ಸಾರಾಂಶ
ಚಿಕ್ಕಬಳ್ಳಾಪುರ : ಕರ್ನಾಟಕ ಹಾಲು ಮಹಾಮಂಡಳವು ಬುಧವಾರದಿಂದ ನಂದಿನಿ ಹಾಲಿನ ದರ ಏರಿಕೆಯನ್ನು ಮಾಡಿದ್ದು, ಸಾರ್ವಜನಿಕರಿಂದ ಮತ್ತು ರಾಜಕಾರಣಿಗಳಿಂದ ವಿರೋಧ ವ್ಯೆಕ್ತವಾಗಿದೆ. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಎಳೆದಿದ್ದ ಕರ್ನಾಟಕ ಸರ್ಕಾರ, ಈಗ ಹಾಲಿನ ದರ ಏರಿಕೆ ಮಾಡಿ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.
ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಳವಾಗಿದೆ. ಬೆಲೆ ಹೊಂದಾಣಿಕೆಯ ಜೊತೆಗೆ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಒದಗಿಸಲು ನಂದಿನಿ ಹಾಲಿನ ಪ್ರತಿ ಪ್ಯಾಕೆಟ್ ಈಗ 50 ಮಿಲಿ ಹೆಚ್ಚು ಹಾಲನ್ನು ಹೊಂದಿರುತ್ತದೆ. ಆದ್ದರಿಂದ ಇದು ದರ ಹೆಚ್ಚಳ ಅಲ್ಲ ಎಂಬುದು ಸರ್ಕಾರದ ವಾದ.
ಗ್ಯಾರಂಟಿ ಸ್ಕೀಂಗೆ ಸೇರಿಸಲಿ
ಸರ್ಕಾರ ನಂದಿನಿ ಹಾಲಿನ ದರ ಹೆಚ್ಚಿಸುವ ಬದಲು ಗ್ಯಾರಂಟಿ ಸ್ಕೀಂಗಳಲ್ಲಿ ಉಚಿತ ನೀಡಿದಂತೆ ಹೈನುಗಾರರಿಂದ ಪ್ರತಿ ಲೀಟರ್ ಗೆ 60 ರುಪಾಯಿಗೆ ನೀಡಿ ಖರೀದಿಸಿ ಪ್ರತಿ ಕುಟುಂಬಕ್ಕೆ ತಲಾ ಅರ್ಧಲೀಟರ್ ಹಾಲು ಉಚಿತವಾಗಿ ನೀಡಿದ್ದರೆ ಅತ್ತ ಹೈನುದಾರರು ಇತ್ತ ಜನತೆ ಸಂತೋಷದಿಂದ ಜೀವನ ಮಾಡುತ್ತಿದ್ದರು, ಈಗ ಮಾಡಿರುವ ಬೆಲೆ ಏರಿಕೆಯಿಂದ ಹೈನುದಾರರಿಗೆ ಸಹಾಯವಾಗುವುದಿಲ್ಲ. ಗ್ರಾಹಕರಿಗೆ ಬರೆ ಹಾಕಿದಂತಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಅನು ಆನಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಫಿ-ಟೀ ದರ ಹೆಚ್ಚಿಸುವುದ ಕಷ್ಟ
ಕಳೆದ ವರ್ಷ ಸರ್ಕಾರ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಿಸಿತ್ತು. ಈಗ ಎರಡು ರೂ ಹೆಚ್ಚಿಸಿದೆ. ಕಾಫೀ-ಟೀ ಮಾರುವ ನಾವು ಈ ಹಿಂದೆ ಬೆಲೆ ಹೆಚ್ಚಾದಾಗ ಕಾಫೀ-ಟೀ ಬೆಲೆ ಏರಿಕೆ ಮಾಡಲಿಲ್ಲಾ, ಕಾಫೀ ಪುಡಿ ಕೆಜಿಗೆ 350 ರಿಂದ 500ರೂ,ಟೀ ಪುಡಿ ಕೆಜಿಗೆ 500 ರಿಂದ 800 ರೂಗಳಿಗೆ ಏರಿಕೆಯಾಗಿದೆ. ಈಗ ಹಾಲು ಸಹಾ ಏರಿಕೆಯಾಗಿದೆ. ಕಾಫಿ-ಟಾ ದರ ಹೆಚ್ಚಿಸಿದರೆ ಗಿರಾಕಿಗಳು ಬರೋದಿಲ್ಲ. ನಾವು ವ್ಯಾಪಾರ ಮಾಡವುದಾದರೂ ಹೇಗೆ ಎಂದು ರಸ್ತೆ ಬದಿ ತಳ್ಳುಗಾಡಿಯ ಕಾಫೀ-ಟೀ ವ್ಯಾಪಾರಿ ಕಾರ್ತೀಕ್.