ತಿರುವನಂತಪುರಂ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಇಲ್ಲಿ ಬಿಡುಗಡೆ ಮಾಡಿದೆ. ದಿನಸಿ, ಔಷಧ ಖರೀದಿಗೆ ಮಾಸಿಕ 2500 ರು.ಗಳ ನೆರವು ನೀಡಲು ಕೂಪನ್‌, ಪ್ರತಿ ಮನೆಗೆ ಮಾಸಿಕ 20000 ಲೀಟರ್‌ ಉಚಿತ ನೀರು ಹಾಗೂ ಅರ್ಹ ಬಡ ಮಹಿಳೆ, ವಿಧವೆ, 70 ವರ್ಷ ಮೇಲ್ಪಟ್ಟವರಿಗೆ ₹3000 ಪಿಂಚಣಿ- ಈ ಮಾದರಿಯ ಹಲವು ಉಚಿತ ಗ್ಯಾರಂಟಿಗಳ ಭರವಸೆಗಳನ್ನು ಪ್ರಕಟಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್‌ ನವೀನ್, ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ಹಾಗೂ ಪಕ್ಷದ ಹಿರಿಯ ನಾಯಕರ ಸಮಕ್ಷಮದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.

ರಾಜ್ಯದಲ್ಲಿ 140 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ಏ.9ಕ್ಕೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.


ಪ್ರಮುಖ ಅಂಶಗಳು:

ಅರ್ಹ ಕುಟುಂಬಳಿಗೆ ವಾರ್ಷಿಕ ಎರಡು ಉಚಿತ ಎಲ್‌ಪಿಜಿ, ಕುಟುಂಬಗಳಿಗೆ ದಿನಸಿ ಮತ್ತು ಔಷಧ ಖರೀದಿಗೆ ಮಾಸಿಕ 2500 ರು. ಮೊತ್ತದ ರೀಚಾರ್ಜ್‌ ಕಾರ್ಡ್‌, ರಾಜ್ಯದಲ್ಲಿ ಏಮ್ಸ್‌ ಸ್ಥಾಪನೆ, ಬಡ ಮಹಿಳೆಯರು, ವಿಧವೆಯರು, 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 3000 ರು.ಗಳ ಪಿಂಚಣಿ, ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳ ಜಾರಿಯ ಬಗ್ಗೆ ಪಕ್ಷ ಭರವಸೆ ನೀಡಿದೆ.

ಕೇರಳ ಬಿಜೆಪಿ ಪ್ರಣಾಳಿಕೆಯಲ್ಲೇನಿದೆ?

- ಜನರಿಗೆ ದಿನಸಿ, ಔಷಧ ಖರೀದಿಗೆ ಮಾಸಿಕ 2500 ರು. ಕೂಪನ್‌ ನೆರವು

- ಓಣಂ, ಕ್ರಿಸ್‌ಮಸ್‌ ಹಬ್ಬದ ವೇಳೆ ಎಲ್ಲರಿಗೂ 2 ಉಚಿತ ಗ್ಯಾಸ್ ಸಿಲಿಂಡರ್‌

- ಪ್ರತಿ ಮನೆಗೆ ಮಾಸಿಕ 20 ಸಾವಿರ ಲೀಟರ್‌ ಉಚಿತ ನೀರು ಪೂರೈಕೆ

- ಬಡ ಮಹಿಳೆ, ವಿಧವೆ, 70 ವರ್ಷ ಮೇಲ್ಪಟ್ಟವರಿಗೆ ₹3000 ಪಿಂಚಣಿ

- ತಿರುವನಂತಪುರಂ- ಕಣ್ಣೂರು ಸಂಪರ್ಕಿಸುವ ಹೈಸ್ಪೀಡ್‌ ರೈಲು ಆರಂಭ

- ಕೇರಳ ನಾಗರಿಕರ ಅನುಕೂಲಕ್ಕೆ ಅತ್ಯಾಧುನಿಕ ಏಮ್ಸ್‌ ಆಸ್ಪತ್ರೆ ಸ್ಥಾಪನೆ

- ಶಬರಿಮಲೆ, ಗುರುವಾಯೂರು ಸೇರಿ ಎಲ್ಲಾ ದೇಗುಲಗಳ ಅಭಿವೃದ್ಧಿ

- ರಾಜ್ಯದ ದೇಗುಲ ಮಂಡಳಿಗಳಲ್ಲಿ ಇನ್ನು ಮುಂದೆ ಭಕ್ತರಿಗೂ ಅವಕಾಶ

- ಶಬರಿಮಲೆ ಚಿನ್ನ ಕಳ್ಳತನ ಬಗ್ಗೆ ಕಾಲಮಿತಿಯಲ್ಲಿ ತನಿಖೆ ಪೂರ್ಣ