ಎಚ್‌ಡಿಕೆ ಭಾಮೈದ ಹೆಸರಿಗೆ ನೋಂದಣಿ, ಅತ್ತೆಯ ಹೆಸರಿಗೆ ಡಿನೋಟಿಫಿಕೇಶನ್‌ : ಸಿಎಂ ಸಿದ್ದರಾಮಯ್ಯ

| Published : Sep 21 2024, 07:47 AM IST / Updated: Sep 21 2024, 07:48 AM IST

Siddaramaiah

ಸಾರಾಂಶ

ಬೆಂಗಳೂರಿನ ಗಂಗೇನಹಳ್ಳಿ ಸರ್ಕಾರಿ ಜಾಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಅತ್ತೆ ಹೆಸರಿಗೆ ಡಿನೋಟಿಫೈ ಆಗಿದ್ದು, ಭಾಮೈದನ ಹೆಸರಿಗೆ ರಿಜಿಸ್ಟರ್‌ ಆಗಿದೆ. 

ಮೈಸೂರು :  ಬೆಂಗಳೂರಿನ ಗಂಗೇನಹಳ್ಳಿ ಸರ್ಕಾರಿ ಜಾಗ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಅತ್ತೆ ಹೆಸರಿಗೆ ಡಿನೋಟಿಫೈ ಆಗಿದ್ದು, ಭಾಮೈದನ ಹೆಸರಿಗೆ ರಿಜಿಸ್ಟರ್‌ ಆಗಿದೆ. ಈ ಪ್ರಕರಣದ ಲೋಕಾಯುಕ್ತ ತನಿಖೆಯಲ್ಲಿ ವಿಳಂಬವಾಗಲು ಕಾರಣವೇನು ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಪ್ರಕರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬೆಲೆಬಾಳುವಂಥದ್ದು. ಅಧಿಕಾರಿಗಳು ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಹೇಳಿದರೂ ಆ ಸರ್ಕಾರಿ ಜಮೀನು ಕುಮಾರಸ್ವಾಮಿ ಸಂಬಂಧಿಕರಿಗೆ ಡಿನೋಟಿಫೈ ಆಗಿದೆ. ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ ಮಾತನಾಡುತ್ತೇನೆ ಎಂದರು.

ಇದೇ ವೇಳೆ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಈ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021ರಿಂದ ಲೋಕಾಯುಕ್ತದವರು ತನಿಖೆ ನಡೆಸಿಲ್ಲ. ಈ ಕುರಿತು ದಾಖಲೆಗಳನ್ನು ಪರಿಶೀಲಿಸುತ್ತೇವೆ ಎಂದರು.

ಇದೇ ವೇಳೆ ನಾವು ಯಾರ ಮೇಲೂ ಸುಖಾಸುಮ್ಮನೆ ಆರೋಪ ಹೊರಿಸುವ ಕೆಲಸ ಮಾಡಿಲ್ಲ ಎಂದ ಮುಖ್ಯಮಂತ್ರಿ, ಕುಮಾರಸ್ವಾಮಿಯವರದು ಹಿಟ್ ಆ್ಯಂಡ್‌ ರನ್ ಕೇಸ್‌. ಅವರು ತಾವು ಮಾಡುವ ಯಾವುದೇ ಆರೋಪಕ್ಕೆ ತಾರ್ಕಿಕ ಅಂತ್ಯ ಕಾಣಿಸುವುದೇ ಇಲ್ಲ. ಅವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಯಾವುದೇ ಹೇಳಿಕೆ ನೀಡುವಾಗ ವಿಷಯದ ಸತ್ಯಾಸತ್ಯತೆ ಅರಿತು ಮಾತನಾಡಬೇಕು ಎಂದು ಹೇ‍ಳಿದರು.

ಅಧಿಕಾರಿಗಳು ಬೇಡ ಅಂದರೂ ಡಿನೋಟಿಫೈ

ಸಚಿವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬೆಲೆಬಾಳುವಂಥದ್ದು. ಅಧಿಕಾರಿಗಳು ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಹೇಳಿದರೂ ಆ ಸರ್ಕಾರಿ ಜಮೀನು ಕುಮಾರಸ್ವಾಮಿ ಸಂಬಂಧಿಕರಿಗೆ ಡಿನೋಟಿಫೈ ಆಗಿದೆ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ವಿರುದ್ಧದ 2021ರ ಈ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಲೋಕಾಯುಕ್ತದವರು ತನಿಖೆ ನಡೆಸದ ಬಗ್ಗೆ ಪರಿಶೀಲನೆ ಮಾಡುತ್ತೇವೆ.

- ಸಿದ್ದರಾಮಯ್ಯ ಮುಖ್ಯಮಂತ್ರಿ