ಸಾರಾಂಶ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೆಂಗಳೂರಿಗೆ ಸಂಬಂಧಿಸಿದ ಮೂರು ಮತ ಎಣಿಕೆ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೆಂಗಳೂರಿಗೆ ಸಂಬಂಧಿಸಿದ ಮೂರು ಮತ ಎಣಿಕೆ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮತ ಎಣಿಕೆ ಕೇಂದ್ರಗಳ ಬಳಿ ಯಾವೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ನೀಡುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮತ ಎಣಿಕೆ ಕೇಂದ್ರಗಳು ಯಾವ ರೀತಿ ಇರಬೇಕು, ಬ್ಯಾರಿಕೇಡ್ ಯಾವ ರೀತಿ ಅಳವಡಿಸಬೇಕು, ಆರ್.ಒ. ಕಚೇರಿ, ಮಾಧ್ಯಮ ಕೇಂದ್ರ ಸ್ಥಾಪನೆ, ಅಧಿಕಾರಿಗಳು ಹಾಗೂ ನಾಗರಿಕರು ಬಂದು ಹೋಗುವ ವ್ಯವಸ್ಥೆ, ಮೂರು ಹಂತದ ಭದ್ರತೆ, ಸ್ಟ್ರಾಂಗ್ ರೂಂ, ಮತ ಎಣಿಕೆ ಕೊಠಡಿಗಳಲ್ಲಿ ಟೇಬಲ್ಗಳ ಅಳವಡಿಕೆ, ಸಿಸಿಟಿವಿ ಅಳವಡಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳು ಸರಿಯಾದ ಕ್ರಮದಲ್ಲಿರಬೇಕೆಂದು ಸೂಚನೆ ನೀಡಿದರು.ಈ ಬಾರಿಯ ಲೋಕಸಭಾ ಚುನಾವಣೆಯು ಯಾವುದೇ ಗೊಂದಲಗಳಿಗೆ ಆಸ್ಪದ ನೀಡಲು ಅವಕಾಶ ನೀಡಬಾರದು. ಯಾವುದೇ ತೊಂದರೆಗಳಿಲ್ಲದೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ। ಕೆ.ಹರೀಶ್ ಕುಮಾರ್, ಡಾ। ದಯಾನಂದ್, ವಿನೋತ್ ಪ್ರಿಯಾ, ಚುನಾವಣಾ ವಿಭಾಗದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.ಎಣಿಕೆ ಕೇಂದ್ರಗಳು:ಬೆಂಗಳೂರು ಕೇಂದ್ರ - ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ. ಬೆಂಗಳೂರು ಉತ್ತರ - ಸೇಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ. ಬೆಂಗಳೂರು ದಕ್ಷಿಣ - ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ.