ಸಾರಾಂಶ
ನವದೆಹಲಿ : ‘ಕಾಂಗ್ರೆಸ್ ಈಗ ಕೇವಲ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ ಅದು ಭಾರತ ದೇಶದ ವಿರುದ್ಧ ಹೋರಾಡುತ್ತಿದೆ ಹೋರಾಡುತ್ತಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಕ್ಷದ ನೂತನ ಕಚೇರಿ ಉದ್ಘಾಟನೆ ವೇಳೆ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಟೀಕಿಸುವ ಭರದಲ್ಲಿ ರಾಹುಲ್ ಆಡಿದ ಮಾತುಗಳಿಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ರಾಹುಲ್ ಹೇಳಿದ್ದೇನು?:
ಬುಧವಾರ ಇಲ್ಲಿ ಕಾಂಗ್ರೆಸ್ನ ನೂತನ ಕಚೇರಿ ಉದ್ಘಾಟನೆ ಬಳಿಕ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಾವು ನ್ಯಾಯಸಮ್ಮತ ಹೋರಾಟದಲ್ಲಿ ಭಾಗಿಯಾಗಿದ್ದೇವೆ ಎಂದು ಅಂದುಕೊಳ್ಳಬೇಡಿ. ಇದರಲ್ಲಿ ನ್ಯಾಯಸಮ್ಮತೆಯೇ ಇಲ್ಲ. ನಾವು ರಾಜಕೀಯ ಸಂಘಟನೆಯಾದ ಬಿಜೆಪಿ ಜೊತೆಗೆ, ರಾಜಕೀಯ ಸಂಘಟನೆಯಾದ ಆರ್ಎಸ್ಎಸ್ ಜೊತೆಗೆ ನ್ಯಾಯಸಮ್ಮತ ಹೋರಾಟ ಮಾಡುತ್ತಿದ್ದೇವೆ ಎಂದು ನೀವು ಅಂದುಕೊಂಡಿದ್ದರೆ ಇಲ್ಲಿ ಏನಾಗುತ್ತಿದೆ ಎಂಬುದೇ ನಿಮಗೆ ಗೊತ್ತಿಲ್ಲ’ ಎಂದರು.
‘ಏಕೆಂದರೆ, ನಾವು ಈ ಸೈದ್ಧಾಂತಿಕ ಹೋರಾಟವನ್ನು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಸುತ್ತಿದ್ದೇವೆ. ಬಿಜೆಪಿ ಮತ್ತು ಆರ್ಎಸ್ಎಸ್ ಸಂವಿಧಾನದ ಪ್ರತಿಯೊಂದು ಸಂಸ್ಥೆಯನ್ನೂ ಕೂಡಾ ಕೈವಶ ಮಾಡಿಕೊಂಡಿದೆ. ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲೇ ಗಂಭೀರ ದೋಷಗಳಿದೆ. ಹೀಗಾಗಿ ನಾವೀಗ ಬಿಜೆಪಿ, ಆರ್ಎಸ್ಎಸ್ ಮತ್ತು ಭಾರತ ದೇಶದ ವಿರುದ್ಧವೇ ಹೋರಾಡುತ್ತಿದ್ದೇವೆ’ ಎಂದು ಹೇಳಿದರು.
ರಾಹುಲ್ ಹೇಳಿಕೆ ವಿರುದ್ಧ ಕಿಡಿಕಾದಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ‘ರಾಹುಲ್ ಈಗ ಬಹಿರಂಗವಾಗಿ ಭಾರತದ ವಿರುದ್ಧವೇ ಯದ್ಧ ಸಾರಿದ್ದಾರೆ. ಅವರ ಹೇಳಿಕೆ ಜಾರ್ಜ್ ಸೊರೋಸ್ ಕಪಟ ನಾಟಕದ ಭಾಗದಂತಿದೆ’ ಎಂದು ತಿರುಗೇಟು ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪ್ರತಿಕ್ರಿಯಿಸಿ, ‘ಸಂವಿಧಾನದ ಮೇಲೆ ಪ್ರಮಾಣ ಮಾಡಿದ್ದ ವಿಪಕ್ಷ ನಾಯಕನೀಗ ಹೀಗೆ ಹೇಳುತ್ತಿದ್ದಾರೆ. ಹಾಗಾದರೆ ಅವರು ಸಂವಿಧಾನದ ಪ್ರತಿಯೊಂದಿಗೆ ತಿರುಗುವುದಕ್ಕೆ ಅರ್ಥವೇನು?’ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಕರಾಳ ಸತ್ಯ ಬಯಲು: ನಡ್ಡಾ ಸಿಡಿಮಿಡಿ- ಗಾಂಧಿ ಕುಟುಂಬ, ನಗರ ನಕ್ಸಲ್ ನಂಟು ಮತ್ತೆ ಸಾಬೀತುನವದೆಹಲಿ: ನಾವೀಗ ಭಾರತದ ವಿರುದ್ಧವೇ ಹೋರಾಡುತ್ತಿದ್ದೇವೆ ಎಂಬ ರಾಹುಲ್ ಗಾಂಧಿ ಹೇಳಿಯಿಂದ ಕಾಂಗ್ರೆಸ್ನ ಕರಾಳ ಸತ್ಯ ಈಗ ಬಹಿರಂಗವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ.
ರಾಹುಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಡ್ಡಾ, ‘ಗಾಂಧಿ ಹಾಗೂ ಅವರ ಬಳಗ ನಗರ ನಕ್ಸಲರೊಂದಿಗೆ ಮತ್ತು ದೇಶವನ್ನು ಅವಮಾನಿಸುವ, ದೇಶಕ್ಕೆ ಕಳಂಕ ತರುವವರೊಂದಿಗೆ ನಂಟು ಹೊಂದಿದೆ ಎಂಬ ವಿಷಯ ರಾಹುಲ್ರ ವರ್ತನೆಯಿಂದ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ರಾಹುಲ್ರ ಪ್ರತಿ ವರ್ತನೆ ಕೂಡಾ ದೇಶ ಮತ್ತು ಸಮಾಜವನ್ನು ದಿಕ್ಕಿನಲ್ಲೇ ಇರುತ್ತದೆ. ಕಾಂಗ್ರೆಸಿಗರು ಅಧಿಕಾರದಾಹದಿಂದ ರಾಷ್ಟ್ರದ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಂಡು ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ’ ಎಂದು ನಡ್ಡಾ ಕಿಡಿಕಾರಿದರು.
ಜೊತೆಗೆ, ‘ನೀವು ಭಾರತದ ವಿರುದ್ಧ ಹೋರಾಡುತ್ತಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡದ್ದಕ್ಕೆ ಧನ್ಯವಾದ’ ಎಂದು ಕಾಲೆಳೆದರು.
ಮತ್ತೊಂದೆಡೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ‘ಇಂಥ ಪರಿಪಕ್ವವಲ್ಲದ ಮತ್ತು ದೇಶದ್ರೋಹಿ ವ್ಯಕ್ತಿ ಲೋಕಸಭೆಯ ವಿಪಕ್ಷ ನಾಯಕನಾಗಿರುವುದು ಭಾರತದ ದುರ್ದೈವ. ಮೋಹನ್ ಭಾಗವತ್ ಹೇಳಿಕೆಯನ್ನು ದೇಶದ್ರೋಹ ಎಂದಿರುವ ರಾಹುಲ್ ಗಾಂಧಿಯೇ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 152ರ ಅನ್ವಯ ಅವರು 7 ವರ್ಷ ಜೈಲು ಶಿಕ್ಷೆ ಅನುಭವಿಸಲು ಅರ್ಹರು’ ಎಂದು ತಿರುಗೇಟು ನೀಡಿದರು.