ಸಾರಾಂಶ
ದಾವಣಗೆರೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಾಕಷ್ಟು ಕಷ್ಟಪಟ್ಟಿದ್ದು, ಅದಕ್ಕೆ ಪ್ರತಿಫಲ ಇದ್ದೇ ಇದೆ. ಇದೇ ಅವಧಿಯಲ್ಲಿ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಡಿಕೆಶಿ ಆಪ್ತ ಬಳಗದ ಚನ್ನಗಿರಿ ಕ್ಷೇತ್ರ ಶಾಸಕ ಶಿವಗಂಗಾ ವಿ.ಬಸವರಾಜ ಮತ್ತೆ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರು ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಕೆಪಿಸಿಸಿ ಅಧ್ಯಕ್ಷರಾದ ಅವರು ವಾಸ್ತವವಾಗಿ 5 ವರ್ಷ ಮುಖ್ಯಮಂತ್ರಿ ಆಗಬೇಕಿತ್ತು.
ಕೆಲ ಬೆಳವಣಿಗೆಗಳಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಖಾಲಿ ಆಗುತ್ತಿದ್ದಂತೆಯೇ ನಾವು ಅದಕ್ಕೆ ಕ್ಲೇಮ್ ಮಾಡುತ್ತೇವೆ ಎಂದು ತಿಳಿಸಿದರು.ಕಳೆದ ಉಪ ಚುನಾವಣೆಯಲ್ಲಿ ಹೋರಾಟ ಮಾಡಿ, ಕಷ್ಟಪಟ್ಟು ಮೂರೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಶಾಸಕರಿಗೆ ಆರ್ಡರ್ ಮಾಡಿ ಕೇಳಬೇಕು.
ಆ ಸಾಮರ್ಥ್ಯ ಅವರದು. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದರು.ನಾವೆಲ್ಲಾ ಒಗ್ಗಟ್ಟಾಗಿಯೇ ಇದ್ದೇವೆ. ಏನಾದರೂ ತೀರ್ಮಾನ ಕೈಗೊಳ್ಳಬೇಕಾದರೆ ಅದಕ್ಕೆ ಹೈಕಮಾಂಡ್ ಇದೆ. ಅಧಿಕಾರ ಹಂಚಿಕೆ, ಪವರ್ ಶೇರಿಂಗ್ ಯಾವುದೂ ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಬುದಾಗಿ ಡಿ.ಕೆ.ಶಿವಕುಮಾರ ಹೇಳಿರುವುದು ಸರಿಯಾಗಿದೆ.
ಡಿಕೆಶಿಯವರ ಪರವಾಗಿ ನಾವೆಲ್ಲರೂ ಇದ್ದೇವೆ ಎಂದು ಡಿಸಿಎಂ ಹೇಳಿಕೆಯನ್ನು ಶಾಸಕರು ಸಮರ್ಥಿಸಿಕೊಂಡರು.ಕೆಲವರು ಮಾತನಾಡುತ್ತಾರೆ ಅಷ್ಟೆ. ತಮಗೆ ಮಾಡಿಟ್ಟ ಊಟವನ್ನು ಮಾಡುವುದಕ್ಕೆ ಮಾತ್ರ ಬರುತ್ತಾರೆ. ಆದರೆ, ಡಿ.ಕೆ.ಶಿವಕುಮಾರ ಅವರು ಕೆಲಸ ಮಾಡುತ್ತಾರೆ. ಪಕ್ಷಕ್ಕಾಗಿ ಕಷ್ಟಪಟ್ಟವರಿಗೆ ಒಳ್ಳೆಯ ದಿನಗಳು ಇದ್ದೇ ಇರುತ್ತವೆ ಎಂದರು.