ಸಾರಾಂಶ
ಮೈಸೂರು : ರಾಜ್ಯಪಾಲರು ಸಂವಿಧಾನದ ರಕ್ಷಕರು. ಯಾವುದಾದರೂ ಆರೋಪ ಬಂದಾಗ ಸಾಕ್ಷಿ ಕಲೆ ಹಾಕಬೇಕು. ಯಾವುದೇ ಸಾಕ್ಷಿ ಇಲ್ಲದ ಕೇಸ್ ನಲ್ಲಿ ಸಿಎಂಗೆ ಶೋಕಾಸ್ ನೋಟಿಸ್ ನೀಡೋದು ಎಷ್ಟರ ಮಟ್ಟಿಗೆ ಸರಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇದು ಜನಾದೇಶ ಪಡೆದಿರುವ ಸರ್ಕಾರ. ಇಂತಹ ಸರ್ಕಾರವನ್ನು ದೆಹಲಿಯಲ್ಲಿ ಕುಳಿತು ದುರ್ಬಲಗೊಳಿಸಲು ಪ್ರಯತ್ನ ಮಾಡುತ್ತಿದ್ದೀರಲ್ಲಾ. ನಿಮಗೆ ನಿಜಕ್ಕೂ ನೈತಿಕತೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನಾಡು ಕಂಡ ಪ್ರಾಮಾಣಿಕ, ಹೋರಾಟಗಾರ, ಅಪರೂಪದ ನಾಯಕ. ಸಿಎಂಗೆ ಕಪ್ಪು ಮಸಿ ಬಳಿಯಲಿಕ್ಕೆ ಮುಂದಾಗಿದ್ದೀರಾ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದೀರಾ. ಕಾಂಗ್ರೆಸ್ ಪಕ್ಷ ಪ್ರಜಾಸತ್ತಾತ್ಮಕ ವಿರೋಧಿಗಳನ್ನು ಒಗ್ಗಟ್ಟಾಗಿ ಎದುರಿಸುತ್ತದೆ ಎಂದು ಅವರು ಹೇಳಿದರು.
ಕಳೆದ ಒಂದು ತಿಂಗಳಿನಿಂದ ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಕ್ಕೆ ಉತ್ತರ ಕೊಡುವ ಸಮಾವೇಶ ಇದಾಗಿದೆ.
20 ವರ್ಷದ ಹಳೆ ಪ್ರಕರಣವನ್ನು ಈಗ ಮುನ್ನಲೆಗೆ ಬಿಜೆಪಿ, ಜೆಡಿಎಸ್ ನವರು ತಂದಿದ್ದಾರೆ. ಬಡವರು, ಧ್ವನಿ ಇಲ್ಲದವರ ಪರವಾಗಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಉತ್ತಮ ಸರ್ಕಾರಕ್ಕೆ ತೊಂದರೆ ಕೊಡುವುದು ಒಳ್ಳೆಯ ಬೆಳವಣಿಗೆಯಲ್ಲ.
ಸರ್ಕಾರ ಉತ್ತಮವಾಗಿ ನಡೆಯುತ್ತಿದೆ.
- ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವರು