ಸಾರಾಂಶ
ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಚಾರವಾಗಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳ ನಡುವೆ ಹೊಸ ಕ್ರೆಡಿಟ್ ವಾರ್ ಶುರುವಾಗಿದೆ.
ಮಂಡ್ಯ : ಶ್ರೀರಂಗಪಟ್ಟಣ- ಜೇವರ್ಗಿ ಹೆದ್ದಾರಿ ಕಾಮಗಾರಿ ವಿಚಾರದಲ್ಲೇ ಹಳೆಯ ದೋಸ್ತಿಗಳಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕ್ರೆಡಿಟ್ ಫೈಟ್ ಮುಗಿದ ಬೆನ್ನಲ್ಲೇ ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಚಾರವಾಗಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳ ನಡುವೆ ಹೊಸ ಕ್ರೆಡಿಟ್ ವಾರ್ ಶುರುವಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ವಿಚಾರದ ಕ್ರೆಡಿಟ್ಗೆ ಮೈತ್ರಿ ನಾಯಕರ ಬೆಂಬಲಿಗರು ಜಟಾಪಟಿ ನಡೆಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ನಾರಾಯಣಗೌಡ ಬೆಂಬಲಿಗರು ಸಾಮಾಜಿಕ ಜಾಲ ತಾಣದಲ್ಲಿ ಕಾಳಗಕ್ಕಿಳಿದಿದ್ದಾರೆ. ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸಾರಿಗೆ ಸಚಿವರು ಅಸ್ತು ಎಂದಿದ್ದು, ಈ ಕುರಿತು ಕುಮಾರಸ್ವಾಮಿ ಕೂಡ ಸ್ಪಷ್ಟನೆ ನೀಡಿ ಜೆಡಿಎಸ್ ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಹಾಕಿದ್ದರು.
ಇನ್ನೂ ಅದೇ ವಿಚಾರವಾಗಿ ಎಚ್ಡಿಕೆ ಹಾಗೂ ಜೆಡಿಎಸ್ ವಿರುದ್ಧ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಬೆಂಬಲಿಗರ ಕಿಡಿಕಾರಿದ್ದು, ಎಚ್ಡಿಕೆಗೂ ಮೊದಲೇ ಶ್ರೀರಂಗಪಟ್ಟಣ-ಅರಸೀಕೆರೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡ ಮನವಿ ಮಾಡಿದ್ದು, ಅದಕ್ಕೆ ಹಿಂದೆಯೇ ಒಪ್ಪಿಗೆ ದೊರೆತಿದೆ. ಭಾರತ್ ಮಾಲಾ ಯೋಜನೆಯಡಿ ಈ ಹೆದ್ದಾರಿ ಅಭಿವೃದ್ಧಿ ಯೋಜನೆ ನೋಂದಣಿ ಸಹ ಆಗಿದೆ ಎಂದು ನಾರಾಯಣಗೌಡರು ಹಿಂದೆ ನಿತಿನ್ ಗಡ್ಕರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದ ದಾಖಲೆ ಬಿಡುಗಡೆಗೊಳಿಸಿದ್ದಾರೆ. ಹಾಗಾಗಿ ಶ್ರೀರಂಗಪಟ್ಟಣ-ಅರಸೀಕೆರೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡರೇ ಕಾರಣ ಎಂದು ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್ಗೆ ಬಿಜೆಪಿ ಕೌಂಟರ್ ಕೊಟ್ಟಿದೆ.