ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ವಿರುದ್ಧ ಪಟ್ಟಣದ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಬಿಜೆಪಿ ನಗರ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೋದಿ ಅವರು ಲೋಕಸಭೆ ಹಾಗೂ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಜಾರಿಗೆ ತರಬೇಕೆಂಬ ಮಸೂದೆಯನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ಇದು ದೇಶದ ಮಹಿಳೆಯರಿಗೆ ಕಾಂಗ್ರೆಸ್ ಮಾಡಿದ ಅಪಮಾನವಾಗಿದೆ ಎಂದು ಬಿಜೆಪಿ ನಗರ ಟೌನ್ ಅಧ್ಯಕ್ಷ ವೆಂಕಟೇಶ್ ಪ್ರಭು ಆರೋಪಿಸಿದರು.

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವುದು ನಿಜವಾದ ಮಹಿಳಾ ಸಬಲೀಕರಣವಾಗಿದೆ. ಕಾಂಗ್ರೆಸ್‌ನವರು ಮಹಿಳೆಯರನ್ನು ಕೇವಲ ವೋಟ್ ಬ್ಯಾಂಕ್ ಎಂದು ಭಾವಿಸಿದ್ದಾರೆ. ಇನ್ನಾದರೂ ಮಹಿಳೆಯರು ಜಾಗೃತರಾಗಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ತಕ್ಕ ಪಾಠ ಕಲಿಸಬೇಕು ಎಂದು ಮಹಿಳಾ ಮೋರ್ಚಾ ನಾಗವೇಣಿ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಬಗ್ಗೆ ಇರುವ ಭಾವನೆಯನ್ನು ತೋರಿಸುತ್ತದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡದ ಸಮೇತ ಕಿತ್ತೆಸೆಯಲು ಮಹಿಳೆಯರು ಪಣ ತೊಡಬೇಕು ಎಂದು ಬಿಜೆಪಿ ಮುಖಂಡ ರಾಮು ಭಗವನ್ ತಿಳಿಸಿದರು.


ಮಹಿಳಾ ಮೋರ್ಚಾದ ಯಶೋಧ, ನಯನಾ, ತಾಯಮ್ಮ, ಭಾಗ್ಯಮ್ಮ, ಪ್ರೇಮಾ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅನಿಲ್, ರಾಮಕೃಷ್ಣ ಹೆಗಡೆ, ಕನಕರಾಜು, ಬುಲೆಟ್ ರಾಮಚಂದ್ರಪ್ಪ, ಆಟೋ ಮೊಬೈಲ್ ನಾರಾಯಣಸ್ವಾಮಿ, ಶಾಮಣ್ಣ, ಶಿವು, ವರದರಾಜು, ಸುಪ್ರೀತ್, ಪವನ್, ಮುನೇಶ್, ಪುರ ಚಂದ್ರಪ್ಪ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.