ಅಮಿತ್‌ ಶಾಗೆ ತಿಳಿಸಿಯೇ ದಾವಣಗೆರೆ ಸಮಾವೇಶ ನಡೆಸಲು ಭಿನ್ನರ ಚಿಂತನೆ - ಪರೋಕ್ಷ ಬೆಂಬಲ ನೀಡುತ್ತಿರುವವರ ಸಲಹೆ

| Published : Jan 18 2025, 08:26 AM IST

Amith Shah

ಸಾರಾಂಶ

ರಾಜ್ಯ ಬಿಜೆಪಿಯ ಬಣ ರಾಜಕೀಯ ಮುಂದುವರೆದಿದ್ದು, ದೆಹಲಿ ವಿಧಾನಸಭಾ ಚುನಾವಣೆ ಭರಾಟೆ ಮುಗಿದ ಬಳಿಕ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ನಾಯಕರು ಅದಕ್ಕೂ ಮುನ್ನ   ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲು ಚಿಂತನೆ ನಡೆಸಿದ್ದಾರೆ.

ಬೆಂಗಳೂರು : ರಾಜ್ಯ ಬಿಜೆಪಿಯ ಬಣ ರಾಜಕೀಯ ಮುಂದುವರೆದಿದ್ದು, ದೆಹಲಿ ವಿಧಾನಸಭಾ ಚುನಾವಣೆ ಭರಾಟೆ ಮುಗಿದ ಬಳಿಕ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ನಾಯಕರು ಅದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಲು ಚಿಂತನೆ ನಡೆಸಿದ್ದಾರೆ.

ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸದೆ ಸಮಾವೇಶ ಮಾಡಿದಲ್ಲಿ ಅದು ಮುಂದೆ ಗಂಭೀರ ಸ್ವರೂಪಕ್ಕೆ ತಿರುಗಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಬಿಜೆಪಿಯಲ್ಲಿ ಅಮಿತ್ ಶಾ ಅವರೇ ಪ್ರಭಾವಿ ನಾಯಕರು. ಹೀಗಾಗಿ, ಅವರೊಂದಿಗೆ ಮಾತುಕತೆ ನಡೆಸದೆ ಸಮಾವೇಶ ಹಮ್ಮಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಯತ್ನಾಳ ಬಣಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅದು ವಕ್ಫ್ ಹೋರಾಟದ ಹೆಸರಿನಲ್ಲಿ ಮಾಡುವ ಸಮಾವೇಶವಾಗಿರಲಿ ಅಥವಾ ಬೇರೊಂದು ಹೆಸರಿನಲ್ಲಿ ಹಮ್ಮಿಕೊಳ್ಳುವ ಸಮಾವೇಶವಾಗಿರಲಿ. ಅಮಿತ್ ಶಾ ಅವರ ಗಮನಕ್ಕೆ ತಂದು ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮುಂದೆ ವರಿಷ್ಠರ ಬೆಂಬಲ ನಿರೀಕ್ಷಿಸಲು ಆಗುವುದಿಲ್ಲ. ಹೀಗಾಗಿ, ಏನೇ ಮಾಡಿದರೂ ಅದನ್ನು ವರಿಷ್ಠರ ಗಮನಕ್ಕೆ ತರುವುದು ಎಲ್ಲ ರೀತಿಯಿಂದಲೂ ಅನುಕೂಲ ಎಂಬ ಚರ್ಚೆ ಯತ್ನಾಳ ಬಣದಲ್ಲಿ ನಡೆದಿದೆ ಎನ್ನಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಕಹಳೆ ಮೊಳಗಿಸಿರುವ ಯತ್ನಾಳ ಬಣದ ನಾಯಕರು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ರಾಜ್ಯದ ಮಧ್ಯಭಾಗವಾದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಉದ್ದೇಶಿಸಿದ್ದಾರೆ. ಇದಕ್ಕಾಗಿ ಬಣದ ಹಿರಿಯ ನಾಯಕರೇ ತಲಾ ಎರಡು ಕೋಟಿ ರು.ಗಳನ್ನು ವಿನಿಯೋಗಿಸಲು ಮುಂದಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ.