ಸಾರಾಂಶ
ಬಂಗಾರಪೇಟೆ : ಚುನಾವಣೆಗಳು ಮುಗಿದಿದೆ ರಾಜಕೀಯ ಬಿಟ್ಟು ಕ್ಷೇತ್ರ ಅಭಿವೃದ್ದಿಗೆ ನಾವಿಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಸಾಗಿದರೆ ಮಾತ್ರ ಜನ ನಮಗೆ ನೀಡಿದ ಮತಕ್ಕೆ ನ್ಯಾಯಕೊಡಿಸಲು ಸಾಧ್ಯವಾಗಲಿದೆ ಎಂದು ಸಂಸದ ಎಂ.ಮಲ್ಲೇಶಬಾಬು ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಸಲಹೆ ನೀಡಿದರು.ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ 2 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ
ಚುನಾವಣೆಗಳಲ್ಲಿ ಗೆಲ್ಲುವ ತನಕ ಮಾತ್ರ ರಾಜಕೀಯ ಮಾಡಬೇಕು ಬಳಿಕ ರಾಜಕೀಯವನ್ನು ಬದಿಗೊತ್ತಿ ಕ್ಷೇತ್ರ ಅಭಿವೃದ್ದಿ ಕಡೆ ಗಮನಹರಿಸಬೇಕು, ೫ವರ್ಷ ಪೂರ್ತಿ ಬರೀ ರಾಜಕೀಯದಲ್ಲೆ ತೊಡಗಿದರೆ ನಮಗೆ ಮತ ನೀಡಿದವರಿಗೆ ನ್ಯಾಯಕೊಡಿಸಲು ಹೇಗೆ ಸಾಧ್ಯ ಎಂದು ವೇದಿಕೆಯಲ್ಲಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಡೆ ಮುಖ ಮಾಡಿ ಪ್ರಶ್ನಿಸಿದರು. ಅಭಿವೃದ್ದಿ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡಲಾರೆ,ಇದೇ ದಿಕ್ಕಿನಲ್ಲಿ ಶಾಸಕರೂ ಸಹ ನನಗೆ ಸಾಥ್ ನೀಡುವರು ಎಂಬ ವಿಶ್ವಾಸವಿದೆ ಎಂದರು.ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರು ಬೂದಿಕೋಟೆ ರಸ್ತೆ ಹಾಳಾಗಿದ್ದು ನೂತನ ಸಂಸದರಿಗೆ ಮತ ಹಾಕಿ ಗೆಲ್ಲಿಸಿದ್ದೀರಿ ಅವರೇ ರಸ್ತೆಯನ್ನು ಅಭಿವೃದ್ದಿ ಮಾಡಲಿ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ ಬೂದಿಕೋಟೆ ರಸ್ತೆ ರಾಜ್ಯ ಹೆದ್ದಾರಿಗೆ ಸೇರುತ್ತದೆ, ಅದನ್ನು ಶಾಸಕರೇ ಅಭಿವೃದ್ದಿಪಡಿಸಬೇಕೆ ವಿನಃ ಅದು ಕೇಂದ್ರ ಹೆದ್ದಾರಿಗೆ ಬರುವುದಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ರಸ್ತೆಗಳನ್ನು ನಾನು ಮಾಡಿಸುತ್ತೇನೆ ಎಂದು ತೀಕ್ಷಣವಾಗಿ ತಿರುಗೇಟು ನೀಡಿದರು.
ಪರಸ್ಪರ ಹೊಂದಾಣಿಕೆ ಅಗತ್ಯ
ಯಾರೂ ಇಲ್ಲಿ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಅಧಿಕಾರ ಸಿಕ್ಕಾಗ ಜನರಿಗೆ ಅನುಕೂಲವಾಗುವ ಕೆಲಸ ಮಾಡಿ ಅವರ ಹೃದಯದಲ್ಲಿ ಶಾಶ್ವತವಾಗಿ ಇರಬೇಕು,ಅದು ಬಿಟ್ಟು ಅವರು ಮತ ಹಾಕಿಲ್ಲ ಇವರು ಹಾಕಿಲ್ಲವೆಂದು ದ್ವೇಷ ರಾಜಕಾರಣ ಮಾಡುತ್ತಾ ಗ್ರಾಮಗಳಲ್ಲಿ ಜಗಳ ಉಂಟು ಮಾಡುವುದು ಬೇಡ ದೇಶ ಪ್ರಗತಿಯತ್ತ ಸಾಗಲು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕಾಗಿದೆ ಎಂದು ಹೇಳಿದರು.ವಿದ್ಯಾರ್ಥಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಿದೆ. ಅದರ ಫಲವೇ ಈ ಹಾಸ್ಟೆಲ್. ವಿಪಕ್ಷಗಳು ಗ್ಯಾರಂಟಿ ಯೋಜನೆಗಳಿಗಾಗಿ ಎಸ್ಸಿ ಎಸ್ಟಿ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ ಎಂದರು,
ಜನತೆಯ ಕಲ್ಯಾಣಕ್ಕೆ ಶ್ರಮಿಸುವೆ
ಸಂಸದರು ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಅಭಿವೃದ್ದಿಗೆ ತರಲಿ, ಅಭಿವೃದ್ದಿಯಲ್ಲಿ ರಾಜಕೀಯ ಮಾಡದೆ ಸಾಗುವೆ ಜನರು ಇಬ್ಬರಿಗೂ ಮತ ನೀಡಿರುವುದು ಜನರ ಕಲ್ಯಾಣಕ್ಕಾಗಿ ಈ ದೃಷ್ಟಿಯಿಂದ ಶ್ರಮಿಸುವೆ ಎಂದರು.ಈ ವೇಳೆ ತಹಸೀಲ್ದಾರ್ ರಶ್ಮಿ,ಇಒ ರವಿಕುಮಾರ್,ಸಮಾಜ ಕಲ್ಯಾಣಾಧಿಕಾರಿ ಅಂಜಲಿದೇವಿ,ಗ್ರಾಪಂಃಅಧ್ಯಕ್ಷ ಮಂಜುನಾಥ್,ಮುಖಂಡರಾದ ಎ.ಬಾಬು,ಹನುಮಂತು,ಹೆಚ್.ಕೆ.ನಾರಾಯಣಸ್ವಾಮಿ ಇತರರು ಇದ್ದರು.