ಸಾರಾಂಶ
ಮುಳಬಾಗಿಲು : ಸಿಎಂ ಸಿದ್ದರಾಮಯ್ಯ ನನ್ನನ್ನು ಖಾಸಗಿಯಾಗಿ ಕರೆದು ಮಾತನಾಡಿರುವುದು ಸತ್ಯ. ಆದರೆ, ನಾನು ಕಾಂಗ್ರೆಸ್ ಸೇರ್ಪಡೆ ಆಗುವುದಿಲ್ಲ. ಅದು ಊಹಾಪೋಹ ಮಾತ್ರ. ಗಾಳಿ ಸುದ್ದಿಗಳಿಗೆ ಯಾರು ಕಿವಿ ಕೊಡಬಾರದು’ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.
11 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂಬ ಇತ್ತೀಚಿನ ಕಾಂಗ್ರೆಸ್ ಶಾಸಕರ ಹೇಳಿಕೆ ಬೆನ್ನಲ್ಲೇ ಸಮೃದ್ಧಿ ಅವರ ಈ ಸ್ಪಷ್ಟನೆ ಹೊರಬಿದ್ದಿದೆ.ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ’ಸಿಎಂ ಸಿದ್ದರಾಮಯ್ಯ ನನ್ನನ್ನು ಖಾಸಗಿಯಾಗಿ ಕರೆದು ಮಾತನಾಡಿರುವುದು ಸತ್ಯ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅನುದಾನಕ್ಕೆ ನಾನು ಹೋಗಿರುವುದೇ ವಿನಃ ಕಾಂಗ್ರೆಸ್ ಸೇರ್ಪಡೆಗಲ್ಲ’ ಎಂದು ತಿಳಿಸಿದರು.
‘ಮಾಲೂರು ಶಾಸಕ ನಂಜೇಗೌಡರು, ಕೋಲಾರ ಜಿಲ್ಲೆಯ ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂದು ಹೇಳಿರುವುದು ನನಗೂ ಕುತೂಹಲ ಮೂಡಿಸಿದೆ. ಅವರೇ ಜೆಡಿಎಸ್ ಶಾಸಕರ ಹೆಸರು ಬಹಿರಂಗಪಡಿಸಲಿ. ನಾನಂತೂ ಕಾಂಗ್ರೆಸ್ ಸೇರ್ಪಡೆ ಆಗುವುದಿಲ್ಲ. ಇದೆಲ್ಲ ಬರೀ ಊಹಾಪೋಹ ಮಾತ್ರ, ಗಾಳಿ ಸುದ್ದಿಗಳಿಗೆ ಯಾರೂ ಕಿವಿ ಕೊಡಬಾರದು’ ಎಂದು ಹೇಳಿದರು.
‘ನಾನು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನನ್ನನು ನಂಬಿ ಪಕ್ಷ ನನಗೆ ‘ಬಿ’ ಫಾರಂ ಕೊಟ್ಟಿದೆ. ನನ್ನ ಗೆಲುವಿಗೆ ಜೆಡಿಎಸ್ ಪಕ್ಷದ ಮುಖಂಡರು ಶ್ರಮಿಸಿದ್ದಾರೆ. ಅಲ್ಲದೆ ತಾಲೂಕಿನ ಮತದಾರರು ನನ್ನನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.