ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಕಾಂಗ್ರೆಸ್: ಮಾಜಿ ಶಾಸಕ ಕೆ.ಅನ್ನದಾನಿ

| Published : Apr 04 2024, 01:04 AM IST / Updated: Apr 04 2024, 05:11 AM IST

Congress flag
ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಕಾಂಗ್ರೆಸ್: ಮಾಜಿ ಶಾಸಕ ಕೆ.ಅನ್ನದಾನಿ
Share this Article
  • FB
  • TW
  • Linkdin
  • Email

ಸಾರಾಂಶ

 ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 98 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಎಂದರೆ ಕಾಂಗ್ರೆಸ್ ಎಂದು ಮಾಜಿ ಶಾಸಕ ಹಾಗೂ ಜಾ.ದಳ ರಾಜ್ಯ ಪ.ಜಾತಿ ವರ್ಗದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಆರೋಪಿಸಿದರು.

  ಮಂಡ್ಯ :  ಕಾಂಗ್ರೆಸ್ ನಾಯಕರು ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಹೊರತು ಇದುವರೆಗೂ ನ್ಯಾಯ ದೊರಕಿಸಿಕೊಟ್ಟಿಲ್ಲ. ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಎಂದರೆ ಕಾಂಗ್ರೆಸ್ ಎಂದು ಮಾಜಿ ಶಾಸಕ ಹಾಗೂ ಜಾ.ದಳ ರಾಜ್ಯ ಪ.ಜಾತಿ ವರ್ಗದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 98 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಅಧಿಕಾರ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಸಂವಿಧಾನ ಬರೆದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಎರಡು ಬಾರಿ ಸೋಲಿಸಿದರು. ಅವರು ಕಾನೂನು ಮಂತ್ರಿಯಾಗಿದ್ದ ವೇಳೆ ಕೊಡಬಾರದ ಹಿಂಸೆ ಕೊಟ್ಟು ಅವರೇ ರಾಜೀನಾಮೆ ನೀಡುವಂತೆ ಮಾಡಿದರು ಎಂದು ದೂರಿದರು.

ಅಂಬೇಡ್ಕರ್ ಮರಣವಾದಾಗ ಅವರ ಮೃತದೇಹವನ್ನು ಹೂಳಲು ಒಂದಿಂಚು ಜಾಗ ನೀಡಲಿಲ್ಲ. ಅವರ ಮೃತದೇಹವನ್ನು ಮುಂಬೈಗೆ ತೆಗೆದುಕೊಂಡು ಹೋಗಲು ಸಹ ವಿಮಾನದ ವೆಚ್ಚ ಭರಿಸಲಿಲ್ಲ. ಅವರ ಹೆಸರೇಳಿಕೊಂಡು ದಲಿತರ ಮತ ಕೇಳುತ್ತಿದ್ದೀರಲ್ಲಾ, ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಡಾ.ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಮಂತ್ರಿ ಹುದ್ದೆ ತಪ್ಪಿಸಿದ್ದು ಇದೇ ಕಾಂಗ್ರೆಸ್‌ನವರು. ಇದಕ್ಕೆ ಕಾಂಗ್ರೆಸ್‌ನ ಮಹಾನಾಯಕರು ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ದಲಿತರ ಮತ ಕೇಳಬಾರದು ಎಂದು ಹೇಳಿದರು.

ಕಾಂಗ್ರೆಸ್ ನವರ ಪಿತೂರಿ:

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ತಿದ್ದಲು ಯಾವುದೇ ಪಕ್ಷದವರಿಗೆ ತಾಕತ್ತಿಲ್ಲ. ಒಂದುವೇಳೆ ತಿದ್ದಲು ಪ್ರಯತ್ನಿಸಿದರೆ ರಕ್ತಪಾತವೇ ಹರಿಯುತ್ತದೆ. ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಇದೆಲ್ಲ ಕಾಂಗ್ರೆಸ್‌ನವರ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಿದರು. ಆದರೆ, 60 ವರ್ಷ ಈ ದೇಶವನ್ನಾಳೀದ ಕಾಂಗ್ರೆಸ್‌ನವರು ಏಕೆ ಅಭಿವೃದ್ಧಿ ಮಾಡಲಿಲ್ಲ? ನಿಮಗೆ ಯೋಗ್ಯತೆ ಇರಲಿಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಖರ್ಗೆ, ಪರಮೇಶ್ವರ್‌ಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು:

ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಮುಖ್ಯಮಂತ್ರಿಯಾಗಬೇಕಿದ್ದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ಡಾ. ಜಿ.ಪರಮೇಶ್ವರ್ ಅವರನ್ನು ಸೋಲಿಸಿ, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಯಾರು.? 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡದವರು ಯಾರು? ಇದರಲ್ಲಿ ಮಳವಳ್ಳಿ ಕ್ಷೇತ್ರದ ನಾಯಕನ ಪಾತ್ರವೂ ಇದೆ ಎಂದು ಶಾಸಕ ನರೇಂದ್ರಸ್ವಾಮಿ ವಿರುದ್ಧ ಹರಿಹಾಯ್ದರು.

ಅಂದು ಶಾಸಕ ಸ್ಥಾನದಿಂದ ಅನರ್ಹವಾಗಿದ್ದ ನಿನಗೆ ದಂಡ ಕಟ್ಟಲು ಹಣವಿಲ್ಲದಿದ್ದಾಗ ಎಚ್.ಡಿ. ಕುಮಾರಸ್ವಾಮಿ ಅವರೇ ಹಣ ಕಟ್ಟಿ, ನಿನ್ನನ್ನು ಶಾಸಕ ಸ್ಥಾನದಿಂದ ಉಳಿಸಿ ರಾಜಕಾರಣದಲ್ಲಿ ಮುಂದುವರಿಯುವಂತೆ ಮಾಡಿದರು. ಇಂದು ಅವರನ್ನೇ ಪ್ರಶ್ನೆ ಮಾಡ್ತಿಯಾ? ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು.

ದಲಿತ ನಾಯಕ ಮುಖ್ಯಮಂತ್ರಿ ಆಗಲು ದನಿಗೂಡಿಸುತ್ತಿಲ್ಲ. ಅಧಿಕಾರ ಶಾಶ್ವತವಲ್ಲ, ನಿನಗೂ ಮೊದಲೇ ಶಾಸಕನಾಗಿ ಅಭಿವೃದ್ಧಿ ಮಾಡಿದ್ದೇನೆ. ಇದನ್ನು ಅರಿತು ಸ್ವಲ್ಪ ತಗ್ಗಿ-ಬಗ್ಗಿ ನಡೆಯಪ್ಪಾ ಎಂದು ನರೇಂದ್ರಸ್ವಾಮಿ ಅವರನ್ನು ಛೇಡಿಸಿದರು.

ಕಾವೇರಿ ಸಮಸ್ಯೆ ಬಗೆಹರಿಸಲು ಎಚ್‌ಡಿಕೆ ಬೆಂಬಲಿಸಿ:

ಬಹು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ನೀರಿನ ಹಂಚಿಕೆಯನ್ನು ಪರಿಹರಿಸಲು ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಲೇಬೇಕು. ಅದಕ್ಕಾಗಿ ದಲಿತ ಜನಾಂಗದವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇಂದು ನಾಮಪತ್ರ:

ಮಂಡ್ಯ ಲೋಕಸಭಾ ಕ್ಷೇತ್ರದ ಜಾ.ದಳ-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಮಾ.4ರ ಗುರುವಾರ ಬೆಳಗ್ಗೆ ನಾಮಪತ್ರ ಸಲ್ಲಿಸುತ್ತಿದ್ದು, ಪ.ಜಾತಿ/ಪಂಗಡದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜಾ.ದಳ ಪ.ಜಾತಿ ವರ್ಗದ ಅಧ್ಯಕ್ಷ ಸಾತನೂರು ಜಯರಾಮು, ಬಿಜೆಪಿ ಪ.ಜಾತಿ ವರ್ಗದ ಅಧ್ಯಕ್ಷ ನಿತ್ಯಾನಂದ, ಮುಖಂಡರಾದ ವೈರಮುಡಿ, ಪಾಪಯ್ಯ, ನರಸಿಂಹ, ಬೊಮ್ಮರಾಜು, ಕಾಂತರಾಜು, ಭದ್ರಾಚಲಮೂರ್ತಿ, ಶಂಕರ್ ಹಾಜರಿದ್ದರು.