ಅಣ್ಣಾ ಇಲ್ಲಿ ಲೀಡರ್ಸೇ ಇಲ್ಲ! : ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ಶಾಸಕರ ದೂರು

| Published : Dec 14 2024, 12:45 AM IST / Updated: Dec 14 2024, 04:24 AM IST

hd kumaraswamy

ಸಾರಾಂಶ

ಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಸಮನ್ವಯದ ಕೊರತೆ ಬಹಿರಂಗಗೊಂಡ ಬೆನ್ನಲ್ಲೇ ಅದರ ಮಿತ್ರಪಕ್ಷ ಜೆಡಿಎಸ್‌ನಲ್ಲಿಯೂ ನಾಯಕತ್ವದ ವಿಚಾರದಲ್ಲಿ ಅಸಮಾಧಾನ ತಲೆದೋರಿದೆ.

ಪ್ರಭುಸ್ವಾಮಿ ನಟೇಕರ್‌

ಸುವರ್ಣ ವಿಧಾಣಸೌಧ: ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಸಮನ್ವಯದ ಕೊರತೆ ಬಹಿರಂಗಗೊಂಡ ಬೆನ್ನಲ್ಲೇ ಅದರ ಮಿತ್ರಪಕ್ಷ ಜೆಡಿಎಸ್‌ನಲ್ಲಿಯೂ ನಾಯಕತ್ವದ ವಿಚಾರದಲ್ಲಿ ಅಸಮಾಧಾನ ತಲೆದೋರಿದೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ನಡೆ ವಿರುದ್ಧ ಪಕ್ಷದ ಶಾಸಕರಲ್ಲಿ ಬೇಸರ ಕಂಡು ಬಂದಿದ್ದು, ಈ ಸಂಬಂಧ ದೆಹಲಿಯಲ್ಲಿರುವ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಶಾಸಕರು ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಶಾಸಕರಾದ ಸಮೃದ್ಧಿ ಮಂಜುನಾಥ್‌, ಹರೀಶ್‌ಗೌಡ, ಶರಣಗೌಡ ಕಂದಕೂರು ಸೇರಿ ಇತರೆ ಸದಸ್ಯರು ಪ್ರತ್ಯೇಕ ಸಭೆ ನಡೆಸಿ ಸುರೇಶ್‌ ಬಾಬು ಅವರ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಏನೇನು ದೂರು?:

ಶಾಸಕರ ಸಮಸ್ಯೆಗಳಿಗೆ ಸುರೇಶ್‌ ಬಾಬು ಕಿಂಚಿತ್‌ ಬೆಲೆ ನೀಡುವುದಿಲ್ಲ. ಶಾಸಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಶಾಸಕಾಂಗ ಪಕ್ಷದ ಸಭೆ ಕರೆದ ವೇಳೆ ಕೇವಲ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸುವುದು ಬಿಟ್ಟರೆ ಸೌಜನ್ಯಕ್ಕಾದರೂ ಕರೆ ಮಾಡಿ ಕರೆಯುವುದಿಲ್ಲ. ಅದರಲ್ಲೂ ಹೊಸ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನೇ ಮಾಡುವುದಿಲ್ಲ. ಪದೇ ಪದೆ ಇಂಥ ಘಟನೆಗಳು ಮರುಕಳುಹಿಸುವುದು ಸರಿನಾ? ಎಂಬ ದೂರುಗಳು ಕೇಳಿಬಂದಿವೆ.

ಕರೆ ಮಾಡಿ ದೂರು:

ಸುರೇಶ್‌ ಬಾಬು ನಡೆ ಬಗ್ಗೆ ಶಾಸಕರು ಕುಮಾರಸ್ವಾಮಿ ಅವರಿಗೆ ಖುದ್ದು ಕರೆ ಮಾಡಿ ದೂರು ನೀಡಿದ್ದಾರೆ. ಶಾಸಕಾಂಗ ಪಕ್ಷದ ನಾಯಕರು ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಇದನ್ನು ಸರಿಮಾಡದಿದ್ದರೆ ಮುಂದಿನ ದಿನದಲ್ಲಿ ಸಮಸ್ಯೆ ಎದುರಾದೀತು ಎಂದೂ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ದೂರು ಆಲಿಸಿದ ಕುಮಾರಸ್ವಾಮಿ, ದೆಹಲಿಯಲ್ಲಿ ಸಂಸತ್‌ ಕಲಾಪ ಮುಗಿದ ಕೂಡಲೇ ರಾಜ್ಯಕ್ಕೆ ಆಗಮಿಸಿ ಸಮಸ್ಯೆಗಳ ಕುರಿತು ಚರ್ಚಿಸಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಚರ್ಚೆ ನಡೆಸುವವರೆಗೆ ಸುಮ್ಮನಿದ್ದು ಬಿಡಿ, ಅನಗತ್ಯವಾಗಿ ಸಮಸ್ಯೆಯನ್ನು ದೊಡ್ಡದಾಗಿ ಮಾಡಿಕೊಳ್ಳಬೇಡಿ ಎಂಬ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸದನದಲ್ಲಿ ಶರಣಗೌಡ ಕಂದಕೂರು ಪ್ರಶ್ನೆಯನ್ನು ಅವರ ಪರವಾಗಿ ಪ್ರಶ್ನಿಸಿ ಸರ್ಕಾರದಿಂದ ಸಮರ್ಪಕವಾದ ಉತ್ತರ ಪಡೆಯುವಲ್ಲಿ ಸುರೇಶ್‌ ಬಾಬು ವಿಫಲವಾಗಿರುವುದು ಬೇಸರಕ್ಕೆ ಕಾರಣವಾಗಿದೆ. ಇದೇ ರೀತಿ ಇತರೆ ಶಾಸಕರ ಸಮಸ್ಯೆಗಳಿಗೂ ಸುರೇಶ್‌ ಬಾಬು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಲಾಗಿದೆ. ಜೆಡಿಎಸ್‌ ಹಿರಿಯ ನಾಯಕರಾದ ಜಿ.ಟಿ.ದೇವೇಗೌಡ ಮತ್ತು ಎಚ್‌.ಡಿ.ರೇವಣ್ಣ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೆನಿಸಿದರೂ ಅವರೇ ಸದನಕ್ಕೆ ಸರಿಯಾಗಿ ಬರುತ್ತಿಲ್ಲ. ಯಾರ ಬಳಿ ನಮ್ಮ ನೋವು ತೋಡಿಕೊಳ್ಳಬೇಕು ಎಂಬುದು ಶಾಸಕರ ಅಳಲು.

ಕಂದಕೂರು ಬಹಿರಂಗ ಬೇಸರ: ಕಂದಕೂರು ಅವರು ಯಾದಗಿರಿ ಜಿಲ್ಲೆಯಲ್ಲಿನ ಕೆಐಎಡಿಬಿಯಿಂದಾಗಿರುವ ಸಮಸ್ಯೆ ಕುರಿತು ತಮ್ಮ ಅನುಪಸ್ಥಿತಿಯಲ್ಲಿ ಸದನದಲ್ಲಿ ಪ್ರಸ್ತಾಪಿಸುವಂತೆ ಸುರೇಶ್‌ ಬಾಬು ಅವರಿಗೆ ತಿಳಿಸಿದ್ದರು. ಸುರೇಶ್ ಬಾಬು ಅವರು ಪ್ರಸ್ತಾಪಿಸಿದರಾದರೂ ಪ್ರಬಲವಾಗಿ ವಿಷಯ ಮಂಡಿಸಲಿಲ್ಲ. ಇದು ಕಂದಕೂರು ಅಸಮಾಧಾನಕ್ಕೆ ಕಾರಣವಾಯಿತು. ಈ ಬಗ್ಗೆ ಕಂದಕೂರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಶಾಸಕ ಬಾಲಕೃಷ್ಣ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರಾದರೂ ಅವರ ಮುಂದೆಯೂ ಬೇಸರ ತೋಡಿಕೊಂಡರು ಎಂದು ತಿಳಿದುಬಂದಿದೆ.

ಕಂದಕೂರು ಅವರಿಗೆ ಈ ವೇಳೆ ಸಮೃದ್ಧಿ ಮಂಜುನಾಥ್‌ ಬೆಂಬಲ ವ್ಯಕ್ತಪಡಿಸಿದರು. ಆಗ ಸಮಸ್ಯೆ ಕುರಿತು ಚರ್ಚೆ ನಡೆಸಿ ಬಗೆಹರಿಸಲಾಗುವುದು ಎಂದು ಬಾಲಕೃಷ್ಣ ಸಮಜಾಯಿಷಿ ನೀಡಿದರು. ಸತ್ತ ಮೇಲೆ ಬಗೆಹರಿಸಲಾಗುತ್ತದೆಯೇ ಎಂದು ಈ ಸಂದರ್ಭದಲ್ಲಿ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಬಾಬು ವಿರುದ್ಧ ಏನು ದೂರು?

ಶಾಸಕರ ಸಮಸ್ಯೆಗಳಿಗೆ ಕಿಂಚಿತ್ತೂ ಬೆಲೆ ನೀಡುವುದಿಲ್ಲ

ಶಾಸಕಾಂಗ ಪಕ್ಷದ ಸಭೆ ಬಗ್ಗೆ ವಾಟ್ಸಪ್‌ನಲ್ಲಿ ಮಾಹಿತಿ

ಸೌಜನ್ಯಕ್ಕಾದರೂ ಕರೆ ಮಾಡಿ ಶಾಸಕರ ಕರೆಯುತ್ತಿಲ್ಲ

ಹೊಸ ಶಾಸಕರನ್ನು ವಿಶ್ವಾಸಕ್ಕೆಪಡೆಯುವ ಯತ್ನವಿಲ್ಲ