ಕರ್ನಾಟಕ ಚುನಾವಣೆ ಅಕ್ರಮಕ್ಕೆ 100% ಸಾಕ್ಷ್ಯ ಇದೆ: ರಾಹುಲ್‌ ಬಾಂಬ್‌

| N/A | Published : Jul 25 2025, 12:31 AM IST / Updated: Jul 25 2025, 05:38 AM IST

Lok Sabha LoP Rahul Gandhi (Photo: ANI)
ಕರ್ನಾಟಕ ಚುನಾವಣೆ ಅಕ್ರಮಕ್ಕೆ 100% ಸಾಕ್ಷ್ಯ ಇದೆ: ರಾಹುಲ್‌ ಬಾಂಬ್‌
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣ ಇದೀಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಚುನಾವಣಾ ಆಯೋಗದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ.

ನವದೆಹಲಿ: ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣ ಇದೀಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಚುನಾವಣಾ ಆಯೋಗದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ. ಕರ್ನಾಟಕದಲ್ಲಿನ ಚುನಾವಣಾ ಅಕ್ರಮಕ್ಕೆ ಆಯೋಗವೇ ನೆರವಾಗಿರುವ ಬಗ್ಗೆ ನಮ್ಮಲ್ಲಿ ಶೇ.100ರಷ್ಟು ಖಚಿತ ಸಾಕ್ಷ್ಯವಿದೆ ಎಂದು ರಾಹುಲ್‌ ಆರೋಪಿಸಿದ್ದರೆ, ಅದಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ‘ಮುಖ್ಯ ಚುನಾವಣಾ ಆಯುಕ್ತರ ವಿರುದ್ಧವೇ ಆಧಾರರಹಿತ ಮತ್ತು ಬೆದರಿಕೆ ರೀತಿಯ ಆರೋಪ ಮಾಡಲಾಗುತ್ತಿದೆ ಮತ್ತು ಅದೂ ಈ ಹೊತ್ತಿನಲ್ಲಿ’ ಎಂದು ಕಿಡಿಕಾರಿದೆ.

ಕರ್ನಾಟಕ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಬುಧವಾರ ಆರೋಪಿಸಿದ್ದ ರಾಹುಲ್‌ ಗಾಂಧಿ, ಗುರುವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂಥದ್ದೊಂದು ಅಕ್ರಮಕ್ಕೆ ಸ್ವತಃ ಚುನಾವಣಾ ಆಯೋಗವೇ ಆವಕಾಶ ಮಾಡಿಕೊಟ್ಟಿದೆ. ಈ ಬಗ್ಗೆ ತಮ್ಮ ಬಳಿ 100% ದಾಖಲೆಯಿದೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಜೊತೆಗೆ ‘ಚುನಾವಣಾ ಆಯೋಗ ಭಾರತದ ಚುನಾವಣಾ ಆಯೋಗವಾಗಿ ಕೆಲಸ ಮಾಡುತ್ತಿಲ್ಲ. ಅದು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ.’ ಎಂದು ಆರೋಪಿಸಿದ್ದಾರೆ.

‘ಆಯೋಗವು ಕರ್ನಾಟಕದ ಕ್ಷೇತ್ರವೊಂದರಲ್ಲಿ ಮತವಂಚನೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ನಮ್ಮ ಪಕ್ಷದ ಬಳಿ ಶೇ.100 ಸಾಕ್ಷ್ಯಾಧಾರಗಳಿವೆ. ನಾವು ಕೇವಲ ಒಂದು ಕ್ಷೇತ್ರದಲ್ಲಿ ಅಕ್ರಮ ಪತ್ತೆ ಹಚ್ಚಿದ್ದೇವೆ. ಆದರೆ ಇದು ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದೆ ಎಂಬುದು ನನಗೆ ಖಚಿತವಾಗಿದೆ. ಒಂದೇ ಕ್ಷೇತ್ರದಲ್ಲಿ ಸಾವಿರ ಸಾವಿರ ಹೊಸ ಮತದಾರರು, ಅವರಿಗೆಲ್ಲಾ ಎಷ್ಟು ವಯಸ್ಸು 45, 50, 60, 65. ಇದು ಒಂದು ವಿಷಯ. ಇದರ ಹೊರತಾಗಿ ಮತದಾರರ ಹೆಸರು ರದ್ದು, ಮತದಾರರ ಸೇರ್ಪಡೆ, 18 ವರ್ಷ ಮೇಲ್ಪಟ್ಟ ಹೊಸ ಮತದಾರರ ಸೇರ್ಪಡೆ.... ಹೀಗೆ ಹಲವು ವಿಷಯಗಳಿವೆ. ನಾವು ಇದೀಗ ಅವರನ್ನು ಹಿಡಿದಿದ್ದೇವೆ. ಹೀಗಾಗಿ ನಾನು ಚುನಾವಣಾ ಆಯೋಗಕ್ಕೆ ಒಂದು ಸಂದೇಶ ಕಳುಹಿಸಲು ಬಯಸುತ್ತೇನೆ. ಇಷ್ಟೆಲ್ಲಾ ಆದ ಬಳಿಕವೂ ನಾವು ಇದರಿಂದ ಪಾರಾಗಬಹುದು ಎಂದು ಚುನಾವಣಾ ಆಯೋಗ ಅಂದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ನಾವು ಸಾಕ್ಷ್ಯಗಳ ಸಮೇತ ನಿಮ್ಮ ಮುಂದೆ ಬರಲಿದ್ದೇವೆ’ ಎಂದಿದ್ದಾರೆ.

ಆಯೋಗ ತಿರುಗೇಟು:

ಇದಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ‘ಜನಪ್ರತಿನಿಧಿ ಕಾಯ್ದೆ 80ರ ಅನ್ವಯ ಚುನಾವಣಾ ದೂರು ಸಲ್ಲಿಸುವ ಬದಲು ಮತ್ತು ಒಂದು ವೇಳೆ ಅಂಥ ದೂರು ಸಲ್ಲಿಸಿದ್ದರೆ ಅದರ ತೀರ್ಪಿಗೆ ಕಾಯುವ ಬದಲು ಇಂಥ ಆಧಾರ ರಹಿತ ಆರೋಪ ಮಾಡುತ್ತಿರುವುದು ದುರದೃಷ್ಟಕರ. ಅಷ್ಟು ಮಾತ್ರವಲ್ಲ, ಸಾಂವಿಧಾನಕ ಸಂಸ್ಥೆಯನ್ನು ಬೆದರಿಸಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಜೊತೆಗೆ, ‘2024ರ ಕರ್ನಾಟಕ ಲೋಕಸಭಾ ಚುನಾವಣೆಯ ಮತಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಜಿಲ್ಲಾ ನ್ಯಾಯಾಲಯಗಳಲ್ಲಿ ಅಥವಾ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಬಳಿ ಒಂದೇ ಒಂದು ದೂರು ಕೂಡ ಸಲ್ಲಿಕೆಯಾಗಿಲ್ಲ. ಇದು ತಾನು ಮಾಡುತ್ತಿರುವ ಆರೋಪಗಳಿಗೆ ಜನಪ್ರತಿನಿಧಿ ಕಾಯ್ದೆ 24ರ ಅಡಿ ಕಾಂಗ್ರೆಸ್‌ಗೆ ಸೂಕ್ತವಾದ ಕಾನೂನು ಪರಿಹಾರವಿತ್ತು. ಇನ್ನು 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ 10 ದೂರುಗಳು ಸಲ್ಲಿಕೆಯಾಗಿವೆ. ಆದರೆ ಈ ಪೈಕಿ ಒಂದೇ ಒಂದು ದೂರು ಕೂಡ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳಿಂದ ದಾಖಲಾಗಿಲ್ಲ’ ಎಂದು ಅಂಕಿ ಅಂಶ ಸಮೇತ ಕಾಂಗ್ರೆಸ್‌ ನಾಯಕಗೆ ಚುನಾವಣಾ ಆಯೋಗ ತಿರುಗೇಟು ನೀಡಿದೆ.

Read more Articles on