ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದಲಿತರು, ಮಹಿಳೆಯರ ಅಭಿವೃದ್ಧಿಯಲ್ಲಿ ಸರ್ಕಾರಗಳು ವಿಫಲ : ಯು.ಬಸವರಾಜು ಟೀಕೆ

| Published : Sep 27 2024, 01:19 AM IST / Updated: Sep 27 2024, 04:19 AM IST

ಸಾರಾಂಶ

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗದ ಜನಾಂಗವನ್ನು ಅಭಿವೃದ್ಧಿಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ  

 ಗುಡಿಬಂಡೆ : ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗದ ಜನಾಂಗವನ್ನು ಅಭಿವೃದ್ದಿಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಟೀಕಿಸಿದರು.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಿಪಿಎಂ ವತಿಯಿಂದ ಹಮ್ಮಿಕೊಂಡಿದ್ದ 18ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಮಹಿಳೆ, ದಲಿತ ಶೋಷಿತ ಸಮುದಾಯಗಳ ಸಬಲೀಕರಣದ ಪ್ರಶ್ನೆಗಳು ಮತ್ತು ಸರ್ಕಾರದ ಧೋರಣೆಗಳು ಕುರಿತ ವಿಚಾರಸಂಕಿರಣದಲ್ಲಿ ಅ‍ವರು ಮಾತನಾಡಿದರು.

ದೇಶದಲ್ಲಿ ಶೋಷಣೆ ಜೀವಂತ

ದೇಶದಲ್ಲಿ ಜಾತಿ ನಿರ್ಮೂಲನೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು, ದಲಿತರ ಮೇಲಿನ ಶೋಷಣೆ ಜೀವಂತವಾಗಿದೆ. ಇದನ್ನು ನಿರ್ಮೂಲನೆ ಮಾಡಲು ಕೇವಲ ಅದು ಸಿಪಿಎಂನಿಂದ ಮಾತ್ರ ಸಾಧ್ಯ. ಆದ್ದರಿಂದ ದೇಶದಲ್ಲಿ ಸಿಪಿಎಂ ಬಲಿಷ್ಠವಾಗಿ ಕಟ್ಟಲು ದಲಿತರು, ಬಡವರು, ಕೃಷಿ, ಕೂಲಿ ಕಾರ್ಮಿಕರು ವಿದ್ಯಾರ್ಥಿ ಯುವಜನರು, ಮಹಿಳೆಯರು, ಶೋಷಿತ ಸಮುದಾಯಗಳು ಒಂದಾಗಬೇಕು, ರಾಜ್ಯದಲ್ಲಿ ಪ.ಜಾತಿ, ಪ.ಪಂಗಡದ ಎಸ್.ಸಿ.ಪಿ-ಟಿ.ಎಸ್.ಪಿ.ಅನುದಾನ ದುರ್ಬಳಕೆಯಾಗಿದೆ. ನಾವು ಸಂಘಟನಾತ್ಮಕವಾಗಿ ಒಂದಾಗಿ ಹೋರಾಟ ಮಾಡಬೇಕು ಎಂದರು.

ಪಕ್ಷದ ಮುಖಂಡ ಡಾ.ಅನೀಲ್ ಕುಮಾರ್ ಮಾತನಾಡಿ, ದಲಿತರಿಗೆ ಮೀಸಲಾತಿ ನೀಡುತ್ತಿರುವುದು ತಾತ್ಕಲಿಕ ಪರಿಹಾರವೇ ವಿನಃ ಶಾಶ್ವತ ಪರಿಹಾರವಲ್ಲ. ಸಿಪಿಎಂ ಜನರ ಹಸಿವು ನೀಗಿಸುವಂತಹ ಪಕ್ಷವಾಗಿದೆ. ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದೆ. ನಾವು ಅದನ್ನು ಬೆಂಬಲಿಸುತ್ತೇವೆ. ಆದರೆ ಆ ಉಚಿತ ಯೋಜನೆಗಳಿಗೆ ತಗಲುವ ವೆಚ್ಚ ನಾವೇ ಕಟ್ಟಿದ ತೆರಿಗೆ ಎಂಬುದನ್ನು ಮರೆಯಬಾರದು ಎಂದರು.

ನವೆಂಬರ್‌ನಲ್ಲಿ ಜಿಲ್ಲಾ ಸಮ್ಮೇಳನ

ಇನ್ನೂ ಬಾಗೇಪಲ್ಲಿಯಲ್ಲಿ ನವೆಂಬರ್ ಮಾಹೆಯಲ್ಲಿ 18ನೇ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿ, ಕೃಷ್ಣ ನದಿ ನೀರು ಸೇರಿದಂತೆ ನಿವೇಶನ, ವಸತಿ, ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೆಚ್ಚು ಜನರು ಈ ಸಮ್ಮೇಳನದಲ್ಲಿ ಭಾಗಿಯಾಗಬೇಕು ಎಂದರು.

ಈ ವೇಳೆ ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ ಕಾಂ.ದೇವಿ, ಸಿಪಿಎಂ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ. ತಾಲೂಕು ಕಾರ್ಯದರ್ಶಿ ಜಯರಾಮರೆಡ್ಡಿ, ರಘುರಾಮರೆಡ್ಡಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ, ಸದಸ್ಯರಾದ ಸಿದ್ದಗಂಗಪ್ಪ, ನಾಗರಾಜು, ಚನ್ನರಾಯಪ್ಪ, ರಾಮಲಿಂಗಪ್ಪ, ಡಿ.ಸಿ.ಶ್ರೀನಿವಾಸ್, ಅಶ್ವತ್ಥಪ್ಪ ರಾಮಾಂಜಿ ಕೆ.ವೆಂಕಟರಮಣ, ದೇವರಾಜು, ಶ್ರೀನಿವಾಸ್, ಕಾರ್ಯದರ್ಶಿ, ಆದಿನಾರಾಯಣ ಸ್ವಾಮಿ , ರಾಜಪ್ಪ, ಶಿವಪ್ಪ ಸೇರಿದಂತೆ ಹಲವರು ಇದ್ದರು.