ಸಾರಾಂಶ
ಅಂಶಿ ಪ್ರಸನ್ನಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಸಾಮಾನ್ಯ ಹಾಗೂ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸತತ ಎರಡನೇ ಬಾರಿಗೆ ನೇರ ಹೋರಾಟ ನಡೆಯುತ್ತಿದ್ದು, ಇದರ ಲಾಭ ಯಾರಿಗೆ? ಎಂಬ ಚರ್ಚೆ ಎಲ್ಲೆಡೆ ಜೋರಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಇದರ ಲಾಭ ಬಿಜೆಪಿಗೆ ಆಯಿತು. ಮೈಸೂರಿನಲ್ಲಿ ಪ್ರತಾಪ್ ಸಿಂಹ ಸತತ ಎರಡನೇ ಗೆಲವು ದಾಖಲಿಸಿದರೆ, ಚಾಮರಾಜನಗರದಲ್ಲಿ ವಿ.ಶ್ರೀನಿವಾಸಪ್ರಸಾದ್ ಮೊದಲ ಬಾರಿ ಕಮಲ ಅರಳಿಸಿದ್ದರು. ಈ ಬಾರಿ ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿಯಾಗಿದೆ. ಕಾಂಗ್ರೆಸ್ ಏಕಾಂಗಿಯಾಗಿ ಉಭಯ ಪಕ್ಷಗಳನ್ನು ಎದುರಿಸುತ್ತಿದೆ.ಈವರೆಗಿನ ಇತಿಹಾಸ:
ಮೈಸೂರಿನಲ್ಲಿ ಈವರೆಗೆ ನಡೆದಿರುವ 17 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಗೆದ್ದಿದೆ. ಜನತಾ ಪರಿವಾರ ಖಾತೆ ತೆರೆಯಲು ಆಗಿಲ್ಲ. ಬಿಜೆಪಿ 1998, 2004, 2014, 2019 ರಲ್ಲಿ ಗೆದ್ದಿದೆ.ಚಾಮರಾಜನಗರದಲ್ಲಿ ಈವರೆಗೆ ನಡೆದಿರುವ 15 ಚುನಾವಣೆಗಳಲ್ಲಿ ಕಾಂಗ್ರೆಸ್- 10, ಜನತಾ ಪರಿವಾರ- 4 (ಜನತಾದಳ-2, ಜೆಡಿಎಸ್-1, ಜೆಡಿಯು-1), ಬಿಜೆಪಿ-1 ಬಾರಿ ಗೆದ್ದಿವೆ.
ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಕಾಂಗ್ರೆಸ್ ಮತ್ತು ಇತರರ ನಡುವೆ ಹೋರಾಟ. ಜನತಾಪಕ್ಷ ರಚನೆಯ ನಂತರ ಕಾಂಗ್ರೆಸ್ ಮತ್ತು ಜನತಾಪಕ್ಷದ ನಡುವೆ ಹೋರಾಟ. ಬಿಜೆಪಿ 1980ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ 1989ರ ಚುನಾವಣೆಯಲ್ಲಿ ಮೈಸೂರಿನಿಂದ ಮಾತ್ರ ಕಣಕ್ಕಳಿದಿತ್ತು. ಆಗಿನ ಅಭ್ಯರ್ಥಿ ತೋಂಟದಾರ್ಯ ಅವರು ಪಡೆದಿದ್ದು 25,398 ಮಾತ್ರಗಳು.1991 ರಲ್ಲಿ ಮೈಸೂರಿನಿಂದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಚಾಮರಾಜನಗರದಿಂದ ಎಲ್. ಶಿವಲಿಂಗಯ್ಯ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕ್ರಮವಾಗಿ 2,08,999 (ದ್ವಿತೀಯ), 1,48,456 (ತೃತೀಯ) ಮತಗಳನ್ನು ಗಳಿಸಿದ್ದರು.
1996 ರಲ್ಲಿ ಚಾಮರಾಜನಗರದಲ್ಲಿ ಎಲ್. ಶಿವಲಿಂಗಯ್ಯ- 94, 373 (ನಾಲ್ಕನೇ), ಮೈಸೂರಿಲ್ಲಿ ತೋಂಟದಾರ್ಯ- 1,62,630 (ತೃತೀಯ) ಸ್ಥಾನ ಗಳಿಸಿದ್ದರು.1998 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಮೊದಲ ಬಾರಿಗೆ ಆಯ್ಕೆಯಾದರು. ಅದೇ ವರ್ಷ ಚಾಮರಾಜನಗರದಲ್ಲಿ ಬಿಜೆಪಿಯ ಮಿತ್ರಪಕ್ಷ ಲೋಕಶಕ್ತಿಯ ಸುಶೀಲಾ ಕೇಶವಮೂರ್ತಿ- 75,165 (ತೃತೀಯ) ಮತ ಗಳಿಸಿದ್ದರು.
1999 ರಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಬೆಂಬಲಿತ ಜೆಡಿಯುನ ವಿ. ಶ್ರೀನಿವಾಸಪ್ರಸಾದ್ ಆಯ್ಕೆಯಾದರು,. ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್- 3,24,620 ಮತ ಪಡೆದು ಸೋತರು.2004 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಆಯ್ಕೆಯಾದರು. ಚಾಮರಾಜನಗರದಲ್ಲಿ ಬಿಜೆಪಿ ಮಿತ್ರ ಪಕ್ಷ ಜೆಡಿಯುನ ಎನ್. ಚಾಮರಾಜು- 91,716 ಮತ ಪಡೆದರು.
2009 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್- 3,47, 119 (ದ್ವಿತೀಯ), ಚಾಮರಾಜನಗರದಲ್ಲಿ ಎ.ಆರ್. ಕೃಷ್ಣಮೂರ್ತಿ - 3,65,968 (ದ್ವಿತೀಯ) ಸ್ಥಾನ ಪಡೆದರು.2014 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಗೆದ್ದರು. ಚಾಮರಾಜನಗರದಲ್ಲಿ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ- 4,26,600 (ದ್ವಿತೀಯ) ಸ್ಥಾನ ಗಳಿಸಿದ್ದರು.
ಕಳೆದ ಬಾರಿ ಆಗಿದ್ದೇನು?ಆದರೆ, 2019ರಲ್ಲಿ ಎರಡೂ ಕಡೆಯೂ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿಯಿಂದ ತಲಾ ಒಬ್ಬರು ಕಣಕ್ಕಿಳಿದಿದ್ದರಿಂದ ನೇರ ಹೋರಾಟ ನಡೆಯಿತು.
ಚಾಮರಾಜನಗರದಲ್ಲಿ ಮೈತ್ರಿಕೂಟದ ಪರವಾಗಿ ಧ್ರುವನಾರಾಯಣ, ಬಿಜೆಪಿಯಿಂದ ವಿ. ಶ್ರೀನಿವಾಸಪ್ರಸಾದ್ ಸ್ಪರ್ಧಿಸಿದ್ದರು. 5,68,537 ಮತಗಳನ್ನು ಪಡೆದ ಶ್ರೀನಿವಾಸಪ್ರಸಾದ್ ಅವರು ಧ್ರುವನಾರಾಯಣ ಅವರನ್ನು 1,817 ಮತಗಳ ಅಂತರದಿಂದ ಸೋಲಿಸಿದರು. ಧ್ರುವನಾರಾಯಣ ಅವರಿಗೆ 5,66,720 ಮತಗಳು ದೊರೆತಿದ್ದವು.ಮೈಸೂರಿನಲ್ಲಿ ಬಿಜೆಪಿಯಿಂದ ಪ್ರತಾಪ್ ಸಿಂಹ, ಮೈತ್ರಿಕೂಟದಿಂದ ಸಿ.ಎಚ್. ವಿಜಯಶಂಕರ್ ಕಣಕ್ಕಿಳಿದಿದ್ದರು. 6,88,974 ಮತಗಳನ್ನು ಪಡೆದ ಪ್ರತಾಪ್ ಸಿಂಹ ಅವರು ಸಿ.ಎಚ್. ವಿಜಯಶಂಕರ್ ಅವರನ್ನು 1,38,647 ಮತಗಳ ಅಂತರದಿಂದ ಸೋಲಿಸಿದರು. ವಿಜಯಶಂಕರ್ ಅವರಿಗೆ 5,50,327 ಮತಗಳು ದೊರೆತಿದ್ದವು.
ಈ ಬಾರಿ ಏನಾಗಬಹುದು?ಈ ಬಾರಿ ಮೈಸೂರಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಿಂದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್ನಿಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಚಾಮರಾಜನಗರದಲ್ಲಿ ಕಾಂಗ್ರೆಸ್ನಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್, ಮೈತ್ರಿಕೂಟದಿಂದ ಮಾಜಿ ಶಾಸಕ ಎಸ್. ಬಾಲರಾಜ್ ಕಣದಲ್ಲಿದ್ದಾರೆ.
ಹೀಗಾಗಿ ಈ ಬಾರಿ ನೇರ ಹೋರಾಟದ ಲಾಭ ಯಾರಿಗೆ?. ಎರಡೂ ಕಡೆಯೂ ಬಿಜೆಪಿ ಅಥವಾ ಕಾಂಗ್ರೆಸ್ ಗೆಲ್ಲುತ್ತಾ? ಅಥವಾ ತಲಾ ಒಂದೊಂದು ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತಾರೆಯೇ? ಎಂಬ ಲೆಕ್ಕಾಚಾರಗಳು ನಡೆದಿವೆ.ಜೆಡಿಎಸ್- ಬಿಎಸ್ಪಿ ಪಾತ್ರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಬಿಎಸ್ಪಿಯ ಬಿ.ಚಂದ್ರ- 24,597, ಚಾಮರಾಜನಗರದಲ್ಲಿ ಬಿಎಸ್ಪಿಯ ಡಾ. ಶಿವಕುಮಾರ್- 87,631 ಮತಗಳನ್ನು ಪಡೆದಿದ್ದರು. ಮೈಸೂರಿನಲ್ಲಿ ಬಿಜೆಪಿಯ ಗೆಲುವಿನ ಅಂತರ ಹೆಚ್ಚಿದ್ದರಿಂದ ಬಿಎಸ್ಪಿಯ ಬಗ್ಗೆ ಪ್ರಸ್ತಾಪವಾಗಲಿಲ್ಲ. ಆದರೆ ಚಾಮರಾಜನಗರದಲ್ಲಿ ಗೆಲುವಿನ ಅಂತರ ತೀರಾ ಕಡಿಮೆ ಇದ್ದಿದ್ದರಿಂದ ಕಾಂಗ್ರೆಸ್ ಸೋಲಿಗೆ ಬಿಎಸ್ಪಿ ಕಾರಣ ಎಂದು ವ್ಯಾಖ್ಯಾನಿಸಲಾಯಿತು.ಆದರೆ, ವಾಸ್ತವವಾಗಿ ಕಳೆದ ಬಾರಿ ಜೆಡಿಎಸ್ ಕಣದಲ್ಲಿ ಇಲ್ಲದಿದ್ದು ಹಾಗೂ ಆ ಪಕ್ಷಗಳ ಮತಗಳು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ವರ್ಗಾವಣೆ ಆಗದಿದಿದ್ದು ಕಾರಣ ಎಂದು ಹೇಳಬಹುದು.
ಏಕೆಂದರೆ 2009 ರಲ್ಲಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಜೆಡಿಎಸ್ಸಿನ ಬಿ.ಎ. ಜೀವಿಜಯ 2,16,283 ಮತಗಳನ್ನು ಪಡೆದಿದ್ದರು. 3,54,810 ಮತಗಳನ್ನು ಪಡೆದಿದ್ದ ಕಾಂಗ್ರೆಸ್ಸಿನ ಎಚ್. ವಿಶ್ವನಾಥ್ ಅವರು 3,47,119 ಮತಗಳನ್ನು ಗಳಿಸಿದ್ದ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರನ್ನು 7,691 ಮತಗಳ ಅಂತರದಿಂದ ಸೋಲಿಸಿದ್ದರು.2014 ರಲ್ಲಿ ಜೆಡಿಎಸ್ಸಿನ ಚಂದ್ರಶೇಖರಯ್ಯ ಅವರಿಗೆ 1,38,547 ಮತಗಳು ದೊರೆತಿದ್ದವು. 5,03,908 ಮತಗಳನ್ನು ಪಡೆದಿದ್ದ ಬಿಜೆಪಿಯ ಪ್ರತಾಪ್ ಸಿಂಹ ಅವರು 4,72,300 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ಸಿನ ಎಚ್. ವಿಶ್ವನಾಥ್ ಅವರನ್ನು 31,608 ಮತಗಳ ಅಂತರದಿಂದ ಸೋಲಿಸಿದ್ದರು.
2019 ರಲ್ಲಿ ಜೆಡಿಎಸ್ ಕಣದಲ್ಲಿ ಇರಲಿಲ್ಲ. ಬಿಜೆಪಿಯ ಪ್ರತಾಪ್ ಸಿಂಹ ಕಾಂಗ್ರೆಸ್ಸಿನ ಸಿ.ಎಚ್. ವಿಜಯಶಂಕರ್ ಅವರನ್ನು 1,38,647 ಮತಗಳ ಅಂತರದಿಂದ ಸೋಲಿಸಿದ್ದರು. ಇದು 2009 ರಲ್ಲಿ ಚುನಾವಣೆಯಲ್ಲಿ ಜೆಡಿಎಸ್ಸಿಗೆ ಬಿದ್ದ ಮತಗಳಿಗಿಂತ 100 ಮಾತ್ರ ಹೆಚ್ಚು ಎಂಬುದನ್ನು ಗಮನಿಸಬೇಕು. 2014 ರಲ್ಲಿ ಕೂಡ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ಮೇಲಿನ ಕೋಪಕ್ಕೆ ಜೆಡಿಎಸ್ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. 2019 ರಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲಿಲ್ಲ ಎಂಬ ಆಕ್ರೋಶದಿಂದ ಮೈತ್ರಿ ಧರ್ಮ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.ಚಾಮರಾಜನಗರದಲ್ಲಿ 2009 ರಲ್ಲಿ ಜೆಡಿಎಸ್ಸಿನ ಕೋಟೆ ಎಂ. ಶಿವಣ್ಣ ಅವರಿಗೆ 1,06,876 ಮತಗಳು ದೊರೆತಿದ್ದವು. 3,65,970 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ಸಿನ ಆರ್. ಧ್ರುವನಾರಾಯಣ ಅವರು 3,65,978 ಮತಗಳನ್ನು ಪಡೆದಿದ್ದ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರನ್ನು 4002 ಮತಗಳ ಅಂತರದಿಂದ ಸೋಲಿಸಿದ್ದರು. ಬಿಎಸ್ಪಿಯ ಎನ್, ಮಹೇಶ್ 68,446 ಮತಗಳನ್ನು ಪಡೆದಿದ್ದರು.
2014 ರಲ್ಲಿ ಜೆಡಿಎಸ್ಸಿನ ಕೋಟೆ ಎಂ. ಶಿವಣ್ಣ 58,760 ಮತಗಳನ್ನು ಪಡೆದಿದ್ದರು. 5,67,782 ಮತಗಳನ್ನು ಗಳಿಸಿದ್ದ ಕಾಂಗ್ರೆಸ್ಸಿನ ಆರ್. ಧ್ರುವನಾರಾಯಣ 4,26,600 ಮತಗಳನ್ನು ಪಡೆದಿದ್ದ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರನ್ನು 1,41,182 ಮತಗಳ ಅಂತರದಿಂದ ಸೋಲಿಸಿದ್ದರು. ಬಿಎಸ್ಪಿಯ ಶಿವಮಲ್ಲು 34,846 ಮತಗಳನ್ನು ಪಡೆದಿದ್ದರು.ಈ ಅಂಕಿ ಅಂಶಗಳನ್ನು ಗಮನಿಸಿದಾಗ ತ್ರಿಕೋನ ಹೋರಾಟ ನಡೆದಿದ್ದಲ್ಲಿ ಅಥವಾ ಮೈತ್ರಿ ಧರ್ಮ ಸಮರ್ಪಕವಾಗಿ ಪಾಲನೆಯಾಗಿದ್ದಲ್ಲಿ ವಿಭಿನ್ನ ಫಲಿತಾಂಶ ಬರುವ ಸಾಧ್ಯತೆ ಇತ್ತು. ಎರಡೂ ಕಡೆಯೂ ‘ಕಮಲ’ ಮುದುಡಿ, ‘ಕೈ’ ಮೇಲಾಗುವ ಸಂಭವ ಇತ್ತು.
ಈ ಬಾರಿ ಮೈಸೂರಿನಲ್ಲಿ ಬಿಎಸ್ಪಿ ಕಣದಲ್ಲಿ ಇಲ್ಲ. ಚಾಮರಾಜನಗರದಲ್ಲಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಸ್ಪರ್ಧಿಸಿದ್ದಾರೆ. ಹೀಗಾಗಿ ಫಲಿತಾಂಶ ಕುತೂಹಲ ಕೆರಳಿಸಿದೆ.