ ಸುಳ್ಳು ಹೇಳುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಕಾರ್ಯಗಳಿಗೆ ಒತ್ತು ನೀಡಲಿ ಎಂದರು.

ಒಂದು ಬಾಂಡ್ಲಿ ಮಣ್ಣೂ ತೆಗೆಸಿಲ್ಲ

ಸಚಿವರಾದಾಗಿನಿಂದ ಕ್ಷೇತ್ರದಲ್ಲಿ ನಯಾಪೈಸೆ ಅಭಿವೃದ್ದಿ ಕೆಲಸಗಳಾಗಿಲ್ಲ. ನನ್ನ ಅವಧಿಯಲ್ಲಿ ಆಗಿದ್ದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆಯೇ ವಿನಃ ಇದುವರೆಗೂ ಒಂದು ಬಾಂಡ್ಲಿ ಮಣ್ಣು ತೆಗೆಸಿಲ್ಲ. ಇವರೇನು ಅಭಿವೃದ್ಧಿ ಮಾಡ್ತಾರೆ ಎಂದು ವ್ಯಂಗವಾಡಿದರು.

ಡೀಮ್ಡ್ ಫಾರೆಸ್ಟ್ ನೆಪದಲ್ಲಿ ನನ್ನಮೇಲೆ ಸುಳ್ಳು ಆರೋಪಗಳು ಮಾಡಿ ಜನರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜಕಾರಣದಲ್ಲಿ ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು ಆದರೆ ಸಚಿವರು ಸುಳ್ಳು ಹೇಳುವುದನ್ನೆ ತಮ್ಮ ಕಾಯಕವಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದರೆಂದು ಜರೆದರು.

ಕಟಾಕಟ್ ಫಟಾಫಟ್

ರಾಹುಲ್ ಗಾಂಧಿ ಚುನಾವಣೆ ಪ್ರಚಾರದಲ್ಲಿ ಹೇಳುತ್ತಿದ್ದರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ಲಕ್ಷ ಹಣ ಕಟಾಕಟ್ ಫಟಾಫಟ್ ಅಂತ ಹಾಕುತ್ತೆವೆಂದು ಹೇಳಿದ್ದರು. ಅದು ಈಗ ಕರ್ನಾಟಕ ರಾಜ್ಯದಿಂದ ಪ್ರಾರಂಭವಾಗಿದೆ ಅಂಹಿದ ಮುಖ್ಯ ಮಂತ್ರಿಗಳು ಪರಿಶಿಷ್ಟರಿಗೆ ಮೀಸಲಿಟ್ಟ ಕೋಟ್ಯಂತರ ರು.ಗಳ ಅನುದಾನ ಟಕಾಟಕ್ ಪಟಾಪಟ್ ಅಂತ ಸರ್ಕಾರಿ ಹಣ ಖಾಸಗಿ ಖಾತೆಗಳಿಗೆ ವರ್ಗಾವಣೆ ಆಗುತ್ತಿದೆ ಎಂದು ಟೀಕಿಸಿದರು.